ಚೆನ್ನೈ: ಬಹುಮತ ಕಳೆದುಕೊಂಡ ಕಾಂಗ್ರೆಸ್ ನೇತೃತ್ವದ ಸರಕಾರ
ಚೆನ್ನೈ: ಶಾಸಕ ಎ. ಜಾನ್ ಕುಮಾರ್ ಅವರು ತನ್ನ ರಾಜೀನಾಮೆಯನ್ನು ಸ್ವೀಕರ್ ಐಪಿ. ಶಿವಕೂಲುಂತು ಅವರಿಗೆ ಸಲ್ಲಿಸಿರುವುದರಿಂದ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಸರಕಾರ ಮಂಗಳವಾರ ಬಹುಮತ ಕಳೆದುಕೊಂಡಿದೆ. ಒಟ್ಟು 33 ಸದಸ್ಯ ಬಲದ ಪುದುಚೇರಿ ವಿಧಾನಸಭೆಯಲ್ಲಿ ಈ ಬೆಳವಣಿಗೆಯಿಂದಾಗಿ ಆಡಳಿತಾರೂಢ ಕಾಂಗ್ರೆಸ್-ಡಿಎಂಕೆ ಮೈತ್ರಿ ಹಾಗೂ ಎಐಡಿಎಂಕೆ-ಬಿಜೆಪಿ ಮೈತ್ರಿ ತಲಾ 14 ಶಾಸಕರನ್ನು ಹೊಂದುವಂತೆ ಆಗಿದೆ.
ಪುದುಚೇರಿ ವಿಧಾನಸಭೆಯಲ್ಲಿ ಪ್ರಸ್ತುತ ಮೂವರು ನಾಮನಿರ್ದೇಶಿತ ಶಾಸಕರು ಸೇರಿದಂತೆ ಒಟ್ಟು 28 ಸಕ್ರಿಯ ಶಾಸಕರಿದ್ದಾರೆ. ಕಾಂಗ್ರೆಸ್-ಡಿಎಂಕೆಯ ಆಡಳಿತಾರೂಢ ಮೈತ್ರಿಯಲ್ಲಿ ಮೂವರು ಡಿಎಂಕೆ ಶಾಸಕರು, ಓರ್ವ ಸ್ವತಂತ್ರ ಶಾಸಕ ಹಾಗೂ 10 ಕಾಂಗ್ರೆಸ್ ಶಾಸಕರಿದ್ದಾರೆ. ಪ್ರತಿಪಕ್ಷವಾದ ಎಐಡಿಎಂಕೆ-ಬಿಜೆಪಿ ಮೈತ್ರಿಯಲ್ಲಿ ಬಿಜೆಪಿಯ ಮೂವರು ನಾಮನಿರ್ದೇಶಿತ ಶಾಸಕರು. ಎನ್.ಆರ್, ಕಾಂಗ್ರೆಸ್ನ 7 ಶಾಸಕರು ಹಾಗೂ ಎಐಎಡಿಎಂಕೆಯ 4 ಶಾಸಕರು ಇದ್ದಾರೆ.
ಈ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ. ಅಲ್ಲದೆ, ನಾರಾಯಣ ಸ್ವಾಮಿ ಅವರ ಸರಕಾರ ಈಗಾಗಲೇ ಅಲ್ಪಮತಕ್ಕೆ ಕುಸಿದಿದೆ ಎಂದು ಹೇಳಿವೆ. ಜಾನ್ ಕುಮಾರ್ ಅವರು ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದ ಹಿನ್ನೆಲೆಯಲ್ಲಿ ಕುಮಾರ್ ಅವರು ಆಡಳಿತಾರೂಢ ಕಾಂಗ್ರೆಸ್-ಡಿಎಂಕೆ ಮೈತ್ರಿ ಸರಕಾರಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹರಡಿತ್ತು. ಈ ಹಿಂದೆ ತನ್ನ ರಾಜೀನಾಮೆ ಪತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಆರೋಗ್ಯ ಸಚಿವ ಮಲ್ಲಾದಿ ಕೃಷ್ಣ ರಾವ್ ಸಂಪುಟ ಸದಸ್ಯನ ಸ್ಥಾನವನ್ನು ತ್ಯಜಿಸಿದ ದಿನದ ಬಳಿಕ ಜಾನ್ ಕುಮಾರ್ ರಾಜೀನಾಮೆ ನೀಡಿದ್ದಾರೆ.