ಕೋಲ್ಕತಾ: ಗೋಮೂತ್ರ ಸೇವಿಸಿದ ಬಿಜೆಪಿ ಕಾರ್ಯಕರ್ತ ಆಸ್ಪತ್ರೆಗೆ ದಾಖಲಾದ ಘಟನೆಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಕೊರೊನಾ ವೈರಸ್ ಅನ್ನು ತಡೆಯುತ್ತದೆ ಎಂಬ ನಿಟ್ಟಿನಲ್ಲಿ ಕೊಲ್ಕತಾದಲ್ಲಿ ಗೋಮೂತ್ರ ಸಭೆ ನಡೆದಿತ್ತು. ಇದರಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ಗೋಮೂತ್ರ ಕುಡಿದಿದ್ದ. ನಂತರ ಅನಾರೋಗ್ಯ ಕಾಡಿದ ಈತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಗೆ ಸಂಬಂಧಿಸಿ ನಾರಾಯಣ ಚಟರ್ಜಿ ಎಂಬ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಕೊರೊನಾ ವೈರಸ್ ಪ್ರತಿರೋಧ ಎಂದು ಗೋಮೂತ್ರ ಸಭೆ ಆಯೋಜನೆಗೊಂಡಿತ್ತು ಎಂದು ಆಸ್ಪತ್ರೆಗೆ ದಾಖಲಿಸಿದ ಕಾರ್ಯಕರ್ತ ಪೊಲೀಸರಿಗೆ ತಿಳಿಸಿದ್ದಾನೆ. ಇದೇವೇಳೆ ಬಿಜೆಪಿಯ ಪಶ್ಚಿಮ ಬಂಗಾಳ ರಾಜ್ಯ ನಾಯಕರು ಚಟರ್ಜಿ ಬಂಧನವನ್ನು ವಿರೋಧಿಸಿ ರಂಗಪ್ರವೇಶಿಸಿದ್ದಾರೆ. ಚಟರ್ಜಿ ದನದ ಮೂತ್ರ ಎಂದು ಎಲ್ಲರಿಗೂ ಕೊಟ್ಟಿದ್ದ. ಅದನ್ನು ಕುಡಿಯಲು ಯಾರನ್ನೂ ಒತ್ತಾಯಿಸಿಲ್ಲ. ಗೋಮೂತ್ರ ದೇಹಕ್ಕೆ ದೋಷಕರ ಎಂದು ಸಾಬೀತಾಗಿಲ್ಲ. ಕಾರಣವಿಲ್ಲದೆ ಆತನನ್ನು ಬಂಧಿಸಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಾಯಂದನ್ ಬಸು ಹೇಳಿದರು.
ಕೃಪೆ:ಸನ್ಮಾರ್ಗ