ಬಳ್ಳಾರಿ: ಉದ್ಯೋಗ ಮೇಳಗಳಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಯುವ ಪೀಳಿಗೆಯ ಬೆಳವಣಿಗೆಗೆ ಉತ್ತಮ ಅವಕಾಶಗಳು ಸಿಗುತ್ತವೆ, ಇಂತಹ ಉದ್ಯೋಗ ಮೇಳಗಳು ಇನ್ನು ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು ಯುವ ಮುಖಂಡರಾದ ಸಂದೀಪ್ ಸಿಂಗ್ ಅವರು ಹೇಳಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಶ್ರೀ ಶಂಕರ್ ಆನಂದ್ ಸಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಎನ್.ಸಿ.ಎಸ್. ಅಡಿಯಲ್ಲಿ ಹೊಸಪೇಟೆಯ ಶ್ರೀ ಶಂಕರ್ ಆನಂದ್ ಸಿಂಗ್ ಕಾಲೇಜಿನಲ್ಲಿ ಬುಧವಾರ ನಡೆದ ಉದ್ಯೋಗ ಮೇಳದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನತೆಗೆ ಉದ್ಯೋಗದ ಅವಶ್ಯಕತೆಯಿದೆ, ಅವರ ಬದುಕು ಕಟ್ಟಿಕೊಳ್ಳಲು ಉದ್ಯೋಗವು ನೆರವಾಗಲಿದೆ. ಈ ನಿಟ್ಟಿನಲ್ಲಿ ಇಂತಹ ಉದ್ಯೋಗ ಮೇಳಗಳು ಇಲ್ಲಿಗೆ ಸೀಮಿತವಾಗದೆ ನಿರಂತರವಾಗಿ ನಡೆಯಲಿ ಎಂದು ತಿಳಿಸಿದರು.
ಉದ್ಯೋಗ ಮೇಳದಲ್ಲಿ 19 ಖಾಸಗಿ ಕಂಪನಿಗಳು ಭಾಗಿಯಾಗಿದ್ದವು. 617 ಪುರುಷರು ಮತ್ತು 352 ಮಹಿಳೆಯರನ್ನು ಒಳಗೊಂಡಂತೆ ಒಟು 969 ಜನರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 110 ಜನರನ್ನು ಆಯ್ಕೆ ಮಾಡಿಕೊಳ್ಳಲಾಯಿತು.