ಕಾರವಾರ: ಉತ್ತರಕನ್ನಡ ಜಿಲ್ಲೆಯಿಂದ 967 ವಲಸೆ ಕಾರ್ಮಿಕರನ್ನು ಹೊತ್ತು ಪಶ್ಚಿಮ ಬಂಗಾಳಕ್ಕೆ ಮೊದಲ ಶ್ರಮಿಕ ರೈಲು ಸೋಮವಾರ ಪ್ರಯಾಣ ಬೆಳಿಸಿತು.
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರ ಕೋರಿಕೆಯ ಮೇರೆಗೆ ಕೊಂಕಣ ರೈಲ್ವೆ ನಿಗಮವು ಕಾರವಾರ ರೈಲು ನಿಲ್ದಾಣದಿಂದ ಶ್ರಮಿಕ್ ವಿಶೇಷ ರೈಲನ್ನು ಬಿಟ್ಟಿದೆ. ಈ ರೈಲಿನಲ್ಲಿ ಕಾರವಾರದಿಂದ 967 ಪ್ರಯಾಣಿಕರು ತೆರಳಿದರೆ, ಉಡುಪಿಯಿಂದ 250 ಹಾಗೂ ಮಂಗಳೂರಿನಿಂದ 72 ಕಾರ್ಮಿಕರನ್ನು ಸೇರಿದಂತೆ ಒಟ್ಟು 1,289 ಮಂದಿಯನ್ನು ಪಶ್ಚಿಮ ಬಂಗಾಳದ ಪುರುಲುವಾ ಜಂಕ್ಷನ್ ಗೆ ಕರೆದೊಯ್ಯುತ್ತಿದೆ.
ಈ ಸಂದರ್ಭದಲ್ಲಿ ಕೊಂಕಣ ರೈಲ್ವೆ ನಿಗಮದ ಕಾರವಾರ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ.ನಿಕಮ್, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹಾಜರಿದ್ದು, ಕಾರ್ಮಿಕರಿಗೆ ಸುರಕ್ಷಿತ ಪ್ರಯಾಣಕ್ಕೆ ಶುಭ ಹಾರೈಸಿದರು.