ಹುಬ್ಬಳ್ಳಿ:ರಾಜ್ಯದಲ್ಲಿ ಕಟ್ಟಡ ನಿರ್ಮಾತೃಗಳಿಂದ 8000 ಕೋಟಿ ಕಟ್ಟಡ ಕಾರ್ಮಿಕರ ಉಪಕರ ಸಂಗ್ರಹವಾಗಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಡಳಿ ವತಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ನಿಧಿ ಬಳಕೆ ಮಾಡಲಾಗುವುದು ಎಂದು ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯ ಹೋಟೆಲ್ ಕ್ಲಾರ್ಕ್ ಇನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಿರ್ಮಾತೃಗಳು ಹಾಗೂ ಗುತ್ತಿಗಾದಾರರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಮಹಾರಾಷ್ಟ್ರ ರಾಜ್ಯದ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ಕಾರ್ಮಿಕ ಉಪಕರ ಸಂಗ್ರಹವಾಗಿದೆ. ಸುಪ್ರಿಂ ಕೋರ್ಟ ನಿರ್ದೇಶನದಂತೆ ಸಂಗ್ರಹವಾದ ಉಪಕರವನ್ನು ಕಾರ್ಮಿಕ ಕಲ್ಯಾಣ ಯೋಜನೆಗಳಿಗೆ ಬಳಸಲಾಗುವುದು. ರಾಜ್ಯದಲ್ಲಿ 20 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. ಇದುರವರೆಗೆ ಮಂಡಳಿಯಿಂದ 500 ಕೋಟಿ ರೂಪಾಯಿಗಳನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗಿದೆ. ರಾಜ್ಯದ್ಯಂತ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.
ಮಂಡಳಿಯ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯಿಲ್ಲ. ಬಹುತೇಕ ಅಸಂಘಟಿತ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ನಿರ್ಮಾತೃಗಳು ಹಾಗೂ ಗುತ್ತಿಗೆದಾರರು ತಮ್ಮ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ತಪ್ಪದೇ ನೋಂದಣಿ ಮಾಡಿಸಬೇಕು. ರಾಜ್ಯದಲ್ಲಿ 21,19,399 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಒಂದು ವರ್ಷದಲ್ಲಿ 90 ದಿನಗಳ ಕಾಲ ಕಟ್ಟಡ ಕಾರ್ಮಿಕ ಕೆಲಸದಲ್ಲಿ ತೊಡಗಿರುವರು ಸೇವಾ ಸಿಂಧೂ ಅಂತರ್ಜಾಲ ಪುಟದ ಮೂಲಕ, ಫಾರಂ 05 ರಡಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಒಮ್ಮೆ ನೋಂದಣಿ ಮಾಡಿದರೆ 3 ವರ್ಷಗಳ ಕಾಲ ನೋಂದಣಿ ಅಸ್ತಿತ್ವದಲ್ಲಿ ಇರುತ್ತದೆ. ನಂತರ ನೋಂದಣಿ ನವೀಕರಿಸಬೇಕು.
ಮಂಡಳಿಯ ಕೆಲವು ನಿಯಮಾವಳಿಗೆ ತಿದ್ದುಪಡಿ ತರಲಾಗಿದ್ದು, ಕಾರ್ಮಿಕರು ನಿರ್ಮಾಣ ಸ್ಥಳದಲ್ಲಿ ಮೃತಪಟ್ಟರೆ 2 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ವಿತರಿಸಲಾಗುವುದು. ಮಂಡಳಿಯಲ್ಲಿ ಶೈಕ್ಷಣಿಕ, ಮದುವೆ ಅಂತ್ಯ ಸಂಸ್ಕಾರ, ವೈದ್ಯಕೀಯ, ಅಪಘಾತ, ಹೆರಿಗೆ, ಉಪಕರಣ ಖರೀಧಿ ಸಾಲ, ಪಿಂಚಣಿ, ಅನಿಲ ಭಾಗ್ಯ, ಸೇರಿದಂತೆ 15 ಸಾಮಾಜಿಕ ಕಲ್ಯಾಣ ಹಾಗೂ ಭದ್ರತಾ ಯೋಜನೆಗಳಿವೆ.
ಮಂಡಳಿ ವತಿಯಿಂದ ಕಾರ್ಮಿಕ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿದ್ದ 5 ಲಕ್ಷ ರೂಪಾಯಿಗಳ ಯೋಜನೆಯನ್ನು ರದ್ದು ಪಡಿಸಲಾಗಿದೆ. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 2022ರ ವೇಳಗೆ ಸರ್ವರಿಗೂ ಸೂರು ಯೋಜನೆ ಅನುಷ್ಠಾನಗೊಳಿಸಿರುವುದರಿಂದ ಮಂಡಳಿಯಿಂದ ಯೋಜನೆ ಕೈಬಿಡಲಾಗಿದೆ. ಕಾರ್ಮಿಕ ಇಲಾಖೆಯಿಂದ ಮಂಡಳಿಯನ್ನು ಬೇರ್ಪಡಿಸಲಾಗಿದೆ. ಇದರಿಂದ ಹೆಚ್ಚಿನ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.
*ಕಟ್ಟಡ ಕುಸಿತದಲ್ಲಿ ಮರಣಿಸಿದವರಿಗೆ ಪರಿಹಾರ ಧನದ ಚಕ್ ವಿತರಣೆ*
ಇದೇ ಸಂದರ್ಭದಲ್ಲಿ ಕಳೆದ ಮಾರ್ಚ್ 19ರಂದು ಧಾರವಾಡದ ಕುಮಾರೇಶ್ವರ ನಗರದಲ್ಲಿ ಸಂಭವಿಸಿದ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವಿಗೀಡಾದ ಕಟ್ಟಡ ಕಾರ್ಮಿಕರಾದ ಸಲೀಂಶಾ ಮ ಮಕಾಂದಾರ, ಮಹಬೂಬಸಾಬ ಗ ದೇಸಾಯಿ, ಮಹಬೂಬಸಾಬ ಬಡೇಸಾಬ ರಾಯಚೂರ, ವಾಘು ವಿಠ್ಠಲ ರೋಖೆ, ಜಹಾಂಗೀರಸಾಬ ಹರಿಹರ, ನವಲುದಾಡು ಅವರ ಕುಟುಂಬದವರೆಗೆ, ತಲಾ 2 ಲಕ್ಷ ರೂಪಾಯಿಗಳ ಪರಿಹಾರ ಧನದ ಚಕ್ ವಿತರಿಸಲಾತು.
ಈ ಸಂದರ್ಭದಲ್ಲಿ ಕ್ರಡಾಯ್ ಅಧ್ಯಕ್ಷ ಸರೇಸ್, ಬೆಳಗಾವಿ ವಲಯದ ಉಪ ಕಾರ್ಮಿಕ ಆಯುಕ್ತ ವೆಂಕಟೇಶ್, ಸಹಾಯಕ ಕಾರ್ಮಿಕ ಆಯುಕ್ತರುಗಳಾದ ಮೀನಾ ಪಾಟೀಲ, ಅನುರಾಧ, ಗೋವಿಂದರಾಜ ಕುಲಕರ್ಣಿ ರಾಮ ಮೋಹನ್ ಅಯ್ಯರ್ ಸೇರಿದಂತೆ ಇತರೆ ನಿರ್ಮಾತೃಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.