ಉಡುಪಿ: ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ. ಕೇರಳದಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ 72 ತಾಸಿನ ಒಳಗಿನ ಕೋವಿಡ್ ನೆಗೆಟಿವ್ ವರದಿಯನ್ನು ತರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ.
ವಾರಾಂತ್ಯ ಕರ್ಥ್ಯ ಕುರಿತು ಕರೆದ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು.
ಆರ್ಟಿಪಿಸಿಆರ್ ನೆಗೆಟಿವ್ ವರದಿ ತಂದ ಬಳಿಕವೂ ಇಲ್ಲಿ ಒಂದು ವಾರ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡ ಬೇಕು. ಹಾಗೂ ಕೊನೆಗೆ ಮತ್ತೆ ಕೋವಿಡ್ ಆರ್ಟಿಪಿಸಿಆರ್ ಪರೀಕ್ಷೆಗೊಳಪಡಬೇಕು ಎಂದರು.
ಅದೇ ಮಹಾರಾಷ್ಟ್ರದಿಂದ ಬರುವವರಿಗೆ 72 ಗಂಟೆಯೊಳಗಿನ ಕೋವಿಡ್-19 ನೆಗೆಟಿವ್ ವರದಿ ಇದ್ದರೆ ಜಿಲ್ಲೆಯನ್ನು ಪ್ರವೇಶಿ ಸಲು ಅನುಮತಿ ನೀಡಲಾಗುತ್ತದೆ. ಅವರಿಗೆ ಕ್ವಾರಂಟೈನ್ ಅಗತ್ಯವಿಲ್ಲ ಎಂದು ಕೂರ್ಮಾ ರಾವ್ ಸ್ಪಷ್ಟಪಡಿಸಿದರು.
ಜಿಲ್ಲೆಗೆ ಸಾಕಷ್ಟು ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ ಬಳಿಕ ಪಾಸಿಟಿವ್ ವರದಿ ಬಂದ ನಂತರವೇ ಎಲ್ಲರಂತೆ ಓಡಾಬಹುದು ಎಂದು ಅವರು ತಿಳಿಸಿದರು.
ವೀಕೆಂಡ್ ಕರ್ಪೂ ಜಾರಿ: ಸಾಕಷ್ಟು ಜನರ ಹಾಗೂ ಶಾಸಕರ ಆಕ್ಷೇಪ ಹಾಗೂ ಅಸಮಧಾನಗಳ ನಡುವೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಜಿಲ್ಲೆಯಲ್ಲಿ ವೀಕೆಂಡ್ ಕಪೂ ಜಾರಿಯಾಗಿದೆ. ಕಳೆದ 14 ದಿನಗಳಲ್ಲಿ ಜಿಲ್ಲೆಯ ಪಾಸಿಟಿವಿಟಿ ದರ ಶೇ.1.54 ಇದ್ದು, ಕಳೆದ 7 ದಿನಗಳಲ್ಲಿ ಇಂದು 1.27 ಆಗಿದೆ. ಆದರೂ ರಾಜ್ಯ ಸರಕಾರ ಕೆಲವು ಮಾರ್ಗಸೂಚಿಗಳ ಆಧಾರದಲ್ಲಿ ಇತರ ಮೂರು ಜಿಲ್ಲೆಗಳೊಂದಿಗೆ ಉಡುಪಿಯಲ್ಲೂ ವಾರಾಂತ್ಯ ಕರ್ಪ್ಯೂ ಹೇರಲು ನಿರ್ಧರಿಸಿದೆ. ಇದನ್ನು ನಾವು ಪಾಲಿಸಲೇಬೇಕಾಗಿದೆ. ಈ ಮಾರ್ಗಸೂಚಿ ಗಳು ಸೆ.13ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ರಾಜ್ಯದ ಪಾಸಿಟಿವಿಟಿಗೆ ಹೋಲಿಸಿದರೆ, ಜಿಲ್ಲೆಯ ಪಾಸಿಟಿವಿಟಿ ದರ ಹೆಚ್ಚಿದೆ. ಹೀಗಾಗಿ ನಾವೂ ಜಿಲ್ಲೆಯ ಪಾಸಿಟಿವಿಟಿ ದರವನ್ನು ಕಡಿಮೆಗೊಳಿಸಬೇಕಿದೆ. ಸರಕಾರದ ಹೊಸ ಕೋವಿಡ್ ಮಾನ ದಂಡದ ಪ್ರಕಾರ ಈ ಆದೇಶ ಜಾರಿಗೊಂಡಿದೆ. ಮುಂದೆ ಈ ನಿಯಮಾವಳಿ ಪರಿಷ್ಕರಣೆ ಆಗಲಿದೆ ಎಂದರು.
ವಾರಾಂತ್ಯ ಕರ್ಪೂ ವೇಳೆ ಅಗತ್ಯ ವಸ್ತು ಮತ್ತು ಸೇವೆಗಳಿಗೆ ನಾಳೆ ಮತ್ತು ನಾಡಿದ್ದು ಬೆಳಗ್ಗೆ 5ರಿಂದ ಮದ್ಯಾಹ್ನ 2ರವರೆಗೆ ಕಾಲಾವಕಾಶ ಇದೆ. ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಪೂ ಜಾರಿಗೊಂಡಿದ್ದು, ಹೆಚ್ಚುವರಿಯಾಗಿ ನಮ್ಮ ಜಿಲ್ಲೆಯನ್ನೂ ಸೇರಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಇದು ಜಾರಿಯಲ್ಲಿರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಪಂ ಸಿಇಒ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್ ಹಾಗೂ ಎಡಿಸಿ ಸದಾಶಿವ ಪ್ರಭು ಉಪಸ್ಥಿತರಿದ್ದರು.