ಭಟ್ಕಳ: ಏ.1ರಿಂದ ತಾಲೂಕಿನ ವಿವಿಧ 7 ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೂ ಕೊರೊನಾ ತಡೆ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಭಟ್ಕಳ, ಮುರುಡೇಶ್ವರ ಸರಕಾರಿ ಆಸ್ಪತ್ರೆ ಮಾತ್ರವಲ್ಲದೇ ಶಿರಾಲಿ, ಬೆಳಕೆ, ಕೋಣಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಸಾರ್ವಜನಿಕರಿಗೆ ಲಸಿಕೆಯನ್ನು ನೀಡಲಾಯಿತು. ದೂರದ ಪ್ರಯಾಣವನ್ನು ತಪ್ಪಿಸಲು ಹಾಡುವಳ್ಳಿ ಉಪ ಆರೋಗ್ಯ ಕೇಂದ್ರದಲ್ಲಿಯೂ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇತ್ತ ಜಾಲಿಯ ಆಯುಷ್ ಕೇಂದ್ರಕ್ಕೂ ಜನರು ಆಗಮಿಸಿ ಲಸಿಕೆ ಹಾಕಿಸಿಕೊಂಡರು. ಪ್ರತಿ ಆರೋಗ್ಯ ಕೇಂದ್ರದಲ್ಲಿಯೂ ಲಸಿಕೆ ವಿತರಣೆ ಕಾರ್ಯಕ್ಕೆ ಆರೋಗ್ಯ ಇಲಾಖೆಯ ವತಿಯಿಂದ ತಲಾ 5 ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್, ಲಸಿಕೆ ವಿತರಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನಜಾಗೃತಿಯನ್ನು ಮೂಡಿಸಲಾಗುತ್ತಿದೆ, 45 ವರ್ಷ ಮೇಲ್ಪಟ್ಟವರೆಲ್ಲರೂ ಸಮೀಪದ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆಯಬಹುದಾಗಿದೆ, ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ವಿನಂತಿಸಿಕೊಂಡರು.