ಭಟ್ಕಳದ ಯುವಕನಿಗೆ ಕೊರೊನಾ ಸೋಂಕು ದೃಢ
ಭಟ್ಕಳ: ಕಳೆದ ಮಾ.19ರಂದು ದುಬೈನಿಂದ ಮಂಗಳೂರಿಗೆ ಬಂದಿಳಿದಿದ್ದ 22 ವರ್ಷ ಪ್ರಾಯದ ಭಟ್ಕಳ ಶಿರಾಲಿ ಫಳ್ಳಿಹಕ್ಕಲ್ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಈತನನ್ನು ಏರ್ಪೋರ್ಟನಲ್ಲಿ ತಪಾಸಣೆಗೆ ಒಳಪಡಿಸಿದ ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತ ಪ್ರಯಾಣಿಸಿದ್ದ ವಿಮಾನದಲ್ಲಿದ್ದ 165 ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು, ಅವರೆಲ್ಲರನ್ನೂ ತಪಾಸಣೆಗೆ ಒಳಪಡಿಸುವಂತೆ ಮಂಗಳೂರು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶಿಸಿದ್ದಾರೆ.
ಕೊರೊನಾ ಸೋಂಕಿತ ಯುವಕನನ್ನು ಭಟ್ಕಳಕ್ಕೆ ಕರೆ ತರಲು ಮಂಗಳೂರಿಗೆ ಹೋಗಿದ್ದ ಆತನ ಸಂಬಂಧಿಕರೋರ್ವರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ನಿರ್ಬಂಧಿಸಿ ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಟ್ಕಳದ ಯುವಕನಿಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆಯೇ ಇಲ್ಲಿನ ಜನರು ಹೌಹಾರಿದ್ದು, ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಭಟ್ಕಳ ಸಹಾಯಕ ಆಯುಕ್ತ ಭರತ್, ಜಿಲ್ಲಾ ವೈದ್ಯಾಧಿಕಾರಿ ಅಶೋಕ ಉಪಸ್ಥಿತಿಯಲ್ಲಿ ವೈದ್ಯಾಧಿಕಾರಿಗಳ ತುರ್ತು ಸಭೆ ನಡೆಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಜರುಗಿಸಲಾಗಿದೆ.
ಆತನೊಂದಿಗೆ ಭಟ್ಕಳದ ಏಳು:
ದುಬೈನಿಂದ ಮಂಗಳೂರಿಗೆ ಬಂದಿದ್ದ ಈತನೊಂದಿಗೆ ಭಟ್ಕಳದ ಏಳು ಜೊತೆಯಲ್ಲಿ ಇದ್ದು, ಅವರೆಲ್ಲರೂ ಭಟ್ಕಳಕ್ಕೆ ಆಗಮಿಸಿದ್ದಾರೆ. ಈಗಾಗಲೇ ಅವರ ವಿಳಾಸವನ್ನು ಪತ್ತೆ ಹಚ್ಚಲಾಗಿದ್ದು, ಅವರಲ್ಲಿ ಯಾವುದೇ ಸೋಂಕಿನ ಲಕ್ಷಣ ಕಂಡು ಬಂದಿಲ್ಲವಾದುದರಿಂದ ಕ್ವಾರೆಂಟೈನಲ್ಲಿ ಇಡಲಾಗಿದೆ.
ಭಟ್ಕಳದ ನಿವಾಸಿಗಳು ಯಾವುದೇ ಕಾರಣದಿಂದ ಭಯ ಪಡುವ ಅಗತ್ಯ ಇಲ್ಲ ಎಂದು ಭಟ್ಕಳ ಸಹಾಯಕ ಆಯುಕ್ತ ಭರತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿದೇಶದಿಂದ ಬಂದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲಾಗಿದ್ದು, ಕ್ವಾರೆಂಟೈನ್ ಅವಧಿಗೂ ಮೊದಲೇ ಅಡ್ಡಾಡುತ್ತಿದ್ದ ಮಾಹಿತಿ ಸಿಕ್ಕಲ್ಲಿ ಕೂಡಲೇ ಸಾರ್ವಜನಿಕರು ಸಹಾಯವಾಣಿಯನ್ನು ಸಂಪರ್ಕಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ವಿನಂತಿಸಿಕೊಂಡಿದ್ದಾರೆ. ಡಿಎಚ್ಓ ಅಶೋಕ, ಭಟ್ಕಳ ತಹಸೀಲ್ದಾರ ವಿ.ಪಿ.ಕೊಟ್ರಳ್ಳಿ, ಭಟ್ಕಳ ಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಭಟ್ಕಳದಲ್ಲಿದ್ದ ಮೂವರೂ ನೆಗೆಟಿವ್ :
ಕಳೆದ ಕೆಲ ದಿನಗಳಿಂದ ಕೊರೊನಾ ಶಂಕಿತರಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮೂವರ ರಕ್ತ ಹಾಗೂ ಗಂಟಲಿನ ದ್ರವ ಲೇಪನದ ವರದಿಗಳು ಆರೋಗ್ಯಾಧಿಕಾರಿಗಳ ಕೈ ಸೇರಿದ್ದು, ನೆಗೆಟಿವ್ ವರದಿ ಬಂದಿದೆ ಎಂಬ ಮಾಹಿತಿ ಲಭಿಸಿದೆ. ಅಷ್ಟರಮಟ್ಟಿಗೆ ಭಟ್ಕಳದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.