ಭಟ್ಕಳದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಭಟ್ಕಳ: ಯೋಗ ದಿನಾಚರಣೆಯ ಅಂಗವಾಗಿ ಇಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್. ಎಸ್. ಎಸ್. ವಿದ್ಯಾರ್ಥಿಗಳು ಯೋಗ ಜಾಗೃತಿ ಜಾಥಾ ಹಮ್ಮಿಕೊಳ್ಳುವ ಮೂಲಕ ಜನಸಾಮಾನ್ಯರಲ್ಲಿ ಕೂಡಾ ಯೋಗದ ಕುರಿತು ಅರಿವು ಮೂಡಿಸುವಂತೆ ಮಾಡಿದರು.
ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಿಂದ ಹೊರಟ ಎನ್.ಎಸ್.ಎಸ್. ತಂಡ ಹುರುಳಿಸಾಲ್, ಅಮಿತಾ ಆಸ್ಪತ್ರೆ, ಸಾಗರ ರಸ್ತೆ, ಶಂಶುದ್ಧೀನ್ ಸರ್ಕಲ ಮೂಲಕ ರಾಷ್ಟ್ರೀಯ ಹೆದ್ದಾರಿಯಾಗಿ ಪುನಹ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ದಸ್ತಗೀರ್ ಡಿ. ಹಲ್ಯಾಳ್, ಭಾಗೀರಥಿ ನಾಯ್ಕ, ಸುಮಾ ನಾಯ್ಕ, ಸುಚಿತ್ರ, ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ವೈಶಾಲಿ ಜಿ.ಆರ್., ಮುಂತಾದವರು ಭಾಗವಹಿಸಿದ್ದರು.
ಶಿರಾಲಿಯಲ್ಲಿ ವಿಶ್ವ ಯೋಗ ದಿನಾಚರಣೆ: ಶಿರಾಲಿಯ ಸಿದ್ಧಾರ್ಥ ಪದವಿ ವiಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಉಪನ್ಯಾಸಕ ಹಾಗೂ ಯೋಗಪಟು ಅಶೋಕ ಹೆಗಡೆ ಅವರು ಯೋಗದ ಕುರಿತು ವಿವರಣೆಯನ್ನು ನೀಡುತ್ತಾ ವಿವಿಧ ಆಸನಗಳನ್ನು ಪರಿಚಯಿಸಿದರು. ಯೋಗದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮದ ಕುರಿತೂ ಅವರು ವಿವರಿಸಿದರು. ಅಷ್ಟಾಂಗ ಯೋಗದ ಪ್ರಾತ್ಯಕ್ಷಿತೆಯನ್ನು ಮಾಡಿ ತೋರಿಸಿದ ಅವರು ಅದರಿಂದ ನಮ್ಮ ದೇಹದ ಮೇಲಾಗುವ ಪರಿಣಾಮಗಳನ್ನು ಕೂಡಾ ಅತ್ಯಂತ ಸರಳವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಗಳು ಹಾಗೂ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
ಪತಂಜಲಿ ಯೋಗ ಪೀಠ: ವಿಶ್ವಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಪೀಠ ಹರಿದ್ವಾರ ಮತ್ತು ಅಮಿತಾಕ್ಷ ಯೋಗಕೇಂದ್ರ ಭಟ್ಕಳ ಇದರ ಸಹಯೋಗದೊಂದಿಗೆ ಪಟ್ಟಣದ ನ್ಯೂ ಇಂಗ್ಲೀಷ ಸ್ಕೂಲನ ಕಮಲಾವತಿ ರಾಮನಾಥ ಶ್ಯಾನಭಾಗ ಸಭಾಗೃಹದಲ್ಲಿ ಯೋಗಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಯೋಗ ಗುರು ಡಾ. ಪಾಂಡುರಂಗ ನಾಯಕ ಮಾತನಾಡಿ ಪ್ರತಿದಿನ ಯೋಗ ಮಾಡುವದರಿಂದ ಜೀವನದಲ್ಲಿ ಹೊಸ ಉಲ್ಲಾಸ ಮೂಡುತ್ತದೆ. ಹಲವಾರು ರೋಗಗಳು ದೂರವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಿಯಮಿತ ಯೋಗಭ್ಯಾಸದಿಂದ ಸದೃಢ, ಸಶಕ್ತ ಭಾರತ ನಿರ್ಮಾಣಮಾಡಲು ಸಾಧ್ಯ ಎಂದರು.
ಇನ್ನೋರ್ವ ಯೋಗ ಗುರು ಗೋವಿಂದ ದೇವಡಿಗ ಮಾತನಾಡಿ ಯೋಗವನ್ನು ಜೀವನ ಸಂಗಾತಿಯಾಗಿಸಿಕೊಂಡರೆ ರೋಗವನ್ನು ಧೀರ್ಘ ಕಾಲ ದೂರವಿಡಬಹುದು. ಉತ್ತಮ ಮಾದರಿ ಜೀವನ ಸಿದ್ದಸಿಕೊಳ್ಳಲು ಯೋಗ ಬಹು ಮುಖ್ಯವಾಗಿದೆ ಎಂದರು. ಯೋಗಧರ್ಮ, ಬ್ರಹ್ಮ ಧರ್ಮ, ರಾಷ್ಟ್ರಧರ್ಮ, ಸೇವಾಧರ್ಮ ಹಾಗೂ ಋಷಿ ಧರ್ಮವನ್ನು ಉಳಿಸಿ ಬೆಳಸಿಕೊಂಡ ಹೋಗುವ ಕುರಿತು ವಿವರಿಸಿದರು.