ಅಂಕೋಲ ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ಐವರು ಮೃತ್ಯು ನಾಲ್ವರು ಗಂಭೀರ
ಭಟ್ಕಳ: ವೇಗವಾಗಿ ಚಲಿಸುತ್ತಿದ್ದ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬ ಐವರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ತಾಲೂಕಿನಲ್ಲಿ ಸಂಭವಿಸಿದೆ.
ಮೃತರನ್ನು ವಿಜಯಪುರ ಜಿಲ್ಲೆಯ ಜಮನಾಳ್ ಗ್ರಾಮದ ನಿವಾಸಿಗಳಾದ ಪ್ರಭು ಶ್ರಲಾ ಶೆಟ್ಟಿ (೪೫), ರುದ್ರಪ್ಪ ಗುರುಪಾದಪ್ಪ ಕೋರಿ(೫೫), ಸುವರ್ಣ ರುದ್ರಪ್ಪ ಕೋರಿ(೪೫), ಆಕಾಶ ಮುತ್ತಪ್ಪ (೧೨) ಮತ್ತು ಸೌಮ್ಯ ಅಂಗಡಿ(೧೦) ಎಂದು ಗುರುತಿಸಲಾಗಿದೆ.
ಇವರು ತಮ್ಮ ಗ್ರಾಮದಿಂದ ದ.ಕ. ಜಿಲ್ಲೆಯ ಸುಭ್ರಮಣ್ಯಕ್ಕೆ ಪ್ರವಾಸಕ್ಕೆ ಹೋಗುತ್ತಿರುವುದಾಗಿ ತಿಳಿದುಬಂದಿದೆ. ಗಾಯಗೊಂಡವರನ್ನು ದಾನಪ್ಪ ರುದ್ರಪ್ಪ ಕೋರಿ, ಉದಯ ರುದ್ರಪ್ಪ ಕೋರಿ, ರಾಜಿವ್ ಗೋಪಾಲ್ ಪಾಟಿಲ್ ಹಾಗೂ ಸಂತೋಷ್ ಮುತ್ತಪ್ಪ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಕೂಡಲೇ ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ಲಾರಿಯೊಂದು ಕೆಟ್ಟು ನಿಂತಿದ್ದು ಮಧ್ಯಾಹ್ನ ಬೇರೆ ಲಾರಿಯೊಂದು ಅದಕ್ಕೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ಲಾರಿಯ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ರಾತ್ರಿ ಮತ್ತೆ ಅದೇ ಲಾರಿಗೆ ಕಾರೊಂದು ಡಿಕ್ಕಿ ಹೊಡೆದು ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲೂ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.