ಮಂಗಳೂರು ಬಳಿ ಭೀಕರ ಅಪಘಾತ; ಭಟ್ಕಳ ಮೂಲದ ಒಂದೇ ಕುಟುಂಬದ ನಾಲ್ವರ ಸಾವು
ಬಂಟ್ವಾಳ: ಗ್ಯಾಸ್ ಟ್ಯಾಂಕರ್ ಹಾಗು ಟೂರಿಸ್ಟ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾ.ಹೆದ್ದಾರಿಯ ಬ್ರಹ್ಮರಕೂಟ್ಲು ಟೋಲ್ ಸಮೀಪ ಇದೀಗ ಸಂಭವಿದೆ.
ಮೃತಪಟ್ಟವರು ಭಟ್ಕಳ ನಿವಾಸಿಗಳು ಎಂದು ತಿಳಿದು ಬಂದಿದ್ದು, ಹೆಚ್ಚಿನ ಮಾಹಿತಿ ಪೊಲೀಸರಿಂದ ಇನ್ನಷ್ಟೇ ಬರಬೇಕಾಗಿದೆ.
ಧರ್ಮಸ್ಥಳ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಮಂಗಳೂರು ಕಡೆಯಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ತಲಪಾಡಿ - ಬ್ರಹ್ಮರಕೂಟ್ಲು ಮೇಲ್ಸೆತುವೆ ಸಮೀಪ ಢಿಕ್ಕಿಯಾಗಿದೆ.
ಘಟನೆಯಿಂದ ನಾಲ್ವರು ಮೃತಪಟ್ಟಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಭಟ್ಕಳ ಮೂಲದ ಒಂದೇ ಕುಟುಂಬದ 11 ಜನರ ಪೈಕಿ ಗೋವಿಂದ, ಪದ್ಮಾವತಿ, ನಾಗರಾಜ ಮತ್ತು ಗಣೇಶ ಎಂಬವರು ಮೃತ ಪಟ್ಟಿದ್ದು, ಉಳಿದ ಗಾಯಾಳುಗಳನ್ನು ಚಿಕಿತ್ಸೆಗಾಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ಅಪಘಾತದಿಂದ ಹೆದ್ದಾರಿಯಲ್ಲಿ ಕೆಲ ತಾಸುಗಳ ಕಾಲ ಸಂಚಾರಕ್ಕೆ ತಡೆ ಉಂಟಾಗಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.