ಧಾರವಾಡ: ಅಸಂಘಟಿತ ಕಾರ್ಮಿಕವಲಯದ ಶ್ರಮಿಕರಿಗೆ ಅನುಕೂಲವಾಗಲು ಜಾರಿಯಾಗಿರುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪ್ರದಾನ ಮಂತ್ರಿ ಶ್ರಮ್ಯೋಗಿ ಮನ್ಧನ್ ಯೋಜನೆ (ಪಿಎಮ್-ಎಸ್ವಾಯ್ಎಮ್) ಮತ್ತು ಸಣ್ಣ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಸ್ಥರಿಗೆ ಜಾರಿಯಾಗಿರುವ ಸಣ್ಣ ವ್ಯಾಪಾರಿ ಹಾಗೂ ಸ್ವಯಂ ಉದ್ಯೋಗ ರಾಷ್ಟ್ರೀಯ ಪಿಂಚಣಿ (ಎನ್ಪಿಎಸ್-ಟ್ರೇಡರ್ಸ್) ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಡಿಸೆಂಬರ್ 17 ರಿಂದ ಜಿಲ್ಲಾ ಮಟ್ಟದ ಪಿಂಚಣಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪಿಂಚಣಿ ಸಪ್ತಾಹ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಭಾರತ ಸರಕಾರವು ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದಿಂದ ಮಾರ್ಚ 2020ರೊಳಗೆ ಪಿಎಮ್-ಎಸ್ವಾಯ್ಎಮ್ ಯೋಜನೆಯಡಿ 1 ಕೋಟಿ ಫಲಾನುಭವಿಗಳನ್ನು ಮತ್ತು ಎನ್ಪಿಎಸ್-ಟ್ರೇಡರ್ಸ್ ಯೋಜನೆಯಡಿ 50 ಲಕ್ಷ ಫಲಾನುಭವಿಗಳನ್ನು ನೊಂದಾಯಿಸುವ ಗುರಿ ಹೊಂದಿದೆ. ಅದರಂತೆ ಪ್ರತಿ ಜಿಲ್ಲೆಯಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳು ಈ ಪಿಂಚಣಿ ಸೌಲಭ್ಯ ಪಡೆಯಲು ತಿಳುವಳಿಕೆ ನೀಡುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಇಲಾಖಾವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಡಿ.17 ರಿಂದ ಆರಂಭಿಸಲಾಗುವುದು. ಎಲ್ಲ ಸಿಎಸ್ಸಿ ಕೇಂದ್ರಗಳಲ್ಲಿ ಪಿಎಮ್-ಎಸ್ವಾಯ್ಎಮ್ ಹಾಗೂ ಎನ್ಪಿಎಸ್-ಟ್ರೇಡರ್ಸ್ ಪಿಂಚಣಿ ಯೋಜನೆಗೆ ನೊಂದಾಯಿಸಿಕೊಳ್ಳಲಾಗುತ್ತದೆ. ಫಲಾನುಭವಿಗಳು ತಮ್ಮ ಆಧಾರ ಕಾರ್ಡ (ಮೋಬೈಲ್ ಸಂಖ್ಯೆ ಲಿಂಕ್ ಆಗಿರುವ) ಮತ್ತು ಬ್ಯಾಂಕ್ (ಆಯ್ಎಫ್ಎಸ್ಸಿ ಕೋಡ್ ಇರುವ) ಪಾಸಬುಕ್ಗಳನ್ನು ತೆಗೆದುಕೊಂಡು ಯಾವುದೇ ಸಿಎಸ್ಸಿ ಕೇಂದ್ರಕ್ಕೆ ಹೊದರು ಪಿಂಚಣಿ ಯೋಜನೆಗಳಿಗೆ ನೊಂದಣಿ ಮಾಡಿಕೊಳ್ಳುತ್ತಾರೆ. ಸಪ್ತಾಹದ ಜಾಗೃತಿ ಕಾರ್ಯಕ್ರಮಗಳಲ್ಲಿಯೂ ಫಲಾನುಭವಿಗಳ ನೊಂದಣಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಇಲ್ಲಿವರೆಗೆ ಸುಮಾರು 61 ಸಾವಿರ ಜನ ಅಸಂಘಟಿತ ವಲಯದ ಕಾರ್ಮಿಕರು, ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿಕೊಂಡು ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ. ಅವರನ್ನು ಸೇರಿದಂತೆ ಉಳಿದ ಅಸಂಘಟಿತ ಕಾರ್ಮಿಕರನ್ನು ಪಿಎಮ್-ಎಸ್ವಾಯ್ಎಮ್ ಯೋಜನೆಯಲ್ಲಿ ನೊಂದಾಯಿಸಿಕೊಳ್ಳುವಂತೆ ಮಾಹಿತಿ ನೀಡಬೇಕು.
ಸುಮಾರು 1.5 ಕೋಟಿ ರೂ.ಗಳ ಮಿತಿಯ ವ್ಯಾಪಾರ ಮಾಡುತ್ತಿರುವ ಸಣ್ಣ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗ ಮಾಡುವವರು ಎನ್ಪಿಎಸ್-ಟ್ರೆಡರ್ಸ್ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಈ ಯೋಜನೆಗಳಿಗೆ 18 ರಿಂದ 40ರ ವಯೋಮಾನದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿ ಮತ್ತು ಸ್ವಯಂ ಉದ್ಯೋಗಿಗಳು ತಮ್ಮ ವಯೋಮಾನಕ್ಕೆ ಅನುಗುಣವಾಗಿ ಮಾಸಿಕ 50 ರೂ.ಗಳಿಂದ 200 ರೂ.ಗಳ ವರೆಗೆ ವಂತಿಗೆಯನ್ನು ತಮ್ಮ 60ನೇ ವರ್ಷದವರೆಗೆ ತುಂಬ ಬೇಕಾಗುತ್ತದೆ.
ಫಲಾನುಭವಿಗಳಿಗೆ 60 ವರ್ಷ ಪೂರ್ಣಗೊಂಡ ನಂತರ, ಮಾಸಿಕ ಮೂರು ಸಾವಿರ ಪಿಂಚಣಿಯು ಅವರಿಗೆ ಸಿಗುತ್ತದೆ. ಈ ಯೋಜನೆಗಳಿಗೆ ನಾಮಿನಿ ಸೌಲಭ್ಯವೂ ಇದೆ. ಈ ಯೋಜನೆಗಳು ಇಳಿವಯಸ್ಸಿನಲ್ಲಿ ಬಡವರಿಗೆ, ಕಾರ್ಮಿಕರಿಗೆ ತುಂಬಾ ಸಹಾಯಕರವಾಗಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಸೌಲಭ್ಯ ಸಿಗುವಂತೆ ಮಾಡಬೇಕೆಂದು ಅವರು ತಿಳಿಸಿದರು.
ಪಿಎಫ್ ಮತ್ತು ಇಎಸ್ಐ ಸೌಲಭ್ಯ ಹೊಂದಿರದ ಕಟ್ಟಡ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನರೇಗಾ ಕೆಲಸಗಾರರು, ಕೃಷಿ ಕಾರ್ಮಿಕರು, ಹಮಾಲರು, ಕ್ಷೌರಿಕರು ಸೇರಿದಂತೆ ಅಸಂಘಟಿತ ವಲಯದ ಎಲ್ಲ ಕಾರ್ಮಿಕರು ಈ ಪಿಂಚಣಿ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಆಸಕ್ತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
ಸಭೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸರೇಶ ಇಟ್ನಾಳ, ಕಾರ್ಮಿಕ ಅಧಿಕಾರಿಗಳಾದ ಅಶೋಕ ಬಾಳಿಗಟ್ಟಿ, ಮಾರಿಕಾಂಬಾ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.