ಕಾರವಾರ : ನೆರೆ ಹಾವಳಿ ಪ್ರದೇಶದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ 24 ಗಂಟೆಯೊಳಗೆ ಕ್ರೀಯಾ ಯೋಜನೆ ತಯಾರಿಸಿ ನೀಡುವಂತೆ ಎಲ್ಲಾ ತಾಲೂಕು ತಹಶೀಲ್ದಾರರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ಸೂಚಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಎಲ್ಲಾ ತಹಶೀಲ್ದಾರರೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮ ಉತ್ತಮವಾಗಿದೆ. ಇದೀಗ ಪ್ರವಾಹ ನಂತರ ಸಂತ್ರಸ್ಥರಿಗೆ ಪರಿಹಾರ ಮತ್ತು ಸಹಜ ಸ್ಥಿತಿಗೆ ತರಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ವಿವಿಧ ಅಂಶಗಳ ಕುರಿತು ಕುಲಂಕುಶ ಕ್ರೀಯಾ ಯೋಜನೆ ತಯಾರಿಸಿ 24 ಗಂಟೆಯೊಳಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಪ್ರಸ್ತುತ ಜಿಲ್ಲೆಯ 116 ಗಂಜಿ ಕೇಂದ್ರಗಳ ಸ್ಥಿತಿಗತಿ ಪರಿಶೀಲಿಸಿ ನಿಖರ ಮಾಹಿತಿ ಕ್ರೋಡಿಕರಿಸಿ ನೀಡುವುದು. ಪ್ರವಾಹ ಪ್ರದೇಶದಲ್ಲಿ ಮನೆಗಳಿಗೆ ಆಗಿರುವ ಹಾನಿ ಪ್ರಮಾಣ ಜಲಾವೃತವಾದ ಪ್ರದೇಶಗಳಿಗೆ ಅಗತ್ಯವಿರುವ ಬಟ್ಟೆಗಳು, ಪಾತ್ರೆಗಳ ವಿವರ, ಆಹಾರ ಪದಾರ್ಥ ಇಲ್ಲದಿರುವ ಬಗ್ಗೆ ಅಥವಾ ಆಹಾರ ಪದಾರ್ಥಗಳು ಹಾಳಾಗಿರುವ ಬಗ್ಗೆ ಮಾಹಿತಿ, ಜೀವ ಹಾನಿ, ಜಾನುವಾರು ಸಾವು, ಒಟ್ಟಾರೆ ಕೃಷಿ ಬೆಲೆ ಹಾನಿ ಪ್ರಮಾಣ, ಕಟ್ಟಡ, ರಸ್ತೆ ಇತ್ಯಾದಿ ಹಾನಿಯ ಬಗ್ಗೆ ಹಾಗೂ ಪುನರ್ವಸತಿ ತಲುಪಿಸುವ ಬಗ್ಗೆ ಮಾಹಿತಿಯನ್ನು ಕ್ರೋಡಿಕರಿಸಿ, ಕ್ರೀಯಾ ಯೋಜನೆ ತಯಾರಿಸಿ 24 ಗಂಟೆಯೊಳಗೆ ಸಲ್ಲಿಸುವಂತೆ ಅವರು ಸೂಚಿಸಿದರು.
ಉಳಿದಂತೆ ತಿಂಗಳಲ್ಲಿ ಆಗಬೇಕಾಗಿರುವ ಕ್ರೀಯಾ ಯೋಜನೆ ನಂತರ ಪಡೆಯಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಮ್ ರೋಶನ್ ಸೇರಿದಂತೆ ಎಲ್ಲಾ ತಹಶೀಲ್ದಾರರು ಭಾಗವಹಿಸಿದ್ದರು.