ಮಂಗಳೂರು ಆಸ್ಪತ್ರೆಯಿಂದ ಭಟ್ಕಳಕ್ಕೆ ಶಿಫ್ಟಾದ ಕೊರೋನಾ;12 ಹೊಸ ಕೊರೋನಾ ಪ್ರಕರಣ ಪತ್ತೆ
ಭಟ್ಕಳಕ್ಕೆ ಶುಭವಾಗದ ಶುಕ್ರವಾರ
ಭಟ್ಕಳ: ಇಂದು ಶುಕ್ರವಾರ ಎಲ್ಲರಿಗೂ ಶುಭವನ್ನು ತರುವ ವಾರ. ಆದರೆ ಭಟ್ಕಳಕ್ಕದು ಶುಭವಾಗದೆ 12 ಹೊಸ ಕೊರೋನಾ ಪ್ರಕರಣ ಪತ್ತೆಯಾದ ದಿನವಾಗಿ ಮಾರ್ಪಟ್ಟು ಇಡೀ ಉತ್ತರಕನ್ನಡ ಜಿಲ್ಲೆಗೆ ಅಶುಭವಾಗಿ ಪರಿಣಮಿಸಿದೆ ಎಂದೇ ಹೇಳಲಾಗುತ್ತಿದೆ. ಮಂಗಳೂರು ಫಸ್ಟ್ ನ್ಯುರೋ ಆಸ್ಪತ್ರೆಯಿಂದ 18ರ ಯುವತಿಯೊಂದಿಗೆ ಶಿಫ್ಟಾದ ಕೊರೋನಾ ಈಗ 12 ಮಂದಿಯನ್ನು ಅಕ್ರಮಿಸಿಕೊಂಡಿದೆ. ಇನ್ನು ಅದೆಷ್ಟು ಮಂದಿಗೆ ಕೊರೋನಾ ತಾಗಿದಿಯೋ ದೇವರೇ ಬಲ್ಲ.
ಶುಕ್ರವಾರ ಬೆಳಕಿಗೆ ಬಂದಿರುವ ನೂತನ 12 ಪ್ರಕರಣಗಳಿಂದಾಗಿ ಜಿಲ್ಲಾಡಳಿತವಷ್ಟೆ ಅಲ್ಲದೆ ಸಾಮಾಜಿಕ ಸಂಘ ಸಂಸ್ಥೆಗಳು ಕೂಡ ದಿಗ್ಭ್ರಮೆಗೊಳಗಾಗಿವೆ. ಮೇ.5 ರಂದು 18 ವರ್ಷದ ಯುವತಿಗೆ ಕಾಣಿಸಿಕೊಂಡ ಕೊರೋನಾ, ಆಕೆಯ ಅಕ್ಕ, ಅಜ್ಜ, ಅಜ್ಜಿ, ಚಿಕ್ಕಮ್ಮ , ಇಬ್ಬರು ಗೆಳತಿಯರು ಸೇರಿದಂತೆ ಒಟ್ಟು ಇಬ್ಬರು ಪುರುಷರು, ಒಂಬತ್ತು ಮಹಿಳೆಯರು ಹಾಗೂ ಒಂದು ಮಗು(ಹೆಣ್ಣು) ವನ್ನ್ನು ತನ್ನ ತೆಕ್ಕೆ ಸೆಳೆದುಕೊಂಡಿದ್ದು ಭಟ್ಕಳವನ್ನು ಆತಂಕದಲ್ಲಿ ದೂಡಿದೆ.
ಮಂಗಳೂರು ನಿಂದ ಭಟ್ಕಳಕ್ಕೆ ಶಿಫ್ಟಾದ ಕೊರೋನಾ: ಭಟ್ಕಳದ ಓರ್ವ ಮಹಿಳೆ ತನ್ನ 5 ತಿಂಗಳ ಮಗುವಿನ ಆರೋಗ್ಯ ಹದಗೆಟ್ಟ ಕಾರಣ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದು ಆಕೆಯೊಂದಿಗೆ ಪತಿ ಮತ್ತು ತಂಗಿಯು ಜತೆಯಲ್ಲಿ ಹೋಗಿದ್ದು ಅಲ್ಲಿಂದ ಮರಳಿ ಭಟ್ಕಳಕ್ಕೆ ಬಂದ ಕೆಲವು ದಿನಗಳ ನಂತರ ಅಂದರೆ ಮೇ.1ರಂದು ತನ್ನ ತಂಗಿ ಗೆ ಆರೋಗ್ಯ ಸರಿಯಿಲ್ಲ ಎಂದು ಭಟ್ಕಳ ಆಸ್ಪತ್ರೆಗೆ ತಪಾಸಣೆಗೆ ಹೋದಾಗ ಆಕೆಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ರವಾನಿಸಿದ ವೈದ್ಯರಿಗೆ ಮೇ5 ರಂದು ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದ್ದು ನಂತರ ಆಕೆಯ ಕುಟುಂಬದ ಎಲ್ಲ ಸದಸ್ಯರನ್ನು ಕೊರೆಂಟೈನ್ ಮಾಡಿ ಎಲ್ಲರ ಗಂಟಲು ದ್ರವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಶುಕ್ರವಾರ ಆಕೆಯ ಕುಟುಂಬದ 12 ಮಂದಿಗೆ ಕೊರೋನಾ ಪಾಸಿಟಿವ್ ಆಗಿದ್ದು ದೃಢಪಟ್ಟಿದೆ.
ಭಟ್ಕಳದಲ್ಲಿ ದಿನೆ ದಿನೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿಯಲ್ಲಿ ಹೆದರಿಕೆ ಬೇಡ ನಾವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಭಟ್ಕಳ ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಟ್ಕಳದಲ್ಲಿ ಖಾಸಗಿ ಆಸ್ಪತ್ರೆಯನ್ನು ಬಂದ್ ಮಾಡಿದ್ದು ಸರಿಯಲ್ಲ. ಏಕೆಂದರೆ ಶಿರಾಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸರಿಯಾಗಿ ಮಾಡಲಾಗುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಭಟ್ಕಳದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದೂ ಅವರು ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಮತ್ತಷ್ಟು ಕೊರೋನಾ ಪ್ರಕರಣ ಹೆಚ್ಚಾಗುವ ಸಾಧ್ಯತೆ?: ಭಟ್ಕಳದಲ್ಲಿ ಕೆವಲ ಹೊರಗಡೆಯಿಂದ ಬಂದವರನ್ನು ಮಾತ್ರ ಅಥವಾ ಕೆಮ್ಮು ನೆಗಡಿ ಎಂದು ಆಸ್ಪತ್ರೆಗೆ ಭೇಟಿ ನೀಡಿದವರನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿದೆ. ಒಂದು ವೇಳೆ ಸಾಮೂಹಿಕವಾಗಿ ಕೊರೋನಾ ಪರೀಕ್ಷೆ ನಡೆಸಿದರೆ ಕೊರೋನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಕೇವಲ ಪಟ್ಟಣದಲ್ಲಿ ಮಾತ್ರ ಈಗ ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ಇದ್ದು ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ಪರೀಕ್ಷೆ ನಡೆಯಲಿ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಸೀಲ್ ಡೌನ್ ಆಗುವತ್ತ ಭಟ್ಕಳ: ಭಟ್ಕಳವನ್ನು ಈಗಾಗಲೆ ಕಂಟೇನ್ಮೆಂಟ್ ವಲಯ ಎಂದು ಘೋಷಿಸಿದ್ದು ಇಂದು ಪತ್ತೆಯಾಗಿರುವ 12 ಪ್ರಕರಣಗಳನ್ನು ನೋಡಿದರೆ ಜಿಲ್ಲಾಡಳಿತ ಈ ಪ್ರದೇಶವನ್ನು ಸೀಲ್ಡೌನ್ ಮಾಡುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ. ಸೋಂಕಿತ ಮನೆಯ ಸುತ್ತಮುತ್ತಲು ಹಲವು ಮನೆಗಳಿದ್ದು ಈ ಮನೆಗಳ ಕುಟುಂಬದ ಸದಸ್ಯರು ಯಾರು ಯಾರನ್ನು ಭೇಟಿಯಾಗಿರಬಹುದು ಎಂಬ ನಿಖರ ಮಾಹಿತಿಯಿನ್ನೆ ದೊರೆಯದೆ ಇರುವುದರಿಂದಾಗಿ ಈ ವ್ಯಾಪ್ತಿಯಲ್ಲಿ 100ಮೀಟರ್ ಒಳಗೆ ಸೀಲ್ಡೌನ್ ಮಾಡಲಾಗುವುದು ಎಂಬ ಮಾಹಿತಿಯು ಲಭ್ಯವಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ವ್ಯಾಪಕ ಪೊಲೀಸ್ ಭದ್ರತೆಯನ್ನು ಒದಗಿಸುವ ಕುರಿತು ಭಟ್ಕಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹೆಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಭಟ್ಕಳದ ಮದೀನಾ ಕಾಲೋನಿ ಹೋಗುವ ರಸ್ತೆಯನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಿರುವ ಪೊಲೀಸರು.