ಎಸ್.ಎಂ.ಕೃಷ್ಣ, ಭೈರಪ್ಪ, ಸುಧಾಮೂರ್ತಿ, ಖಾದರ್ ವಲ್ಲಿ, ರಶೀದ್ ಅಹ್ಮದ್ ಸಹಿತ ರಾಜ್ಯದ 8 ಸಾಧಕರಿಗೆ ಪದ್ಮ ಗೌರವ; ಒಟ್ಟು 106 ಮಂದಿಗೆ ಪದ್ಮ ಗರಿ
ಹೊಸದಿಲ್ಲಿ: ಗಣರಾಜ್ಯ ದಿನದ ಮುನ್ನಾದಿನವಾದ ಬುಧವಾರ ಕೇಂದ್ರ ಸರಕಾರವು ಪ್ರತಿಷ್ಠಿತ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣ ಹಾಗೂ ಸಾಹಿತಿ ಎಸ್.ಎಲ್.ಭೈರಪ್ಪ ಮತ್ತು ಸಾಮಾಜಿಕ ಕಾರ್ಯಕರ್ತೆ ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರಕಿವೆ. ರಾಜ್ಯದ ಒಟ್ಟು ಎಂಟು ಮಂದಿಗೆ ಪದ್ಮ ಗೌರವ ಒಲಿದಿವೆ.
ಈ ವರ್ಷ 106 ಪದ್ಮಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಆರು ಜನರು ಪದ್ಮವಿಭೂಷಣ, ಒಂಭತ್ತು ಪದ್ಮಭೂಷಣ ಮತ್ತು 91 ಜನರು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಪಶಸ್ತಿ ವಿಜೇತರ ಪಟ್ಟಿಯಲ್ಲಿ 19 ಮಹಿಳೆಯರಿದ್ದು, ಇಬ್ಬರು ವಿದೇಶಿಯರು/ ಎನ್ನಾರೈ/ ಪಿಐಒ/ಓಸಿಐ ವರ್ಗಕ್ಕೆ ಸೇರಿದ್ದಾರೆ. ಮರಣೋತ್ತರವಾಗಿ ಏಳು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಕರ್ನಾಟಕಕ್ಕೆ ಒಟ್ಟು ಎಂಟು ಪ್ರಶಸ್ತಿಗಳು ಸಿಕ್ಕಿದ್ದು, ಖಾದರ್ ವಲ್ಲಿ ದುಡೆಕಳ (ವಿಜ್ಞಾನ ಮತ್ತು ಇಂಜಿನಿಯರಿಂಗ್), ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಶಾ ರಶೀದ್ ಅಹ್ಮದ್ ಖಾದ್ರಿ (ಕಲೆ) ಮತ್ತು ಎಸ್.ಸುಬ್ಬರಾಮನ್ (ಪುರಾತತ್ವ) ಅವರು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಮಾರ್ಚ್/ಎಪ್ರಿಲ್ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೋಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ. ಗುಜರಾತಿನ ಬಾಲಕೃಷ್ಣ ದೋಶಿ (ವಾಸ್ತುಶಿಲ್ಪ), ಪ.ಬಂಗಾಳದ ದಿಲೀಪ ಮಹಾಲನಬೀಸ್ (ಔಷಧಿ), ಮುಲಾಯಂ ಸಿಂಗ್ ಯಾದವ್ (ರಾಜಕೀಯ) ಸೇರಿದಂತೆ ಏಳು ಜನರಿಗೆ ಮರಣೋತ್ತರ ವಾಗಿ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.