ಝೇಂಕಾರ ಮೆಲೋಡೀಸ್ ಕಲಾಸಂಘದ ಕಲಾ ಸೇವೆ ಶ್ಲಾಘನೀಯ-ಮಾಂಕಾಳ್ ವೈದ್ಯ
ಭಟ್ಕಳ: ಝೇಂಕಾರ ಮೆಲೋಡೀಸ್ ಕಲಾಸಂಘ ಅನೇಕ ಮಕ್ಕಳಿಗೆ ಕಲಾರಾಧನೆಯನ್ನು ಕಲಿಸುತ್ತಿರುವ ಸಂಸ್ಥೆಯಾಗಿದ್ದು ನಮ್ಮ ಸಂಸ್ಥೆಯೆನ್ನುವ ಭಾವನೆಯಿಂದ ಕಳೆದ ಅನೇಕ ವರ್ಷಗಳಿಂದ ಸಹಾಯ ಸಹಕಾರ ಮಾಡುತ್ತಾ ಬಂದಿದ್ದೇನೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.
ಅವರು ಇಲ್ಲಿನ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾ ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಝೇಂಕಾರ ಕಲಾ ಸಂಘದ ದಶಮಾನೋತ್ಸವದ ಪ್ರಯುಕ್ತ ಎರ್ಪಡಿಸಲಾಗಿದ್ದ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ತಾಲೂಕಿನ ಮಕ್ಕಳಿಗೆ ನಾವು ಎಣಿಸದಷ್ಟು ಉತ್ತಮ ರೀತಿಯಲ್ಲಿ ವಿದ್ಯೆಯನ್ನು ಹೇಳಿಕೊಡುತ್ತಾ, ಅತ್ಯಂತ ಕಷ್ಟದಲ್ಲಿ ಈ ಸಂಸ್ಥೆಯನ್ನು ಸಹೋದರರು ನಡೆಸಿಕೊಂಡು ಬಂದಿದ್ದಾರೆ. ಚಿತ್ರಕಲೆಯಲ್ಲಿ ತಮ್ಮದೇ ಆದ ಪ್ರತಿಭೆಯನ್ನು ತೋರಿಸುತ್ತಿರುವ ವಿದ್ಯಾರ್ಥಿಗಳು ಇಂದು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಅಶೋಕ ಎಸ್. ಪೈ ಮಾತನಾಡಿ ಹತ್ತು ವರ್ಷ ಎನ್ನುವುದು ಯಾವುದೇ ಒಂದು ಸಂಸ್ಥೆಗೆ ಅತಿ ಕಡಿಮೆ ಅವಧಿಯಾದರೂ ಅಷ್ಟರಲ್ಲಿಯೇ ಒಂದು ಉತ್ತಮ ಸಂಸ್ಥೆಯಾಗಿ ಹೊರ ಹೊಮ್ಮಿದ್ದು ವಿಶೇಷವಾಗಿದೆ. ಈಗಾಗಲೇ ರಾಜ್ಯದ ಹಲವೆಡೆಯಿಂದ ಪ್ರಶಸ್ತಿಗಳನ್ನು ಈ ಸಂಸ್ಥೆಯ ವಿದ್ಯಾರ್ಥಿಗಳು ಗಳಿಸಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯಾಗಿದೆ. ವಿದ್ಯಾರ್ಥಿಗಳು, ಮೊಬೈಲ್ ಬಳಕೆ, ದುಶ್ಚಟಗಳನ್ನು ದೂರವಿಟ್ಟು ನಮ್ಮ ಭಾರತೀಯ ಸಂಸ್ಕøತಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಕರೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಸಂಸ್ಥೆಯನ್ನು ಹುಟ್ಟು ಹಾಕುವ ಕಾರ್ಯ ಸುಲಭವಾದದ್ದು. ಆದರೆ ಸ್ವತಹ ಭರತ ನಾಟ್ಯ ಕಲಾವಿದರಲ್ಲದಿದ್ದರೂ ಸಹ ಧೈರ್ಯದಿಂದ ಸಂಸ್ಥೆ ಸ್ಥಾಪಿಸಿ, ಭರತನಾಟ್ಯ, ಚಿತ್ರಕಲೆ, ಸಂಗೀತವನ್ನು ಕಲಿಸುತ್ತಿರುವ ಸಹೋದರರ ಕಾರ್ಯ ಶ್ಲಾಘನೀಯವಾದದ್ದು. ಇವರ ಸಂಸ್ಥೆ ಇನ್ನು ಹೆಚ್ಚಿನ ಕಲಾ ಸೇವೆಯನ್ನು ನಾಡಿಗೆ ನೀಡುವಂತಾಗಲಿ ಎಂದು ಹಾರೈಸಿದರು. ಪುರಸಭಾ ಸದಸ್ಯ ಪದ್ಮನಾಭ ಪೈ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಲಾ ಪೋಷಕ ಮಂಕಾಳ ವೈದ್ಯ, ಸುಂದರ ತೋಳಾರ್, ಸಂಸ್ಥೆಗೆ ಸಹಕರಿಸಿದವರವನ್ನು ಸನ್ಮಾನಿಸಲಾಯಿತು.
ಶಿಕ್ಷಕ ಸಂಜಯ ಗುಡಿಗಾರ್ ಸ್ವಾಗತಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರು. ಸಂಸ್ಥೆಯ ಸದಸ್ಯ ರಮೇಶ ಮೇಸ್ತ ವಂದಿಸಿದರು.