ಹಾಸನ: ಯುವಜನತೆ ಮೊಬೈಲ್ ವ್ಯಸನಕ್ಕೆ ಅಂಟಿಕೊಳ್ಳದೆ ತಮ್ಮ ಸರ್ವತೋಮುಖ ಅಭಿವೃದ್ದಿಗಾಗಿ ಕ್ರೀಡೆ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮಳಲಿ ಸರ್ಕಾರಿ ಫ್ರೌಢ ಶಾಲೆ ದೈಹಿಕ ಶಿಕ್ಷಕಿ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟುವಾದ ಗೀತಾ ಸುಬ್ಬರಾಯ ಪ್ರಭು ಅವರು ತಿಳಿಸಿದರು.
ಕೃಷಿ ಮಹಾವಿದ್ಯಾಲಯ ಕಾರೆಕೆರೆಯಲ್ಲಿ 2018-19 ರ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ ಹಾಗೂ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯನ್ನು ಮನೋರಂಜನೆಗಾಗಿ ಸೀಮಿತಗೊಳಿಸದೆ, ಆರೋಗ್ಯದ ಹಿತದೃಷ್ಟಿ, ದೈಹಿಕ ಸದೃಡತೆ, ಮಾನಸಿಕ ಸಮತೋಲನೆ ಹಾಗೂ ವೃತ್ತಿಪರತೆಗಾಗಿ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ ಪ್ರಧಾನವಾದ ಭಾರತದಲ್ಲಿ ದೇಶದ ಬೆನ್ನೆಲುಬಾಗಿ ಕೃಷಿ ವಿದ್ಯಾರ್ಥಿಗಳು, ರೈತರ ಏಳಿಗೆಗಾಗಿ ಶ್ರಮಿಸಬೇಕು ಮತ್ತು ಕೃಷಿ ಕ್ಷೇತ್ರವನ್ನು ಉತ್ತುಂಗಕ್ಕೇರಿಸಲು ಪಣತೊಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎನ್. ದೇವಕುಮಾರ್ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದರಲ್ಲದೆ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಅದರ ಮಹತ್ವವದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ. ವಾಸುದೇವನ್ ಹಾಗೂ ಉಪ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಗಂಗಾಧರ್, ವಿವಿಧ ಕೃಷಿ ಮಹಾವಿದ್ಯಾಲಯಗಳ ದೈಹಿಕ ಶಿಕ್ಷಕರುಗಳಾದ ಸಣ್ಣಪಾಲಯ್ಯ, ಜಗದೀಶ್, ಸಂದೇಶ್, ಯೋಗೇಶ್, ಶಶಿಕಾಂತ ಹಾಗೂ ಸುಪ್ರಭಾ, ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ಸಿ. ರಾಮ್ಕುಮಾರ್ ಮತ್ತಿತರರು ಹಾಜರಿದ್ದರು.