4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ “ಯೋಗ ನಡಿಗೆ ಜಾಥಾ”
ಕಾರವಾರ: ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಿಡಿತದಲ್ಲಿಡುವ ಸಾಧನವಾಗಿದ್ದು ಪ್ರತಿಯೊಬ್ಬರು ತಮ್ಮ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ಕಾರವಾರ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪತಂಜಲಿ ಯೋಗ ಸಮಿತಿ ಹಾಗೂ ಸ್ಥಳಿಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಜಿಲ್ಲಾ ಆಯುಷ ಇಲಾಖೆಯಲ್ಲಿ 4ನೇ ಅಂತರರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ “ಯೋಗ ನಡಿಗೆ ಜಾಥಾ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯೋಗಾಭ್ಯಾಸ ಮಾಡಲು ಲಿಂಗ, ಜಾತಿ, ವಯಸ್ಸಿನ ಭೇದವಿಲ್ಲ ಆಸಕ್ತಿಯಿಂದ ಪತ್ರಿಯೊಬ್ಬರೂ ಮುಕ್ತ ಮನಸ್ಸಿನಿಂದ ನಿರ್ಭೀತರಾಗಿ ಯೋಗಾಭ್ಯಾಸ ಮಾಡಬಹುದೆಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ಆರ್.ಬಸವರಾಜಯ್ಯ ಮಾತನಾಡಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ವಿಶ್ವಕ್ಕೆ ಭಾರತದ ಕೊಡುಗೆಯಾಗಿದ್ದು, ಇಡೀ ವಿಶ್ವದಾದ್ಯಂತ ಬಹುಪಾಲು ರಾಷ್ಟ್ರಗಳು 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂಭ್ರಮದಲ್ಲಿವೆ. ಈ ನಿಮಿತ್ಯ ನಾವು ಸಾರ್ವಜನಿಕರಿಗೆ ಯೊಗಾಭ್ಯಾಸ ಜಾಗೃತಿ ನೀಡುವ ನಿಟ್ಟಿನಲ್ಲಿ ಯೋಗ ನಡಿಗೆ-ಆರೋಗ್ಯದೆಡೆಗೆ ಸಾಮೂಹಿಕ ಜಾಥಾ ಹಮ್ಮಿಕೊಂಡಿದ್ದೇವೆ. ಜೂನ್ 21 ರಂದು ಬೆಳಗ್ಗೆ 6.30ಕ್ಕೆ ಬಾಡ ಗುರುಮಠದಲ್ಲಿ ಏರ್ಪಡಿಸಿರುವ ಸಾರ್ವಜನಿಕ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಜಾಥಾದಲ್ಲಿ ಪತಂಜಲಿ ಯೋಗ ಸಮಿತಿಯ ಶ್ರೀನಾಥ, ಪ್ರಶಾಂತ ರೇವಣಕರ, ವೇಂಕಟೇಶ ಮತ್ತು ವಿವಿಧ ಸಂಘ ಸಂಸ್ಥೆಗಳ ಯೋಗಸಾಧಕರು, ಪದಾಧಿಕಾರಿಗಳು, ಸರಕಾರಿ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು, ಸ್ಕೌಟ್ಸ & ಗೈಡ್ಸ ಮಕ್ಕಳು, ಶಿಕ್ಷಣ ಇಲಾಖೆಯ ಶಿಕ್ಷಕರು ಶಾಲಾಮಕ್ಕಳು, ಪೋಲಿಸ್ ಇಲಾಖೆ ಆರಕ್ಷಕರು ಸೇರಿದಂತೆ 500 ಕ್ಕೂ ಹೆಚ್ಚು ಜನ ಭಾಗವಹಿಸಿ ಯೋಗ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜಿಲ್ಲೆಯ ಆಯುಷ್ ವೈದ್ಯಾಧಿಕಾರಿಗಳು ಹಾಗೂ ಎಲ್ಲ ಆಯುಷ್ ಸಿಬ್ಬಂದಿಯವರು ಪಾಲ್ಗೊಂಡಿದ್ದರು.