ಆಹ್ಮದ್ ಸಿದ್ದಿಬಾಪ ಉರ್ಫ ಯಾಸೀನ್ ಭಟ್ಕಳ ಮರದಂಡನೆ ಶಿಕ್ಷೆಗೆ ತಾಯಿ ಬೀಬಿ ರೈಹಾನ ಪ್ರತಿಕ್ರಿಯೆ
ಭಟ್ಕಳ: ದೇಶದ ಹಲವೆಡೆ ನಡೆದ ಬಾಂಬ್ ಸ್ಪೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ೨೦೧೩ರಲ್ಲಿ ಎನ್.ಐ.ಎ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ಭಟ್ಕಳದ ಆಹ್ಮದ್ ಸಿದ್ದಿಬಾಪ ಯಾನೆ ಯಾಸೀನ್ ಭಟ್ಕಳ್ ನಿಗೆ ಇಂದು ಎನ್.ಐ.ಎ ವಿಶೇಷ ನ್ಯಾಯಾಲಯ ಮರದಂಡನೆ ಗುರಿಮಾಡಿದೆ.
ಈ ಕುರಿತಂತೆ ಭಟ್ಕಳದ ಮಗ್ದೂಮ್ ಕಾಲೋನಿಯಲ್ಲಿರುವ ಆಹ್ಮದ್ ಸಿದ್ದಿಬಾಪ ಕುಟುಂಬ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಮೊದಲೆ ನಿರ್ಣಯಿಸಿದಂತೆ ಎನ್.ಐ.ಎ ನ್ಯಾಯಾಲಯ ನನ್ನ ಮಗನಿಗೆ ಮರಣದಂಡನೆ ವಿಧಿಸಿದೆ. ವಿಚಾರಣೆ ವೇಳೆ ಹಲವಾರು ಬಾರಿ ಮಾನಸಿಕ ಹಿಂಸೆ ನೀಡಿದ ನ್ಯಾಯಾಧೀಶನ ವಿರುದ್ಧ ಹೈದರಾಬಾದ್ ಹೈಕೋರ್ಟಿನಲ್ಲಿ ನಾವು ಪಿಟಿಷನ್ ದಾವೆ ಹೂಡಿದ್ದು ಈತ ವಿಚಾರಣೆಯ ನೆಪದಲ್ಲಿ ನನ್ನ ಮಗನಿಗೆ ‘ನಿನಗೆ ಗಲ್ಲು ಶಿಕ್ಷೆ ನೀಡುವೆ ಎಂದು ಹೆದರಿಸುತ್ತಿದ್ದರು. ಇದೆಲ್ಲವೂ ಮೊದಲೆ ನಿರ್ಣಯವಾಗಿತ್ತು. ಇದಕ್ಕಾಗಿ ನಾವು ಯಾರೂ ಕೂಡ ವ್ಯೆಥೆ ಪಡುವುದಿಲ್ಲ, ಬದಲಾಗಿ ನಾವು ಹೈಕೋರ್ಟಿನಲ್ಲಿ ಎನ್.ಐ.ಎ ನ್ಯಾಯಾಲಯದ ನಿರ್ಣಯವನ್ನು ಪ್ರಶ್ನಿಸುತ್ತೇವೆ ಎಂದು ಆಹ್ಮದ್ ಸಿದ್ದಿಬಾಪನ ತಾಯಿ ಬೀಬಿ ರೈಹಾನಾ ಹಾಗೂ ಸಹೋದರಿ ಬೀಬಿ ಮಾರಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಹೋದರ ಅಬ್ದುಸ್ಸಮದ್ ಸಿದ್ದಿಬಾಪ ಮಾತನಾಡಿ, ನನ್ನ ಸಹೋದರನ ಮೇಲೆ ಹಾಕಲಾದ ಚಾರ್ಜಶೀಟ್ ನೀವು ಓದಬೇಕು. ಅದನ್ನು ಕಂಡು ಯಾರೂ ಕೂಡ ಇದು ಮರದಂಡನೆ ನೀಡುವಂತಹ ಪ್ರಕರಣವಲ್ಲ ಎಂದು ಹೇಳಬಲ್ಲರು. ಆದರೆ ಎನ್.ಐ.ಎ.ನ್ಯಾಯಾಲಯ ಯಾವ ಆಧಾರದ ಮೇಲೆ ಐದು ಜನರನ್ನು ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ ಎನ್ನುವುದು ತಿಳಿಯದಾಗಿದೆ. ನಮಗೆ ಭಗವಂತನ ಮೇಲೆ ಸಂಪೂರ್ಣ ವಿಶ್ವಾಸವಿದೆ. ಮತ್ತು ಹೈಕೋರ್ಟ ಮೇಲಿನ ಬಲವಾದ ವಿಶ್ವಾಸವಿದ್ದು ಅಲ್ಲಿ ನ್ಯಾಯಾ ನಮ್ಮ ಪರವಾಗಿ ಬರಲಿದೆ. ಕಳೆದ ಮೂರು ವರ್ಷಗಳಿಂದ ನಾವು ಪ್ರತಿ ತಿಂಗಳು ಕುಟುಂಬ ಸಮೇತರಾಗಿ ನನ್ನ ಸಹೋದರನನ್ನು ಭೇಟಿಯಾಗುತ್ತಲಿದ್ದೇವೆ. ಆತ ಪ್ರತಿ ಬಾರಿಯೂ ತಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ವಿನಾಕಾರಣ ಸಿಲುಕಿಸಲಾಗಿದೆ. ಮತ್ತು ಈಗಿರುವ ನ್ಯಾಯಾಧೀಶರು ನನಗೆ ಗಲ್ಲು ಶಿಕ್ಷೆ ವಿಧಿಸುವ ಬೆದರಿಕೆ ಹಾಕಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪದೆ ಪದೆ ಹೇಳುತ್ತಿದ್ದನು ಆತನ ಹೇಳಿಕೆಯಂತೆ ಇಂದು ಮರದಂಡನೆ ಶಿಕ್ಷೆ ವಿಧಿಸಿ ನ್ಯಾಯಾಲಯ ನಿರ್ಣಯವನ್ನು ನೀಡಿದೆ. ಇದಕ್ಕೆ ನಮಗೆ ಬಹಳ ಬೇಸರವಾಗಿದ್ದು ನ್ಯಾಯಾ ನೀಡುವವರೇ ಅನ್ಯಾಯವೆಸಗುತ್ತಿರುವಾಗ ಯಾರನ್ನು ದೂಷಿಸಿ ಲಾಭವಿಲ್ಲ. ನಾವು ಹೈಕೋರ್ಟ್, ಸುಪ್ರಿಮ್ ಕೋರ್ಟ್ ವರೆಗೆ ಹೋಗುತ್ತೇವೆ. ಅಲ್ಲಾಹನ ಇಚ್ಚೆ ಅಲ್ಲಿ ಏನಾಗುತ್ತೋ ನೋಡೋಣ ಎಂದರು.