ಭಟ್ಕಳ: ಮೌಲ್ಯಧಾರಿತ ರಾಜಕಾರಣದ ಗುರಿಯೊಂದಿಗೆ ದೇಶದಲ್ಲಿ ಸಕ್ರೀಯವಾಗಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಭಟ್ಕಳ ಘಟಕವು ಗುರುವಾರ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯೊಂದನ್ನು ಅರ್ಪಿಸಿ ಮುಂಬರುವ ದಿನಗಳಲ್ಲಿ ದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವಂತೆ ಮನವಿ ಮಾಡಿಕೊಂಡಿದೆ.
ಬಾಬರಿ ಮಸೀದಿ ದ್ವಂಸಗೊಂಡ 26ನೇ ವರ್ಷದ ಅಂಗವಾಗಿ, ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರ ದೇಶದಲ್ಲಿ ಅಶಾಂತಿಯನ್ನುಂಟು ಮಾಡುತ್ತಿರುವ ಕಿಡಿಗೇಡಿಗಳ ಮೇಲೆ ಹದ್ದಿನಕಣ್ಣನ್ನು ಇಡುವುದರ ಮೂಲಕ ದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಕ್ರಮ ಜರಗಿಸಬೇಕೆಂದು ಮನವಿಪತ್ರದಲ್ಲಿ ಆಗ್ರಹಿಸಿರುವ ವೆಲ್ಫೇರ್ ಪಾರ್ಟಿ, ಮುಂಬರುವ ಚುನಾವಣೆಗಳನ್ನು ರಾಜಕೀಯ ಪಕ್ಷಗಳು ದುರೂಪಯೋಗ ಮಾಡಿಕೊಂಡು ಜನರನ್ನು ದಾರಿತಪ್ಪಿಸುವುದರ ಮೂಲಕ ದೇಶದಲ್ಲಿ ಅಶಾಂತಿಗೆ ಕಾರಣರಾಗಬಹುದು ಇಂತಹ ರಾಜಕೀಯ ಪಕ್ಷಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವಂತಾಗಲು ಚುನಾವಣ ಆಯೋಗಕ್ಕೆ ಸೂಚಿಸಬೇಕೆಂದು ಮನವಿಯಲ್ಲಿ ತಿಳಿಸಿದೆ.
ಅಯೋಧ್ಯ ವಿವಾದಿತ ಜಾಗದಲ್ಲಿ ಸ್ಥಿತಿಯನ್ನು ಹದಗಡೆದಂತೆ ನೋಡಿಕೊಳ್ಳಬೇಕೆಂದು ತಾವು ಸರ್ವೋಚ್ಚ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ತಿಳಿಸಿದೆ.
1992 ರಂದು ಹಾಡುಹಗಲೇ ಮಸೀದಿಯನ್ನು ದ್ವಂಸಗೊಳಿಸಿ ದೇಶದ ಜಾತ್ಯಾತೀತ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಪಮಾನವೆಸಗಲಾಗಿದೆ. ಕೆಲ ಫ್ಯಾಸಿಸ್ಟ್ ಶಕ್ತಿಗಳು ನಡೆಸಿದ ರಥಯಾತ್ರಯಿಂದಾಗಿ ಬಾಬರಿ ಮಸೀದಿ ಧ್ವಂಸದ ನಂತರ ದೇಶದಲ್ಲಿ ಕೋಮುಗಲಭೆಗಳು ಹಾಗೂ ಹಿಂಸಾಚಾರ ಭುಗಿಲೆದ್ದು ಸಾವಿರಾರು ಅಮಾಯಕರು ತಮ್ಮ ಜೀವ ತ್ಯಜಿಸಬೇಕಾಗಿ ಬಂತು. ಈ ನಿಟ್ಟಿನಲ್ಲಿ ದೇಶದಲ್ಲಿ ಕೋಮುಗಲಭೆಗಳಿಗೆ ಪ್ರಚೋದನೆ ನೀಡದಂತೆ ಅಯೋಧ್ಯೆಯಲ್ಲ ಶಾಂತಿ ಭದ್ರತೆಯನ್ನು ಕಲ್ಪಿಸಲು ರಾಷ್ಟ್ರಪತಿಗಳು ಉ.ಪ.ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 2019ರಲ್ಲಿ ಲೋಕಸಭೆ ಚುನಾವಣೆ ಸಮೀಸುತ್ತಿದ್ದು ಮತ್ತೆ ಬಾಬರಿ ವಿಷಯವನ್ನು ಕೆದಕಿ ರಾಜಕೀಯ ಪಕ್ಷಗಳು ಅದರ ದುರ್ಲಾಭ ಪಡೆಯಲು ಷಡ್ಯಂತ್ರಗಳನ್ನು ರೂಪಿಸುತ್ತಿದ್ದು ಚುನಾವಣಾ ಆಯೋಗ ಇದಕ್ಕೆ ಅವಕಾಶ ಮಾಡಿಕೊಡದೆ, ರಾಜಕೀಯ ಪಕ್ಷಗಳು ಬಾಬ್ರಿ ಮಸೀದಿ ವಿವಾದವನ್ನು ಚುನಾವಣಾ ಉದ್ದೇಶಕ್ಕೆ ದುರೂಪಯೋಗ ಪಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದೂ ಮನವಿ ಪತ್ರದಲ್ಲಿ ಉಲ್ಲೇಖಿಸಿದೆ. ಸಂವಿಧಾನದ ರಕ್ಷಣೆಯ ಅಡಿಯಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಯಾವುದೇ ರೀತಿಯ ಒತ್ತಡಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಬಾಬ್ರಿ ಮಸೀದಿ ವಿವಾದದಲ್ಲಿ ತನ್ನ ಅಂತಿಮ ತೀರ್ಪು ಪ್ರಕಟಿಸಲು ಅವಕಾಶ ಮಾಡಿಕೊಡಬೇಕೆಂದು ರಾಷ್ಟ್ರಪತಿಗಳನ್ನು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವೆಲ್ಪೇರ್ ಪಾರ್ಟಿಯ ಉತ್ತರಕನ್ನಡ ಜಿಲ್ಲಾಧ್ಯಾಕ್ಷ ಅಬ್ದುಲ್ ಜಬ್ಬಾರ್ ಅಸದಿ, ಉಪಾಧ್ಯಕ್ಷ ನಸೀಂ ಖಾನ್, ಪ್ರಧಾನ ಕಾರ್ಯದರ್ಶಿ ಶೌಕತ್ ಖತೀಬ್, ಕಾರ್ಯದರ್ಶಿ ಸಫ್ವಾನ್, ಖಜಾಂಚಿ ಅಬ್ದುಲ್ ಮಜೀದ್ ಕೋಲಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.