ಭಟ್ಕಳ: ಬ್ರಹ್ಮಶ್ರೀ ನಾರಾಯಣ ಗುರು ಸಂಘಟನಾ ಯಾತ್ರೆಯನ್ನು ಸೋಮವಾರದಂದು ಇಲ್ಲಿನ ನಾಮಧಾರಿ ಸಮಾಜದ ಮುಖಂಡರು ಸ್ವಾಗತಿಸಿ ಪೂಜೆ ಸಲ್ಲಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಅವರ ವಾಣಿಯಂತೆ ಸಂಘಟನೆಯಿಂದ ಬಲಿಷ್ಠರಾಗಿ, ವಿದ್ಯೆಯಿಂದ ಸ್ವತಂತ್ರವಾಗಿ, ಕೃಷಿ ಕೈಗಾರಿಕೆಯಿಂದ ಪ್ರಗತಿ ಹೊಂದಿ ಎನ್ನುವಂತೆ ಈಡಿಗ, ಬಿಲ್ಲವ, ನಾಮಧಾರಿ, ಪೂಜಾರಿ, ದೇಸೆ ಭಂಡಾರಿ, ಭಂಡಾರಿ, ದೀವರ ಮಕ್ಕಳು, ದೇವರ ಮಕ್ಕಳು, ಹಾಲುಕ್ಷತ್ರಿಯ ಸೇರಿದಂತೆ ಬಿ.ಎಸ್.ಎನ್.ಡಿ.ಪಿ. ಸಂಘಟನೆಗೆ ಒಳಪಟ್ಟಿದ್ದು ಈಗ ಎರಡನೇಯ ಬಾರಿಗೆ ರಾಜ್ಯಾದ್ಯಂತ ಯಾತ್ರೆ ಹಮ್ಮಿಕೊಳ್ಳಲಾಗಿದೆ. ನವೆಂಬರ್ 11ರಂದು ಜಿಲ್ಲೆಯ ಮುಂಡಗೋಡ ತಾಲೂಕಿನ ನ್ಯಾಸರಗಿ ಗ್ರಾಮದ ಶ್ರೀ ನಾರಾಯಣಗುರು ಮಂದಿರದಿಂದ ಸಂಘಟನಾ ಯಾತ್ರೆಯೂ ಚಾಲನೆಗೊಂಡಿದೆ.
ಕಳೆದೊಂದು ವಾರದ ಹಿಂದೆ ತಾಲೂಕಿಗೆ ಆಗಮಿಸಿದ ರಥಯಾತ್ರೆಯೂ ಶ್ರೀ ನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ರಥಕ್ಕೆ ಹೂ,ಪುಷ್ಪ ಸಲ್ಲಿಸಿ ಮಂಗಳಾರತಿ ಎತ್ತಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಯಾತ್ರೆಯ ಸಂಚಾರ ಮುಂದುವರೆದಿದ್ದು ಬೈಂದುರು ಮೂಲಕ ಕುಂದಾಪುರ ತಲುಪಲಿದೆ. ಕುಂದಾಪುರದ ನೆಹರು ಕ್ರೀಡಾಂಗಣದಲ್ಲಿ ಜನವರಿ 27ರಂದು ಜಾಗೃತಿ ಸಮಾವೇಶ ನಡೆಯಲಿದೆ ಎಂದು ಇದೇ ಸಂಧರ್ಭದಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಬಿ.ಎಸ್.ಎನ್.ಡಿ.ಪಿ. ರಾಜ್ಯಾಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್, ಜಿಲ್ಲಾಧ್ಯಕ್ಷ ಜಗದೀಶ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ, ತಾಲೂಕಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ನಾಮಧಾರಿ ಸಮಾಜದ ಅಧ್ಯಕ್ಷ ಎಮ್.ಆರ್.ನಾಯ್ಕ, ಮಾಜಿ ಅಧ್ಯಕ್ಷ ಡಿ.ಬಿ.ನಾಯ್ಕ, ಕಾರ್ಯದರ್ಶಿ ರಾಜೇಶ ನಾಯ್ಕ, ಸಮಾಜ ಮುಖಂಡ ಎಸ್.ಎಮ್.ನಾಯ್ಕ, ಜೆ.ಡಿ.ನಾಯ್ಕ, ದಿನೇಶ ನಾಯ್ಕ ಮುಂಡಳ್ಳಿ, ಮಂಜುನಾಥ ನಾಯ್ಕ ಜಾಲಿ, ಹೇಮಂತ ನಾಯ್ಕ, ಮಣಿ ಆಸರಕೇರಿ, ನಾಗೇಂದ್ರ ನಾಯ್ಕ ಮುಂತಾದವರು ಇದ್ದರು.