ಮೈಸೂರು: ಮೈಸೂರು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ತಾಲ್ಲೂಕಿನ ವಿವಿಧ ಕಡೆ ವಿದ್ಯುನ್ಮಾನ ಮತಯಂತ್ರಗಳಾದ ಇವಿಎಂ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನೀಡುವ ಮೂಲಕ ಮತದಾರರಿಗೆ ಮತದಾನದ ಜಾಗೃತಿಯನ್ನು ಮೂಡಿಸಲಾಯಿತು ಎಂದು ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಕೃಷ್ಣ ಅವರು ತಿಳಿಸಿದರು.
ಸೋಮವಾರ ಮೈಸೂರು ತಾಲ್ಲೂಕಿನ ಕಡಕೊಳ ಮತ್ತು ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯತಿ ಹಾಗೂ ಮಾಣಿಕ್ಯಪುರ, ಶೆಟ್ಟನಾಯಕನಹಳ್ಳಿ, ವರಕೋಡು, ಕಟ್ಟೆಹುಂಡಿ, ಮಾರ್ಬಹಳ್ಳಿ ಹುಂಡಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನೀಡಿ 2019ರ ಏಪ್ರಿಲ್ 18 ರಂದು ನಡೆಯಲಿರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನದ ಮಾಡುವಂತೆ ನಾಗರೀಕರಿಗೆ ಅರಿವು ಮೂಡಿಸಲಾಯಿತು ಎಂದರು.
ಸೆಕ್ಟರ್ 14ರ ವ್ಯಾಪ್ತಿಯ ಬೋಗಾದಿ ಮರಿಯಾನಿಕೇತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 150 ಮತ್ತು 151ರಲ್ಲಿ ಮತದಾರರಿಗೆ ಅಣಕು ಮತದಾನ ಮಾಡಿಸಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಮಾಡುವ ಬಗ್ಗೆ ನಾಗರೀಕ ಮತದಾರ ಪ್ರಭುಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಮೇಲಿನ ಎಲ್ಲಾ ಗ್ರಾಮದಲ್ಲಿಯೂ ಮತದಾರರಿಗೆ ಚುನವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಮಾರಾಟಕ್ಕಿಡದೆ ಪ್ರಜಾಪ್ರಭುತ್ವದ ಆಶಗಳನ್ನು ಕಾಪಾಡುವ ಪ್ರಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಲು ತಪ್ಪದೇ ಮತದಾನ ಮಾಡಬೇಕು ಎಂದು ಅವರು ಹೇಳಿದರು.