ಉತ್ತರ ಪ್ರದೇಶ: ಹಳಿ ತಪ್ಪಿದ ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲು, 23 ಸಾವು, 50 ಪ್ರಯಾಣಿಕರಿಗೆ ಗಾಯ
ಮುಜಾಫರ್ನಗರ: ಉತ್ತರ ಪ್ರದೇಶದ ಮುಜಾಫರ್ ನಗರದ ಬಳಿ ಪುರಿ-ಹರಿದ್ವಾರ-ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲಿನ 12 ಬೋಗಿಗಳು ಶನಿವಾರ ಹಳಿ ತಪ್ಪಿದ್ದು, ಘಟನೆಯಲ್ಲಿ 23 ಮಂದಿ ಸಾವನ್ನಪ್ಪಿ, 50ಕ್ಕು ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದ ಬಳಿ ಇಂದು ಶನಿವಾರ ಸಂಜೆ ನಡೆದಿದೆ.
ಒಡಿಶಾದ ಪುರಿಯಿಂದ ಉತ್ತರಖಂಡ್ ನ ಹರಿದ್ವಾರಕ್ಕೆ ತೆರಳುತ್ತಿದ್ದ ರೈಲು ಇಂದು ಸಂಜೆ 5.45ರ ಸುಮಾರಿಗೆ ಮುಜಾಫರ್ ನಗರ ಜಿಲ್ಲೆಯ ಖತೌಲಿ ರೈಲ್ವೆ ನಿಲ್ದಾಣದ ಸಮೀಪ ಹಳಿತಪ್ಪಿದೆ.
ಮೂಲಗಳ ಪ್ರಕಾರ, ಹಳಿ ತಪ್ಪಿದ ಕೆಲವು ಬೋಗಿಗಳು ಪಕ್ಕದ ಮನೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸಾರ್ವಜನಿಕರಿಗೆ ಮತ್ತು ಆಸ್ತಿ ಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ ಎನ್ನಲಾಗಿದೆ.
ರೈಲ್ವೆ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ವೈದ್ಯಕೀಯ ತಂಡ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ.
ಗಾಯಾಳುಗಳನ್ನು ಮೀರತ್, ಸಹರನಪುರ್ ಮತ್ತು ಇತರೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಹಣವನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದಾರೆ. ಅಲ್ಲದೆ ರೈಲ್ವೆ ಇಲಾಖೆಯಿಂದ ಮೃತ ಕುಟುಂಬಗಳಿಗೆ ತಲಾ 3.5ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಹಣವನ್ನು ಘೋಷಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಟ್ವೀಟ್ ಮಾಡಿದ್ದಾರೆ.