ಹುಬ್ಬಳ: ನೀರಿನ ಮಹತ್ವವನ್ನು ಅರಿತು ನೀರನ್ನು ಮಿತವಾಗಿ ಬಳಸಿರಿ ಎಂದು 1 ನೇ ಹೆಚ್ಚುವರಿಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಕೆ. ಎನ್. ಗಂಗಾಧರ ಹೇಳಿದರು.
ಇಂದು ಜಲಮಂಡಳ ವಿಭಾಗ ಕಚೇರಿ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ವಿಶ್ವಜಲ ದಿನಾಚರಣೆ’’ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಛಾಟಿಸಿ ಮಾತನಾಡಿದರು. ನೀರು ಪ್ರತಿಯೊಂದು ಜೀವರಾಶಿಗೂ ಎಷ್ಟು ಅವಶ್ಯಕತೆ ಇದೆಯೋ, ಹಾಗೆ ಮನುಷ್ಯ ಬದುಕಲು ನೀರು ಬಹಳ ಮುಖ್ಯವಾಗಿದೆ. ಜೀವನದ ಪ್ರತಿಯೊಂದು ಹಂತದಲ್ಲಿ ನೀರು ಪ್ರಾಮುಖ್ಯತೆ ಎಂಬುದನ್ನು ಅರಿತುಕೊಳ್ಳಬೇಕು. ಅಷ್ಟೇ ಅಲ್ಲದೆ ಜಲಕಾಯ್ದೆ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಲಮಂಡಳಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್. ಎಸ್. ರಾಜಗೋಪಾಲ ಮೊದಲು ನದಿಗಳು ತುಂಬಿ ಹರಿಯುತ್ತಿದ್ದವು. ಈಗ ಪ್ರಕೃತಿಯ ವಿಕೋಪ ಹಾಗೂ ಪರಿಸರ ಹಾನಿ ಹಿನ್ನೆಲೆಯಲ್ಲಿ ಕೆರೆ, ಹೊಂಡಗಳು ಬತ್ತಿ ನೀರಿಗಾಗಿ ಆಹಾಕಾರ ಪಡುವ ಸಂದರ್ಭ ಒದಗಿದೆ. ಪ್ರತಿ ಹಂತದಲ್ಲಿ ನೀರು ಎಷ್ಟು ಪ್ರಾಮುಖ್ಯತೆಯಾಗಿದೆ ಎಂದು ಅರಿತುಕೊಂಡು ನೀರನ್ನು ಮಿತವಾಗಿ ಬಳಸಬೇಕು ಎಂದರು. ಜಲಮಂಡಳಿಯಿಂದ ಕುಡಿಯುವ ಪೂರೈಸುವ ನೀರನ್ನು ಸದ್ಭಳಕೆ ಮಾಡಿಕೊಂಡು ಎಲ್ಲರಿಗೂ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರಕಾಶ ಅವರು ಮಾತನಾಡಿ ಜಲ ಕಾಯ್ದೆಯನ್ನು ತರಲು ನೀರು ಎಷ್ಟು ಪ್ರಾಮುಖ್ಯವಾಗಿದೆ ಎಂದು ತಿಳಿಯಬೇಕು. ನದಿಯ ಒಳಹರಿವು ಕಡಿಮೆಯಾಗಿದೆ. ಕಾರ್ಖಾನೆಗಳಿಂದ ಬರುವ ತ್ಯಾಜ್ಯವು ನದಿ ನೀರನ್ನು ಹಾಳು ಮಾಡುತ್ತಿರುವುದು ವಿಷಾದನೀಯವಾಗಿದೆ ಎಂದರು.
ವಕೀಲರ ಸಂಘದ ಎನ್ರೋಲಮೆಂಟ್ ಕಮಿಟಿಚೇರಮನ್ ಎಸ್.ಜಿ.ದೊಡ್ಡಮನಿ ಮಾತನಾಡಿ ಜಲಮಂಡಳಿಯಿಂದ ಪೂರೈಕೆಯಾಗುತ್ತಿರುವ ನೀರನ್ನು ಮಿತವಾಗಿ ಬಳಸುವುದರೊಂದಿಗೆ ಮೋಟರ್ ಅಳವಡಿಸುವವರ ವಿರುದ್ಧ ಕ್ರಮ ಕೈಕೊಳ್ಳಬೇಕು. ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದರು.
ಕೆ.ಎಲ್. ಇ. ಕಾಲೇಜಿನ ಪ್ರಾಧ್ಯಾಪಕ ಡಾ || ಶರದ್ ಜಿ ಜೋಶಿ ಅವರು ನೀರಿನ ಬಳಕೆಯ ಕುರಿತಾಗಿ ಮಾತನಾಡಿದರು. ವಕೀಲರ ಸಂಘದ ಗ್ರಂಥಾಲಯ ಸಮಿತಿ ಉಪಾಧ್ಯಕ್ಷೆ ಸವಿತಾ ಹಾನಗಲ್ ನೀರಿನ ಕುರಿತಾಗಿ ಉಪನ್ಯಾಸ ನೀಡಿದರು. ದೀಪ್ತಿ ಕೌಜಲಗಿ ಸ್ವಾಗತಿಸಿದರು. ಗಂಗಾಧರ ಬ್ಯಾಹಟ್ಟಿ ವಂದಿಸಿದರು.