ಭಟ್ಕಳ: ಇಲ್ಲಿನ ಪ್ರತಿಷ್ಟಿತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಪ್ರಸಕ್ತ ಸಾಲಿನ ನಿವ್ವಳ ಲಾಭ ೪ಕೋಟಿ ೫೬ಲಕ್ಷ ರೂ ಗಳಾಗಿದೆ ಎಂದು ಅಧ್ಯಕ್ಷ ಅಬ್ದುಲ್ ಮಜೀದ್ ಚೌಗಲೆ ತಿಳಿಸಿದರು.
ಅವರು ಕಮಲಾವತಿ ರಾಮನಾಥ ಸಭಾಭವನದಲ್ಲಿ ಜರಗಿದ ೫೨ನೇ ಸಾಲಿನ ವಾರ್ಷಿಕ ಸರ್ವಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
೨೦೧೫-೧೬ನೇ ಸಾಲಿನಲ್ಲಿ ಬ್ಯಾಂಕಿನ ಷೇರು ಬಂಡವಾಳವು ರೂ.೧೦ ಕೋಟಿ ೮೫ ಲಕ್ಷ ಇದ್ದು ಸದಸ್ಯರ ಸಂಖ್ಯೆಯು ೨೨೯೪೮ರಷ್ಟಾಗಿದೆ. ಠೇವಣಿ ಸಂಗ್ರಹಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಒಟ್ಟೂ ಠೇವಣಿ ರೂ.೧೮೩ ಕೋಟಿ ೧ ಲಕ್ಷವಾಗಿದೆ. ಹೂಡಿಕೆಯು ಪ್ರಸಕ್ತ ಸಾಲಿನಲ್ಲಿ ರೂ.೨೧೩ ಕೋಟಿ ೫೮ ಲಕ್ಷಗಳಾಗಿದ್ದು ಸಾಲ ವಿತರಣೆಯು ರೂ. ೧೯೧ ಕೋಟಿ ಗಳಷ್ಟಾಗಿದೆ. ನಿಧಿಗಳು ರೂ. ೪೧ ಕೋಟಿ ೮೦ ಲಕ್ಷವಾಗಿದ್ದು, ಬ್ಯಾಂಕಿನ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಬ್ಯಾಂಕು ರೂ. ೭ ಕೋಟಿ ೯ ಲಕ್ಷ ನಿರ್ವಹಣಾ ಲಾಭವನ್ನು ಗಳಿಸಿದ್ದು ಅದಾಯಕರ ಪಾವತಿಯ ನಂತರ ಬ್ಯಾಂಕಿನ ನಿವ್ವಳ ಲಾಭ ರೂ. ೪ ಕೋಟಿ ೫೬ ಲಕ್ಷಗಳಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಪ್ರಧಾನ ಕಾರ್ಯನಿರ್ವಾಹಕ ಎಸ್. ಎ. ರಜಾಕ್ ಬ್ಯಾಂಕಿನ ಷೇರುದಾರರ ಹಾಗೂ ಗ್ರಾಹಕರ ಸಹಕಾರ, ಆಡಳಿತ ಮಂಡಳಿಯವರ ಸಮಯೋಚಿತ ಸಲಹೆ ಹಾಗೂ ಪ್ರೋತ್ಸಾಹ, ಸಿಬ್ಬಂದಿಗಳ ಅವಿರತ ಶ್ರಮ ಬ್ಯಾಂಕು ಪ್ರಗತಿ ಹೊಂದಲು ಸಾಧ್ಯವಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕು ಈಗಾಗಲೇ ರುಪೇ ಎ.ಟಿ.ಎಂ. ಕಾರ್ಡನ್ನು ಗ್ರಾಹಕರಿಗೆ ನೀಡುತ್ತಿದ್ದು ದೇಶದಾದ್ಯಂತ ಯಾವುದೇ ಎ.ಟಿ.ಎಂ. ಉಪಯೋಗಿಸಿ ಹಣ ಪಡೆಯಲು ಅನುಕೂಲವಾಗಿದೆ ಎಂದರು. ಗ್ರಾಹಕರ ಅನುಕೂಲಕ್ಕಾಗಿ ತಮ್ಮ ಮೂರು ಶಾಖೆಗಳಲ್ಲಿ ಎ.ಟಿ.ಎಂ. ಅಳವಡಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದೂ ಪ್ರಕಟಿಸಿದರು.
ಬ್ಯಾಂಕಿನ ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಸುಭಾಷ ಎಂ. ಶೆಟ್ಟಿ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಗಳನ್ನು ಓದಿದರು.
ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಶೇಖ್ ಶಬ್ಬರ್ ಖಾದಿರ್ ಬಾಷಾ, ನಿರ್ದೇಶಕರುಗಳಾದ ಮಾಸ್ತಿ ಮೊಗೇರ್, ಡಿ.ಎಮ್.ಅನ್ಸರ್, ಶ್ರೀಧರ ನಾಯ್ಕ ಆಸರಕೇರಿ, ಅಬ್ದುಲ್ ಖಾಲಿಕ್ ಸೌದಾಗರ್, ಇಮ್ತಿಯಾಜ್ ಅಹಮ್ಮದ್ ಜುಬಾಪು, ವಿಕ್ಟರ್ ಗೋಮ್ಸ, ಪರಿ ಮುಹಮ್ಮದ್ ಹುಸೇನ್, ಜಗದೀಶ ಎಂ. ಪೈ, ಬ್ರ್ಯಾನ್ ಸಂತೋಷ್ ಡಿಸೋಜಾ, ಪರ್ವೀನ್ ಬಾಬಿ ಮುಲ್ಲಾ, ಜಾಫರ್ ಸಾಧಿಕ್ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು. ಬ್ಯಾಂಕಿನ ಪ್ರಧಾನ ಕಛೇರಿಯ ಕಾರ್ಯನಿರ್ವಾಹಕ ಶಂಭು ಹೆಗಡೆ ವಂದಿಸಿದರು,