ಉದ್ಯೋಗ ಮೇಳ ಆನ್ಲೈನ್ ನೋಂದಣಿ ಅ.೩೧ರಂದು ಮುಕ್ತಾಯ
ಕಾರವಾರ : ನವೆಂಬರ್ ೧೨ಮತ್ತು ೧೩ರಂದು ನಡೆಯಲಿರುವ ಕಾರವಾರ ಉದ್ಯೊಗ ಮೇಳದ ಆನ್ಲೈನ್ ನೊಂದಣಿ ಅಕ್ಟೊಬರ್ ೩೧ರಂದು ಕೊನೆಗೊಳ್ಳಲಿದೆ ಎಂದು ನೋಡಲ್ ಅಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ಈಗಾಗಲೇ ೧೨ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಹೆಸರನ್ನು ಆನ್ಲೈನ್ ಮೂಲಕ ನೊಂದಾಯಿಸಿದ್ದಾರೆ. ಅಕ್ಟೋಬರ್ ೩೧ರ ಬಳಿಕ ಆನ್ಲೈನ್ ನೋಂದಣಿ ಕಾರ್ಯ ಸ್ಥಗಿತಗೊಳ್ಳಲಿದೆ. ಹೆಸರು ನೊಂದಾಯಿಸಲು ಬಯಸುವ ಅಭ್ಯರ್ಥಿಗಳು ಈಗಲೇ ಹೆಸರನ್ನು ನೊಂದಾಯಿಸಬಹುದಾಗಿದೆ. ಈಗಾಗಲೇ ಹೆಸರು ನೊಂದಾಯಿಸಿರುವ ಜಿಲ್ಲೆಯ ಕಾರವಾರ ಹೊರತುಪಡಿಸಿದ ಇತರ ತಾಲೂಕುಗಳ ಅಭ್ಯರ್ಥಿಗಳಿಗೆ ನವೆಂಬರ್ ಪ್ರಥಮ ವಾರದಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ ಆಯೋಜಿಸಲಾಗುವುದು. ಸ್ಥಳ ಮತ್ತು ಸಮಯದ ಕುರಿತು ಅಭ್ಯರ್ಥಿಗಳಿಗೆ ನೇರವಾಗಿ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಅಹವಾಲು ಸ್ವೀಕಾರ
ಕಾರವಾರ : ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೋಲೀಸ್ ಠಾಣೆಯ ಅಧಿಕಾರಿಗಳು ಅಕ್ಟೋಬರ ೨೭ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮದ್ಯಾಹ್ನ ೧ ಗಂಟೆಯವರೆಗೆ ಶಿರಸಿ ಪ್ರವಾಸಿ ಮಂದಿರದಲ್ಲಿ ಹಾಗೂ ಮದ್ಯಾಹ್ನ ೩ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಯಲ್ಲಾಪುರದ ಪ್ರವಾಸಿ ಮಂದಿರದಲ್ಲಿ, ಮತ್ತು ಅಕ್ಟೋಬರ ೨೮ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮದ್ಯಾಹ್ನ ೧ ಗಂಟೆಯವರೆಗೆ ದಾಂಡೇಲಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು ಎಂದು ಉತ್ತರ ಕನ್ನಡ ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಕಾರವಾರ : ಪ್ರಸ್ತಕ ಸಾಲಿನ ಶೇ. ೭.೨೫% ನಗರಸಭಾ ಅನುದಾನದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಔಷದೋಪಚಾರಕ್ಕೆ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನವೆಂಬರ ೧೪ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅರ್ಜಿದಾರರು ನಗರಸಭೆ ವ್ಯಾಪ್ತಿಯಲ್ಲಿರಬೇಕು. ವಾರ್ಷಿಕ ಆದಾಯ ೨.೫೦ ಲಕ್ಷಕಿಂತ ಹೆಚ್ಚು ಹೊಂದಿರಬಾರದು ಮತ್ತು ಸಂಬಂದಿಸಿದ ಆಸ್ಪತ್ರೆಯ ಯಶಸ್ವಿನಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬೇಕು. ಆಸಕ್ತ ಅರ್ಜಿದಾರರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಔಷದೋಪಚಾರ ಬಿಲ್ಲಿನ ಪ್ರತಿಗಳು, ಕಾಯಿಲೆಯ ಕುರಿತು ವೈದ್ಯರಿಂದ ಪಡೆದ ಪ್ರಮಾಣ ಪತ್ರ, ಇತ್ತಚಿನ ಭಾವಚಿತ್ರದಂತಹ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನಗರಸಭೆ ಕಾರ್ಯಾಲಯ ಕಾರವಾರ ಇಲ್ಲಿಗೆ ಸಲ್ಲಿಸಲು ನಗರಸಭಾ ಆಯುಕ್ತರು ಕೋರಿದ್ದಾರೆ.