ಉಡುಪಿ: ತಿಂಗಳ ಹಿಂದೆ ಕುಂದಾಪುರದಿಂದ ನಾಪತ್ತೆಯಾಗಿದ್ದ ಭಟ್ಕಳದ ಮಗ್ದೂಮ್ ಕಾಲನಿಯ ಮೂಗಿ ಮಹಿಳೆ ಜುಲೇಖಾ(50) ಇನ್ನೂ ಪತ್ತೆಯಾಗಿಲ್ಲ. ತಾಯಿಗಾಗಿ ಹುಡುಕಾಟ ಮುಂದುವರಿಸಿರುವ ಮಕ್ಕಳು, ಅವರನ್ನು ಪತ್ತೆ ಮಾಡಿ ಒಪ್ಪಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ತಾಯಿಯ ಹುಡುಕಾಟಕ್ಕಾಗಿ ಕತಾರ್ನಿಂದ ಊರಿಗೆ ಆಗಮಿಸಿರುವ ಮಗ ಅಬ್ದುಲ್ ರಝಾಕ್ ಇಂದು ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕುಂದಾಪುರ, ಉಡುಪಿ, ಮಂಗಳೂರು ಬಸ್, ರೈಲ್ವೆ ನಿಲ್ದಾಣಗಳು ಹಾಗೂ ಸಾರ್ವಜನಿಕ ಜನಸಂದಣಿ ಇರುವ ಸ್ಥಳಗಳಲ್ಲಿ ಜುಲೇಖಾ ಅವರ ಭಾವಚಿತ್ರ ಇರುವ ಬ್ಯಾನರ್ ಹಾಗೂ ಫೋಸ್ಟರ್ಗಳನ್ನು ಹಾಕಲಾಗಿದ್ದು, ಈವರೆಗೆ ಅವರ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಅವರನ್ನು ಪತ್ತೆ ಮಾಡಿ ಕೊಡುವವರಿಗೆ 10ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.
ಜೂ.23ರಂದು ಭಟ್ಕಳದಿಂದ ಹೆಮ್ಮಾಡಿಯ ಸಂತೋಷ ನಗರದಲ್ಲಿ ವಾಸವಾಗಿರುವ ನನ್ನ ಮನೆಗೆ ಖಾಸಗಿ ಎಕ್ಸ್ಪ್ರೆಸ್ ಬಸ್ನಲ್ಲಿ ಒಬ್ಬರೇ ಹೊರಟಿದ್ದ ತಾಯಿ, ಹೆಮ್ಮಾಡಿಯ ಬದಲು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಇಳಿದು ನಾಪತ್ತೆಯಾಗಿದ್ದಾರೆ. ಬಾಯಿ ಬಾರದ ಅವರು ಮನೆಯ ವಿಳಾಸ ಗುರುತು ಹೇಳಲು ಆಗದೆ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಜೂ.28ರಂದು ಮಂಗಳೂರು ರೈಲ್ವೆ ನಿಲ್ದಾಣದಲ್ಲಿದ್ದ ಇವರಿಗೆ ಅಲ್ಲಿನ ಗಾರ್ಡ್ ಊಟ ಕೊಟ್ಟು ಉಪಚರಿಸಿದ್ದನು. ಅದರ ನಂತರ ಅವರು ಅಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ರಝಾಕ್ ತಿಳಿಸಿದರು.
ಈ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಅದಕ್ಕಾಗಿ ಈಗ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ತಾಯಿ ಭಾವಚಿತ್ರ ಇರುವ ಫೋಸ್ಟರ್ನ್ನು ಹಿಡಿದು ಸಾರ್ವಜನಿಕರಲ್ಲಿ ವಿಚಾರಿಸುತ್ತಿದ್ದೇವೆ. ನಾನು ಕತಾರ್ನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ತಾಯಿ ನಾಪತ್ತೆಯಾದ ವಿಷಯ ಕೇಳಿ ಜೂ.29ರಂದು ಊರಿಗೆ ಬಂದಿದ್ದೇನೆ. ಅಲ್ಲಿಂದ ಈ ದಿನದವರಿಗೆ ಹುಡುಕಾಟ ನಡೆಸುತ್ತಿದ್ದೇವೆ. ಇವರ ಬಗ್ಗೆ ಸುಳಿವು ದೊರೆತವರು ಮೊಬೈಲ್ ಸಂಖ್ಯೆ- 9972995084 ಅಥವಾ 9620678047ಕ್ಕೆ ಸಂಪರ್ಕಿಬಹುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜುಲೇಖಾ ಸಂಬಂಧಿ ಮುಹಮ್ಮದ್ ರವೂಫ್ ಉಪಸ್ಥಿತರಿದ್ದರು.