ಹೊಸದಿಲ್ಲಿ : ಲೋಕಸಭೆಯಲ್ಲಿ ಇಂದು ಮಂಡಿಸಲ್ಪಟ್ಟ ತಿವಳಿ ತಲಾಖ್ ಮಸೂದೆಯನ್ನು ವಿರೋಧಿಸಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾಸುದ್ದೀನ್ ಉವೈಸಿ ಲೋಕಸಭೆಗೆ ನೋಟಿಸ್ ನೀಡಿದ್ದಾರೆ. ತ್ರಿವಳಿ ತಲಾಖ್ ಅನ್ನು ಅಪರಾಧೀಕರಣಗೊಳಿಸುವ ಪ್ರಸ್ತಾಪವನ್ನು ಅವರು ವಿರೋಧಿಸಿದ್ದಾರೆ.
ಕರಡು ಮಸೂದೆಯ ಪ್ರಕಾರ ಯಾವನೇ ವ್ಯಕ್ತಿ ತನ್ನ ಪತ್ನಿಗೆ ಬಾಯ್ಮಾತಲ್ಲಿ, ಬರಹ ರೂಪದಲ್ಲಿ ಅಥವಾ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ತಲಾಖ್ ನೀಡುವುದು ಕಾನೂನು ಬಾಹಿರವಾಗಿದ್ದು ಹೀಗೆ ಮಾಡಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಅಷ್ಟೇ ಅಲ್ಲದೆ ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ನೀಡಬೇಕೆಂದೂ ಈ ಕರಡು ಮಸೂದೆಯಲ್ಲಿ ತಿಳಿಸಲಾಗಿದೆ. ಸಚಿವ ಸಂಪುಟದಿಂದ ಅನುಮೋದಿಸಲ್ಪಟ್ಟ ಈ ಕರಡು ಮಸೂದೆಯನ್ವಯ ವಿಚ್ಛೇದಿತ ಮುಸ್ಲಿಂ ಮಹಿಳೆಯರು ತಮ್ಮ ಅಪ್ರಾಪ್ತ ಮಕ್ಕಳನ್ನು ತಮ್ಮ ಬಳಿಯೇ ಇರಿಸಬಹುದಾಗಿದೆ. ಈ ಮಸೂದೆ ವ್ಯಾಪ್ತಿಗೆ ಬರುವ ಅಪರಾಧಗಳು ಜಾಮೀನುರಹಿತವಾಗಿದ್ದು ಅದು ಜಮ್ಮು ಕಾಶ್ಮೀರ ಹೊರತು ಪಡಿಸಿ ಇಡೀ ದೇಶಕ್ಕೆ ಅನ್ವಯವಾಗುತ್ತದೆ.
ಗುಜರಾತಿನಲ್ಲಿರುವ ‘ನಮ್ಮ ಅತ್ತಿಗೆ’ಗೂ ನ್ಯಾಯ ಸಿಗಲಿ: ತ್ರಿವಳಿ ತಲಾಖ್ ಮಸೂದೆಯನ್ನು ಗುರುವಾರ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಂಡಿಸಿದರು.
ಈ ಸಂದರ್ಭ ವಿಪಕ್ಷಗಳಾದ ಟಿಎಂಸಿ, ಬಿಜೆಡಿ, ಆರ್ ಜೆಡಿ, ಎಐಎಂಐಎಂನಿಂದ ಮಸೂದೆಗೆ ಭಾರೀ ವಿರೋಧಗಳು ವ್ಯಕ್ತವಾಯಿತು. ಈ ವೇಳೆ ಮಾತನಾಡಿದ ಅಸಾದುದ್ದೀನ್ ಉವೈಸಿ, “ಗುಜರಾತ್ ನಲ್ಲಿರುವ ನಮ್ಮ ಅತ್ತಿಗೆಯೂ ಸೇರಿದಂತೆ ಎಲ್ಲಾ ಧರ್ಮಗಳ 20 ಲಕ್ಷ ಏಕಾಂಗಿ ಮಹಿಳೆಯರಿಗೆ ನ್ಯಾಯ ದೊರೆಯಬೇಕು ಎಂದರು.
ತ್ರಿವಳಿ ತಲಾಖನ್ನು ಅಪರಾಧವನ್ನಾಗಿಸುವ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಉವೈಸಿ, ಪ್ರಧಾನಿ ನರೇಂದ್ರ ಮೋದಿಯವರ ಪತ್ನಿಯ ಹೆಸರನ್ನು ಹೇಳದೆ “ನಮ್ಮ ಅತ್ತಿಗೆಯಂತಹ 20 ಲಕ್ಷ ಮಹಿಳೆಯರಿಗೆ ನ್ಯಾಯ ದೊರಕಬೇಕು” ಎಂದರು.
ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸಿದ ಉವೈಸಿ. ಈ ಮಸೂದೆಯು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯದಂತಿದೆ. ಪತಿ ತೊರೆದು ಹೋದ, ಇತರ ಧರ್ಮಗಳ 20 ಲಕ್ಷ ಮಹಿಳೆಯರಿಗೂ ಒಂದು ಕಾನೂನು ರಚಿಸಿ, ಇದರಲ್ಲಿ ನಮ್ಮ ಗುಜರಾತಿನ ಅತ್ತಿಗೆಯೂ ಸೇರಿರಲಿ…. ಅವರಿಗೂ ನ್ಯಾಯ ಸಿಗಬೇಕು” ಎಂದರು,