ಭಟ್ಕಳ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರವೂ ತನ್ನೊಡಲಲ್ಲಿ ರಾಶಿ ರಾಶಿ ತ್ಯಾಜ್ಯ ಇಟ್ಟುಕೊಂಡು ನಿರ್ಲಕ್ಷ್ಯಕ್ಕೊಳಗಾಗಿದ್ದು, ಪ್ರವಾಸಿ ಕೇಂದ್ರಕ್ಕೆ ನಿತ್ಯ ಬರುವ ಸಾವಿರಾರು ಪ್ರವಾಸಿಗರಲ್ಲಿ ಈ ಚಿತ್ರಣ ಅಸಹ್ಯ ಹುಟ್ಟಿಸುತ್ತಿದೆ.
ಇಲ್ಲಿನ ಸುಂದರ ತಾಣ ಮುರುಡೇಶ್ವರಕ್ಕೆ ಇದೀಗ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮಪಂಚಾಯತ ಕುರುಡುತನದಿಂದ ಕೆಟ್ಟ ಹೆಸರು ಬರುವಂತಾಗಿದೆ. ವರ್ಷದ ಪ್ರತಿ ದಿನವೂ ದೇಶ ವಿದೇಶದಿಂದ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರೂ ಸ್ವಚ್ಛತೆಯ ಬಗ್ಗೆ ಇಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲವಾಗಿದೆ. ಇದರ ಪರಿಣಾಮ ಪಂಚ ಕ್ಷೇತ್ರದಲ್ಲಿ ಒಂದಾದ ಮುರ್ಡೇಶ್ವರವೂ ತ್ಯಾಜ್ಯ ವಸ್ತುಗಳಿಂದ ಪ್ರವಾಸಿಗರಲ್ಲಿ ಬೇಸರ ಮೂಡುವಂತಾಗಿದೆ.
ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಶಿವನ ಮೂರ್ತಿಯನ್ನು ಒಳಗೊಂಡಿರುವ ಮತ್ತು ಇಲ್ಲಿನ ಕಡಲತೀರ, ವಾಟರ್ ಸ್ಪೋಟ್ರ್ಸ್ಗೆ ಆಕರ್ಷಿತರಾಗಿ ಈ ಪ್ರವಾಸಿ ತಾಣಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಪ್ರವಾಸಿ ತಾಣದಲ್ಲಿ ಕಸ ವಿಲೇವಾರಿ ಮಾಡಬೇಕಾದ ಅಗತ್ಯತೆ ಇದ್ದು, ಈ ಬಗ್ಗೆ ಸಾಕಷ್ಟು ವರ್ಷದಿಂದ ನಿರ್ಲಕ್ಷತನ ಕಂಡು ಬರುತ್ತಿದೆ. ಸುಂದರ ಸಮುದ್ರ ತೀರದಲ್ಲಿ ಈಜಲು ನೆಮ್ಮದಿಯಾಗಿ ಮೋಜು ಮಸ್ತಿ ಮಾಡಲು ಬರುವ ಪ್ರವಾಸಿಗರಿಗೆ ಕಸ, ತ್ಯಾಜ್ಯಗಳೇ ಕಂಡು ಬರುತ್ತಿದೆ. ಪ್ರವಾಸಿಗರಿಂದಲೇ ತುಂಬಿರುವ ವಿಶ್ವ ಪ್ರಸಿದ್ದ ಪ್ರವಾಸಿ ತಾಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡದೇ ಇರುವುದು ತಾಣದ ಬಗ್ಗೆ ಪ್ರವಾಸಿಗರಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ಕೂಡಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತ್ಯಾಜ್ಯಕ್ಕೆ ಮುಕ್ತಿ ನೀಡಬೇಕಿದೆ.
ಸ್ಥಳಿಯ ಅಂಗಡಿ ಮಾಲೀಕರ ಬೇಜವಾಬ್ದಾರಿ: ಮುರ್ಡೇಶ್ವರದ ಕಡಲತೀರದಲ್ಲಿರುವ ಗೂಡಂಗಡಿ ಹಾಗೂ ಸುತ್ತಮುತ್ತಲಿನ ಕೆಲ ಅಂಗಡಿ ಮಾಲೀಕರು ಸಂಜೆ ವೇಳೆಗೆ ಪ್ಲಾಸ್ಟಿಕ್, ಕಾಗದ, ಚೀಲ, ಆಹಾರ ಪದಾರ್ಥ ಹೀಗೆ ಎಲ್ಲ ತ್ಯಾಜ್ಯವನ್ನು ಸುರಿಯುತ್ತಿರುವುದು ಸ್ಥಳಿಯರ ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ಅವರ ಕಸ ಹಾಕದಿರಲು ತಿಳಿಸಿದರು ಮತ್ತೆ ಅದೇ ರೂಢಿ ಪುನರಾವರ್ತಿತವಾಗುತ್ತಿದೆ ಹೊರತು ಕಸ ಮಾತ್ರ ಬಂದು ಬಿಳುವುದು ನಿಂತಿಲ್ಲ. ಇದರಿಂದ ಪ್ಲಾಸ್ಟಿಕ್ ರಾಶಿಯೇ ಉಂಟಾಗಿದ್ದು, ಜಾನುವಾರುಗಳು ಪ್ರತಿನಿತ್ಯ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಿವೆ. ಜೊತೆಗೆ ಸುತ್ತಮುತ್ತಲಿನ ಭಾಗಗಳಲ್ಲಿ ಇದರ ಗಬ್ಬು ವಾಸನೆ ಬರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರ ಆತಂಕವಾಗಿದೆ.
ಅಸಡ್ಡೆ ತೋರುತ್ತಿರುವ ಗ್ರಾಮ ಪಂಚಾಯಿತಿ : ಇಲ್ಲಿನ ಸುಂದರ ಕಡಲತೀರದಲ್ಲಿ ತ್ಯಾಜ್ಯ ಚೆಲ್ಲುತ್ತಿರುವುದರಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ವಿವಿಧ ಸಂಘಟನೆಗಳು ಗ್ರಾ.ಪಂ ಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಈ ಬಗೆಗಿನ ಪೋಟೊ ತೋರಿಸಿ ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಲು ಒತ್ತಾಯಿಸಿದ್ದೆವು. ಆದರೆ ನೆಪ ಮಾತ್ರಕ್ಕೆ ಬಂದು ಕಸ ತೆಗೆದ ರೀತಿಯಲ್ಲಿ ಪೋಟೋಗೆ ಪೋಸ್ ಕೊಟ್ಟು ತೆರಳಿದವರು ಮರಳಿ ಬಂದಿಲ್ಲ. ಕಾಟಾಚಾರದ ಸ್ವಚ್ಛತೆ ಮಾಡುವ ಬದಲು ಶಾಶ್ವತ ಕಸ ವಿಲೇವಾರಿಗೆ ಪಂಚಾಯತ ಅಗತ್ಯ ಕ್ರಮ ಅನುಸರಿಸಬೇಕಾಗಿದೆ. ಈ ಬಗ್ಗೆ ಸ್ಥಳಿಯರು ಜಿಲ್ಲಾಡಳಿತದ ಗಮಕ್ಕೂ ತಂದಿದ್ದು ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಈ ಬಗ್ಗೆ ಗಮನ ಹರಿಸಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಸ್ಥಳಿಯರ ಹಾಗೂ ಕೆಲ ಸಂಘಟನೆಗಳು ಒತ್ತಾಯಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಮಾಡಲು ಯಾವುದೇ ಪ್ರತ್ಯೇಕ ಘಟಕವಿಲ್ಲ. ಇಲ್ಲಿನ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇದನ್ನು ತೆಗೆದುಕೊಳ್ಳುತ್ತಿಲ್ಲ. ಇದರಿಂದ ಸಂಗ್ರಹಿಸಿದ ತ್ಯಾಜ್ಯ ಹಾಗೆ ಉಳಿಯಲಿದ್ದು, ಘಟಕಕ್ಕೆ ಜಾಗದ ಸಮಸ್ಯೆ ಇದೆ. ಈಗಾಗಲೇ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಅಲ್ಲಿನ ಪ್ರಕ್ರಿಯೇ ಪೂರ್ಣಗೊಂಡು ಜಾಗ ಸಿಗಬೇಕಿದೆ ಎಂದು ಮಾವಳ್ಳಿ ಪಂಚಾಯತ ಪಿಡಿಓ ನಟರಾಜು ಪ್ರತಿಕ್ರಿಯಿಸಿದ್ದಾರೆ.