ತಿರುಪುರ್ : ಬಿಜೆಪಿ ಮುಖಂಡನೋರ್ವನನ್ನು ಕೊಲೆ ಮಾಡಿ ಅವರ ದೇಹವನ್ನು ಶೆಡ್ ಒಂದರ ಚಾವಣಿಗೆ ನೇತು ಹಾಕಿದ ಘಟನೆ ಇಲ್ಲಿಗೆ ಸಮೀಪದ ತಿರುಪುರ್ ಎಂಬಲ್ಲಿ ನಡೆದಿದೆ.
ತಿರುಪುರ್ ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಸ್.ಮಾರಿಮುತ್ತು (52 ವರ್ಷ) ಕೊಲೆಯಾದವರು ಎಂದು ಪೊಲೀಸರು ತಿಳಿಸಿದ್ದಾರೆ. ಮುತನ್ಪಾಲಯಂ ಎಂಬಲ್ಲಿಯ ನಿವಾಸಿಯಾಗಿರುವ ಮಾರಿಮುತ್ತು ಇಂದು (ಶುಕ್ರವಾರ) ಮುಂಜಾವ ಮನೆಯ ಬಳಿಯಿರುವ ದನದ ಕೊಟ್ಟಿಗೆಗೆ ಹೋಗಿದ್ದರು. ಎಷ್ಟು ಹೊತ್ತಾದರೂ ಮನೆಗೆ ಮರಳದಿದ್ದಾಗ ಮನೆಯವರು ಅವರನ್ನು ಹುಡುಕಿ ಕೊಟ್ಟಿಗೆಗೆ ತೆರಳಿದಾಗ ಅವರನ್ನು ಕೊಲೆ ಮಾಡಿ ದನದ ಕೊಟ್ಟಿಗೆಯ ಚಾವಣಿಗೆ ನೇತು ಹಾಕಿರುವುದು ಕಂಡು ಬಂದಿತು. ಅವರ ಕೈಗಳನ್ನು ಹಿಂದಕ್ಕೆ ಬಿಗಿದು ಕಟ್ಟಲಾಗಿತ್ತು. ದೇಹದ ಮೇಲೆ ಗಾಯದ ಗುರುತು ಕಂಡು ಬಂದಿದೆ. ಮಾರಿಮುತ್ತು ಅವರಿಗೆ ಹಲ್ಲೆ ನಡೆಸಿ ಕೊಲೆಗೈದ ಬಳಿಕ ದೇಹವನ್ನು ನೇತುಹಾಕಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.