ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

Source: sonews | By Staff Correspondent | Published on 13th November 2018, 12:18 AM | Special Report | Public Voice | Don't Miss |

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ಅಚ್ಛಾ  ಹಿಂದೂಸ್ಥಾನ್ ಹಮಾರ' ಎಂದು ಸಾರಿದ ಸರ್ ಅಲ್ಲಮಾ ಇಕ್ಬಾಲ್ ಹಾಗೂ ಸ್ವಾತಂತ್ರ್ಯಭಾರತದ ಪ್ರಥಮ ಶಿಕ್ಷಣ ಸಚಿವ ಮೌಲಾನ ಅಬುಲ್ ಕಲಾಂ ಅಝಾದ್ ರನ್ನು ಸ್ಮರಿಸಿ ಗೌರವಿಸಿ ಆದರಿಸಿದ ದಿನಗಳಾಗಿದ್ದವು.

ಭಾರತದ ಇತಿಹಾಸದಲ್ಲಿ ಹಜರತ್‌‌ ಟಿಪ್ಪು ಸುಲ್ತಾನ್, ಅಲ್ಲಮ ಮುಹಮ್ಮದ್ ಇಕ್ಬಾಲ್ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ರವರ ಪಾತ್ರ ಮತ್ತು ಕೊಡುಗೆಗಳನ್ನು ಕೆಲವು ಇತಿಹಾಸಕಾರರು ಮರೆಮಾಚಿಸಿರಬಹುದು, ಇನ್ನೂ ಕೆಲವರು ಮರೆತಿರಬಹುದು ಆದರೆ ಇಂದಿಗೂ ಇತಿಹಾಸದಿಂದ ಅಳಿಸಲು ಯಾರಿಂದಲು ಸಾದ್ಯವಾಗಲಿಲ್ಲ.

ಹಜರತ್ ಟಿಪ್ಪು ಸುಲ್ತಾನ್ ಅವರು 18ನೇ ಶತಮಾನದಲ್ಲಿ ಭಾರತದ ಸ್ವಾತಂತ್ರ್ಯದ ಕಿಡಿ ಹೆಚ್ಚಿದವರಲ್ಲಿ ಮೊದಲಿಗರು.

ಹಲವಾರು ರಾಜರು ಬ್ರಿಟಿಷ್ ರಿಗೆ ಶರಣಾಗಿ, ತಮ್ಮ ಐಷಾರಾಮಿ ಜೀವನವನ್ನು ಸಾಗಿಸಲು ಸಾಮಂತ ರಾಜರಾಗಿ ಉಳಿದು ಬದುಕುತ್ತಿದ್ದರು. ಆದರೆ, ಇವರು ಬ್ರಿಟಿಷ್ ರ ವಿರುದ್ಧ ಹೋರಾಡಲು ನೆರೆಯ ಸಂಸ್ಥಾನದ ರಾಜರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ ಮೊದಲ ರಾಜರಾಗಿದ್ದರು.

ಅದೆಷ್ಟೋ ರಾಜರು, ರಾಜಮನೆತನಗಳು ಅಧಿಕಾರ ಕಳೆದುಕೊಂಡು ಪಲಾಯನ ಮಾಡಿದ ಉದಾಹರಣೆಗಳು ಇದ್ದಂತಹ ಕಾಲಘಟ್ಟದಲ್ಲಿ ಯುದ್ಧಭೂಮಿಯಲ್ಲಿ ಹೋರಾಡಿ ವೀರಮರಣವನ್ನು ಹೊಂದಿದ ಶೂರ ನಾಯಕ ಟಿಪ್ಪು ಸುಲ್ತಾನ್ ರವರಾಗಿದ್ದರು.

ಇವರ ಶತಮಾನದಲ್ಲಿ ವಿಶ್ವದಾದ್ಯಂತ ಪ್ರಭಾವಿ ನಾಯಕರುಗಳಾದ ಫ್ರಾನ್ಸಿನ ನೆಪೋಲಿಯನ್ ಬೋನಾಪಾರ್ಟ್, ಅಮೆರಿಕಾದ ಮಾರ್ಟಿನ್ ಲೂಥರ್ ,ಉತ್ತರ ಭಾರತದ ಬಹದ್ದೂರ್ ಷಾ ಜಫರ್ , ಮಹಾರಾಜ ರಂಜಿತ್ ಸಿಂಗ್ ತಮ್ಮದೇ ಆದ ಛಾಪು ಮೂಡಿಸುತ್ತಿದ್ದ ಕಾಲಘಟ್ಟದಲ್ಲಿ ಮೈಸೂರು ಸಂಸ್ಥಾನದಲ್ಲಿ ಕ್ಷಿಪಣಿ ಪರೀಕ್ಷೆ , ನೀರಾವರಿ ಯೋಜನೆಗಳು , ರೇಷ್ಮೆ ಉದ್ಯಮ, ಸಾಮಾಜಿಕ ಸಮಾನತೆ ಮತ್ತು ಆಧುನಿಕ ಯುದ್ಧ ತಂತ್ರಜ್ಞಾನದ ಮೂಲಕ 40 ಸಾವಿರ ಚ.ಕಿ.ಮೀ. ಇದ್ದಂತಹ ಮೈಸೂರು ರಾಜ್ಯವನ್ನು 80 ಸಾವಿರ ಚ.ಕಿ.ಮೀ ಗೆ ವಿಸ್ತರಿಸಿ ಬ್ರಿಟಿಷರಿಗೆ ದುಃಸ್ವಪ್ನವಾಗಿ ಕಾಡಿದರು.

ಪ್ರಸ್ತುತದಲ್ಲಿ ಬೇರೆ ಬೇರೆ ರಾಜಕೀಯ ಇಚ್ಛಾಶಕ್ತಿಗಳು ಇವರನ್ನು ತೆಗಳವ ಮತ್ತು ಒಂದು ಸಮುದಾಯದ ಪ್ರತೀಕವನ್ನಾಗಿ ಮಾಡುವುದರ ಮೂಲಕ ಇವರನ್ನು ಸೀಮಿತಗೊಳಿಸುತ್ತಿದ್ದಾರೆ.

ಆದರೆ ಇತಿಹಾಸ ಯಾವತ್ತೂ ಇವರನ್ನು ಬ್ರಿಟಿಷ್ ಮುಕ್ತ ಭಾರತದ ಕನಸು ಕಂಡ ಮೊದಲ ರಾಜ ಎಂಬುವುದನ್ನು ಮರೆಯುವುದಿಲ್ಲ.

ತದನಂತರ ...

ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ 19ನೇ ಶತಮಾನದ ಕೊನೆಯಲ್ಲಿ ಮತ್ತು 20 ನೇ ಶತಮಾನದ ಮೊದಲಾರ್ಧದಲ್ಲಿ ಎರಡು ಪ್ರಮುಖ ವ್ಯಕ್ತಿಗಳನ್ನು ನಾವು ಕಾಣಬಹುದು.

ಮೊದಲನೇಯದಾಗಿ
"anthem of opposition to the British rule in India" ಎಂದೇ ಹೆಸರಾಗಿರುವ "ತರಾನಾ-ಎ-ಹಿಂದ್"(ಸಾರೆ ಜಹಾನ್ ಸೆ ಅಚ್ಚ) ಎಂಬ ಹೋರಾಟ ಗೀತೆಯನ್ನು ಕೊಟ್ಟ ಅಲ್ಲಮ ಮಹಮ್ಮದ್ ಇಕ್ಬಾಲ್ ರವರು.
ಇವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಭಾರತ ವಿಭಜನೆಯ ಮುಂಚೆ ಸ್ವಾತಂತ್ರ್ಯಕ್ಕಾಗಿ ತಮ್ಮ ಬರವಣಿಗೆಗಳ ಮೂಲಕ ತೀವ್ರವಾದ ಹೋರಾಟವನ್ನು ಮಾಡಿದವರು.

ಇವರು ಸ್ವಾತಂತ್ರ್ಯದ ನಂತರ ಪಾಕಿಸ್ತಾನಕ್ಕೆ ಸೇರಿಕೊಂಡ ಕಾರಣದಿಂದಾಗಿ ಸ್ವಾತಂತ್ರ್ಯದ ಸಂದರ್ಭದಲ್ಲಿನ ಇವರ ಹೋರಾಟ ಮರೆಮಾಚಿ ಹೋಗಿದೆ ಹಾಗೂ ಟು-ನೇಷನ್ ಥಿಯೇರಿಯನ್ನು ಸ್ವೀಕರಿಸಿ ಪಾಕಿಸ್ತಾನಕ್ಕೆ ಸೇರಿದರ ಪರಿಣಾಮ ಇವರ ಕೊಡುಗೆ ಗುರುತಿಸಲಾಗುತ್ತಿಲ್ಲ.
ಆದರೆ, ಜಾಗತಿಕ ಮಟ್ಟದಲ್ಲಿ ಇವರು ಒಬ್ಬ ಸಾಹಿತಿಯಾಗಿ ಮತ್ತು ತೀಕ್ಷ್ಣ ಬರಹಗಾರನಾಗಿ, ತನ್ನ ಬರವಣಿಗೆಯ ಆರಂಭಿಕ ಕಾಲದಲ್ಲಿ ಭಾರತದ ಅಖಂಡತೆ ಮತ್ತು ಸ್ವಾತಂತ್ರ್ಯದ ಕುರಿತು ಬರೆದು ಪ್ರಸಿದ್ಧರಾಗಿದ್ದಾರೆ.

ಎರಡನೇಯದಾಗಿ...

"ಓ ಭಾರತದ ಮುಸ್ಲಿಮರೇ ಇದು ನಿಮ್ಮ ದೇಶ, ಇದು ನಮ್ಮ ಪೂರ್ವಜರು ಕಟ್ಟಿ ಬೆಳೆಸಿದ ನಾಡು, ಭಾರತದ ಮುಸ್ಲಿಮರೇ ಹಿಂತಿರುಗಿ" ಎಂದು ದೆಹಲಿಯ ಜಾಮಾ ಮಸೀದಿಯ ಮುಂದೆ ನಿಂತು ಹೇಳಿಕೆ ನೀಡುವುದರ ಮೂಲಕ ಸಾವಿರಾರು ಮುಸ್ಲಿಂರನ್ನು ಭಾರತದಲ್ಲೇ ನೆಲೆಸಲು ಕರೆಕೊಟ್ಟ ಧೀಮಂತ ನಾಯಕ, ಭಾರತ ರತ್ನ "ಮೌಲಾನಾ ಅಬುಲ್ ಕಲಾಂ ಆಜಾದ್".

 

ಇವರು ಕೇವಲ ಒಂದು ಸಮುದಾಯದ ನಾಯಕನಾಗಿ ಉಳಿಯದೆ ಒಂದು ಜಾತ್ಯತೀತ ರಾಷ್ಟ್ರವನ್ನು ಕಟ್ಟಲು ಶ್ರಮಿಸಿದ ರಾಷ್ಟ್ರ ನಾಯಕ.

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾದ ಇವರು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ IIT's ಮತ್ತು ಯೂನಿವರ್ಸಿಟಿ ಗಳನ್ನು ಸ್ಥಾಪಿಸಿದ ಕೀರ್ತಿಯನ್ನು ಹೊಂದಿದ್ದಾರೆ.

ಇವರು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (UGC) ಸ್ಥಾಪಿಸಿ ರಾಷ್ಟ್ರಾದ್ಯಂತ ವಿಶ್ವವಿದ್ಯಾಲಯಗಳಿಗೆ ಧನ ಸಹಾಯವನ್ನು ನೀಡುವಂತಹ ಒಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ನೀಡಿದರು.

 

ಸ್ವಾತಂತ್ರ್ಯದ ನಂತರದ ಭಾರತದ ಶೈಕ್ಷಣಿಕ ವ್ಯವಸ್ಥೆಯನ್ನು ನಾವು ಗಮನಿಸುತ್ತಾ ಬಂದಾಗ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಇವರು ಕೈಗೊಂಡಂತಹ ಹಲವಾರು ಯೋಜನೆಗಳು, ಸಂಸ್ಥೆಗಳ ಸ್ಥಾಪನೆ ಮತ್ತು ಶಿಕ್ಷಣ ರಂಗಕ್ಕೆ ಕೊಟ್ಟಿದ್ದ ಹೆಚ್ಚಿನ ಮಹತ್ವವು ಇಂದು ಹಲವಾರು ರಂಗಗಳಲ್ಲಿ ಅನ್ವೇಷಣೆಗೆ, ಆವಿಷ್ಕಾರಗಳಿಗೆ, ಸಂಶೋಧನೆಗಳಿಗೆ ಮತ್ತು ಸಿದ್ಧಾಂತಗಳ ಪ್ರತಿಪಾದನೆಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.

ಅಷ್ಟೇ ಅಲ್ಲದೆ ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಗಮನಿಸುವ, ವಿಮರ್ಶಾತ್ಮಕವಾಗಿ ಅವುಗಳ ಕುರಿತು ಚರ್ಚೆ ಮಾಡುವ ಕೆಲಸ ಮಾಡುತ್ತಿರುವ JNU, DU, BHU,AMU ಮತ್ತು IIT's ಗಳು ಇವರು ಬುನಾದಿ ಹಾಕಿದ ಶಿಕ್ಷಣ ಸಂಸ್ಥೆಗಳೇ ಎಂದು ಹೇಳುದರಲ್ಲಿ ಸಂಶಯವಿಲ್ಲ.

 

ಒಟ್ಟಿನಲ್ಲಿ ಹೇಳುವುದಾದರೆ ಮೌಲಾನ ಅಬುಲ್ ಕಲಾಂ ಆಜಾದ್ ಅವರು ಭಾರತ ಕಂಡಂತಹ ಒಬ್ಬ ಶ್ರೇಷ್ಠ ಜಾತ್ಯಾತೀತ ನಾಯಕರಾಗಿದ್ದರು.

ಇವರು ಭಾರತ ರತ್ನ ಪಡೆದಾಗಿಯೂ ಮತ್ತು ಅವರ ಜನ್ಮದಿನದಂದು 'ರಾಷ್ಟ್ರೀಯ ಶಿಕ್ಷಣ ದಿನ' ಎಂದು ಆಚರಿಸಲಾಗುತ್ತಿದ್ದರೂ, ರಾಷ್ಟ್ರಮಟ್ಟದಲ್ಲಿ ಇವರಿಗೆ ಸಿಗಬೇಕಾದ ಗೌರವ ಇದುವರೆಗೆ ಸಿಗದೇ ಇರುವಂತಹದ್ದು ಒಂದು ವಿಪರ್ಯಾಸದ ಸಂಗತಿ.
ಕೇವಲ ಇವರ ಹೆಸರ ಮೇಲೆ ಒಂದೆರಡು ಸಂಸ್ಥೆಗಳನ್ನು ಸ್ಥಾಪಿಸಿ, ಒಂದೆರಡು ಸ್ಕಾಲರ್ ಶಿಪ್ ಗಳನ್ನು ಕೊಟ್ಟು ಇವರನ್ನು ಭಾರತದ ಇತಿಹಾಸದಲ್ಲಿ ಹೆಚ್ಚು ಗುರುತಿಸದಿರುವುದು ಒಂದು ದುರಂತವೇ ಸರಿ.

ಈ ಮೂವರು ನಾಯಕರುಗಳ ಹುಟ್ಟು ದಿನ ಒಂದರ ಹಿಂದೆ ಇನ್ನೊಂದು ಬಂದು ಈ ಮೂರು ಇತಿಹಾಸ ಪುರುಷರ ಬಗ್ಗೆ, ಅವರ ಸಾಧನೆ, ಹೋರಾಟ ಮತ್ತು ಕೊಡುಗೆಗಳ ಬಗ್ಗೆ ನೆನಪಿಸಿಕೊಳ್ಳಲು ಒಂದು ಅವಕಾಶ ಮತ್ತು ಸುಸಂದರ್ಭ ಸಿಕ್ಕಹಾಗಾಯಿತು.

 

ಡಾ.ಸೈಯ್ಯದ್ ಮುಜೀಬ್ ಆಹ್ಮದ್

ಉಪನ್ಯಾಸಕರು

ಸರಕಾರಿ ಪ್ರಥಮ ದರ್ಜೆ ಕಾಲೇಜ್

ಸಿಂಧನೂರು

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...