ಕಾರವಾರ : ದೇಶಕ್ಕಾಗಿ ಕರುಳಕುಡಿಗಳನ್ನೇ ಒತ್ತೆ ಇಟ್ಟ ಟಿಪ್ಪು ದೇಶದ್ರೋಹಿಯಲ್ಲ ಎಂದು ಉಪನ್ಯಾಸಕಿ ಡಾ ವಿನಯಾ ವಕ್ಕುಂದ ಪ್ರತಿಪಾದಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬ್ರಿಟಿಷ್ ವಿರುದ್ಧದ ಯುದ್ಧದಲ್ಲಿ ಯುದ್ಧನಷ್ಟ ತುಂಬಿಗೊಡುವಂತೆ ಬ್ರಿಟಿಷರ ನಡುವೆ ಆದ ಒಪ್ಪಂದದ ಸಂದರ್ಭದಲ್ಲಿ ಟಿಪ್ಪು ದೇಶದ ಜನರ ಮೇಲೆ ತೆರಿಗೆ ಹೊರೆಯಾಗಬಾರದೆಂದು ತನ್ನ ಕರುಳ ಕುಡಿಗಳನ್ನೆ ಒತ್ತೆ ಇಡುತ್ತಾನೆ. ಹೀಗಿರುವಾಗ ದ್ರೋಹಿ ಹೇಗಾಗುತ್ತಾನೆ ಎಂದು ಪ್ರತಿಪಾದಿಸಿದರು.
ಟಿಪ್ಪು ಸುಲ್ತಾನ್ ಎಂದೂ ಅನ್ಯಧರ್ಮಗಳ ವಿರುದ್ಧವಾಗಿ ನಡೆದುಕೊಂಡವನಲ್ಲ ಎಂಬುದು ದಾಖಲೆಗಳಿಂದ ವ್ಯಕ್ತವಾಗುತ್ತದೆ ಎಂದ ಅವರು, ಬ್ರಿಟಿಷ್ ಸೇನೆ ಮಲಬಾರ್ ಹಾಗೂ ಮಂಗಳೂರು ಭಾಗದಲ್ಲಿ ಪದೇ ಪದೇ ನಡೆಸುತ್ತಿದ್ದ ಕುತಂತ್ರಕ್ಕೆ ಪ್ರತಿಯಾಗಿ ಅನಿವಾರ್ಯ ಸಂದಭದಲ್ಲಿ ಆದ ಮತಾಂತರದ ಸಂಗತಿಯನ್ನು ಇತಿಹಾಸ ತಿರುಚುವಂತೆ ಮಾಡುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು. ಅದರ ಹೊರತಾಗಿ ಟಿಪ್ಪು ಸರ್ವಧರ್ಮ ಸಹಿಷ್ಣು, ಟಿಪ್ಪು ಒಬ್ಬ ಸೂಫಿ ಸಂತನಾಗಬೇಕಿದ್ದ ವ್ಯಕ್ತಿ. ಅವನ ಆಡಳಿತಾವಧಿಯಲ್ಲಿ ಸಾಕಷ್ಟು ದೇವಾಲಯಗಳ ಜೀರ್ಣೋದ್ಧಾರವಾಗಿವೆ. ಮರಾಟರಿಂದ ದಾಳಿಗೊಳಗಾದ ಶೃಂಗೇರಿ ದೇವಸ್ಥಾನ, ನಂಜನಗೂಡಿನ ಪಚ್ಚೆಲಿಂಗ ವಿಗ್ರಹ, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ ಹೀಗೆ ಹಲವಾರು ಉದಾಹರಣೆಗಳಿವೆ ಎಂದರು.
ಇದಲ್ಲದೆ, ಸಾಮಾಜಿಕ ಸುಧಾರಣೆಯ ಹರಿಕಾರನಾಗಿದ್ದ ಟಿಪ್ಪು ಸುಲ್ತಾನ ತಮ್ಮ ಸಾಮ್ರಾಜ್ಯದಲ್ಲಿ ಹಲವಾರು ಸುಧಾರಣೆ ಕ್ರಮಗಳನ್ನು ಜಾರಿಗೆ ತಂದಿದ್ದು. ಟಿಪ್ಪು ಕಾಲದಲ್ಲಾಗಿರುವ ಭೂಸುಧಾರಣೆ, ಆಧುನಿಕ ಕೃಷಿ ಪದ್ಧತಿ, ರೇಷ್ಮೆಯನ್ನು ಭಾರತಕ್ಕೆ ಪರಿಚಯಿಸಿದ ದಾಖಲೆಗಳಿವೆ. ಸ್ವತಃ ಬರಹಗಾರನಾಗಿದ್ದ ಟಿಪ್ಪು ಸಾಕಷ್ಟು ಗ್ರಂಥಗಳ ಗ್ರಂಥಾಲಯವನ್ನು ಅರಮನೆಯಲ್ಲೇ ನಿರ್ಮಿಸಿದ್ದ ಹಾಗೂ ಜಗತ್ತೇ ಬೆರಗಾಗಿದ್ದ ರಾಕೆಟ್ ತಯಾರಿಕೆಯ ವಿಜ್ಞಾನ ಪ್ರಯೋಗಾಲಯವನ್ನು ಮೊಟ್ಟಮೊದಲ ಬಾರಿಗೆ ಪ್ರಾರಂಭಿಸಿದ್ದು ಟಿಪ್ಪು ಕೀರ್ತಿಯ ಕುರುಹುಗಳು ಎಂದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ದೇಶದಲ್ಲಿ ಶಿಸ್ತುಬದ್ಧ ಸೈನ್ಯ ಕಟ್ಟಿದ ಮೊದಲ ರಾಜ ಟಿಪ್ಪುಸುಲ್ತಾನ್ ಎಂಬುದು ನಮ್ಮ ಹೆಗ್ಗಳಿಕೆ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಅವರ ಯುದ್ಧನೀತಿ, ತಂತ್ರಗಾರಿಕೆ, ವಿಜ್ಞಾನ ಬಳಕೆ ಇದು ಬೇರೆ ಯಾವ ರಾಜರೂ ಬಳಸದ ನೈಪುಣ್ಯತೆ ಟಿಪ್ಪು ಅವರದ್ದಾಗಿತ್ತು. ಅಬ್ದುಲ್ ಕಲಾಂ ಅವರು ಕ್ಷಿಪಣಿಗಳ ಪಿತಾಮಹಾ ಎಂದಾದರೂ ಟಿಪ್ಪು ಸುಲ್ದಾನ್ 18ನೇ ಶತಮಾನದಲ್ಲಿಯೇ ರಿವರ್ಸ್ ಎಂಜಿನಿಯರಿಂಗ್ ತಂತ್ರಜ್ಞಾನದ ರಾಕೆಟ್ಗಳನ್ನು ತಯಾರಿಸಿ ಯುದ್ಧದಲ್ಲಿ ಬಳಸಿದ್ದರು. ಯುದ್ಧದಲ್ಲಿ ಕಾದಾಡುತ್ತಲೇ ಮಡಿದ ಟಿಪ್ಪು ಸುಲ್ತಾನ್ ಅವರ ಮರಣಾನಂತರ ಬ್ರಿಟಿಷರಿಗೆ ಮೊದಲು ಆಸಕ್ತಿ ಕೆರಳಿಸಿದ್ದು ಟಿಪ್ಪುವಿನ ರಾಕೆಟ್ ಪ್ರಯೋಗಾಲಯ. ಅದನ್ನು ಮುಂದೆ ಬ್ರಿಟಿಷರು ಫ್ರೆಂಚ್ರೊಂದಿಗೆ ಯುದ್ಧದಲ್ಲಿ ಟಿಪ್ಪು ಮಾದರಿ ರಾಕೆಟ್ ನಿರ್ಮಿಸಿ ಬಳಸಿದ ಉದಾಹರಣೆಗಳಿವೆ. ಹೀಗೆ ಹಲವಾರು ಅಭಿವೃದ್ಧಿಗಳಿಗೆ, ಸುಧಾರಣೆಗಳಿಗೆ ಟಿಪ್ಪು ಸುಲ್ತಾನ್ ಮಾದರಿಯಾಗಿದ್ದಾರೆ ಎಂದರು.
ಟಿಪ್ಪು ಜಯಂತಿ ಅಂಗವಾಗಿ ಕಾರವಾರ ತಾಲೂಕಿನ ಪ್ರೌಢಶಾಲೆಗಳಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆದಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಸೆಂಟ್ ಮೈಕೆಲ್ ಶಾಲೆಯ ಸಂಸ್ಕøತಿ ಆರ್ ವರ್ಮಾ (ಪ್ರಥಮ), ಕಡವಾಡ ಜನತಾ ವಿದ್ಯಾಲಯದ ಅಕ್ಷಯ ಎ ರೇವಣಕರ (ದ್ವಿತೀಯ), ಕಾರವಾರ ಸರ್ಕಾರಿ ಪ್ರೌಢಶಾಲೆಯ ಭವಾನಿ ಬಿಹಾರಿ (ತೃತೀಯ) ಇವರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ್ ವಿ ಪಾಟೀಲ್, ನಗರಸಭೆ ಆಯುಕ್ತ ಯೋಗೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯ್ಕ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಸ್ವಾಗತಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಕಳುಹಿಸಿ ಸಂದೇಶವನ್ನು ಓದಿದರು. ಶಿಕ್ಷಕ ಮಹದೇವ ರಾಣೆ ವಂದಿಸಿದರು.