ಭಟ್ಕಳ: ರಾಜ್ಯ ನ್ಯಾಯ ಮಂಡಳಿಯ ಆದೇಶ, ಅಡ್ವೋಕೇಟ್ ಜನರಲ್ ಬೆಂಗಳುರು ಇವರ ವರದಿ ಪ್ರಕಾರ ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಮಸಹಾಯಕರನ್ನು ‘ಡಿ’ದರ್ಜೆಯ ನೌಕರರಾಗಿ ಪರಿಗಣಿಸಬೇಕೆಂದು ಶುಕ್ರವಾರದಂದು ಭಟ್ಕಳಕ್ಕೆ ಆಗಮಿಸಿದ ಡಿ.ಸಿ.ಎಂ. ಡಾ.ಜಿ.ಪರಮೇಶ್ವರ ಅವರಿಗೆ ಭಟ್ಕಳತಾಲೂಕಾ ಗ್ರಾಮ ಸಹಾಯಕ ಸಂಘ ಮನವಿ ಸಲ್ಲಿಸಿದರು.
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 10,450 ಗ್ರಾಮ ಸಹಾಯಕರು ಸೇವೆ ಸಲ್ಲಿಸುತ್ತಿದ್ದು, 35 ವರ್ಷಗಳಿಂದ ಇಲಾಖೆಯಲ್ಲಿ ಮಾಸಿಕ 100 ರೂ.ಗಳಿಂದ ಗೌರವಧನ ಪಡೆಯುತ್ತಿದ್ದು, ಪ್ರಸ್ತುತ 10,000 ಸಾವಿರ ರೂ.ನೀಡಲಾಗುತ್ತಿದೆ. ಇಂದಿನ ದುಬಾರಿ ದಿನಗಳಲ್ಲಿ ಈ ವೇತನವನ್ನು ಪಡೆದು ಜೀವನ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರಿಗೆ ಸೇವಾಭದ್ರತೆ ಒದಗಿಸಬೇಕು. ಯಾವುದೇ ಸರಕಾರ ಬಂದರು ನೌಕರರನ್ನು ಖಾಯಂ ನೌಕರನ್ನಾಗಿ ಪರಿಗಣಿಸದೇ ಕೇವಲ ಅಲ್ಪ ಸ್ವಲ್ಪ ವೇತನವನ್ನು ಹೆಚ್ಚಿಸಿ ದುಡಿಸಿಕೊಂಡು ಹೋಗುತ್ತಿದ್ದಾರೆ. ರಾಜ್ಯ ನ್ಯಾಯ ಮಂಡಳಿಯ ಆದೇಶ ಹಾಗೂ ಅಡ್ವೋಕೇಟ್ ಜನರಲ್ ಡಾ. ರವಿ ಕುಮಾರ ಹಾಗೂ ಆರ್. ಮಧುಸುಧನ ನಾಯ್ಕ ಅವರ ವರದಿ ಪ್ರಕಾರ ಗ್ರಾಮ ಸಹಾಯಕರನ್ನು ಖಾಯಂ ಮಾಡಲು ಕಾನೂನನಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ಆದರೂ ಸರಕಾರ ಮಾತ್ರ ನ್ಯಾಯಾಲಯ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೇ ನೌಕರರಿಗೆ ಅನ್ಯಾಯ ಮಾಡುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಇಲಾಖೆ ಸಚಿವ ಗಮನಕ್ಕೆ ತಂದು ಶೀಘ್ರದಲ್ಲಿ ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರನ್ನಾಗಿಪರಿಗಣಿಸಬೇಕೆಂದು ಮನವಿಯನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಸಹಾಯಕ ಸಂಘದ ಜಿಲ್ಲಾ ಖಜಾಂಚಿ ಮಾಸ್ತಯ್ಯ ನಾಯ್ಕ, ತಾಲೂಕಾ ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಮಂಜುನಾಥ ದೇವಾಡಿಗ, ಉಪಾಧ್ಯಕ್ಷ ಉದಯ ನಾಯ್ಕ, ಕಾರ್ಯದರ್ಶಿ ನಾಗಪ್ಪ ನಾಯ್ಕ,ಸದಸ್ಯ ಬಾಬು ನಾಯ್ಕ, ನಾರಾಯಣ ನಾಯ್ಕ, ಮಂಜು ನಾಯ್ಕ ಮುಂತಾದವರಿದ್ದರು.