ಮುಂಡಗೋಡ: ತಾಲೂಕಿನ ಗುಂಜಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾರಿಕೊಪ್ಪ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಬಾಳೆಯನ್ನು ನಾಶ ಮಾಡಿರುವುದಲ್ಲದೇ ಅಕ್ಕ ಪಕ್ಕ ತೋಟದಲ್ಲಿಯು ನುಗ್ಗಿ ಬೆಳೆ ನಾಶ ಮಾಡಿವೆ.
ಕಳೆದ ಒಂದು ತಿಂಗಳದಿಂದ ಕಾಡಾನೆಗಳ ಮೂರು ಗುಂಪು ಸೇರಿಕೊಂಡು ಮೈನಳ್ಳಿ, ಗುಂಜಾವತಿ, ಗೊದನಾಳ, ಕಳಕಿಕಾರ, ಬಸನಾಳ ಮತ್ತು ಉಗ್ಗಿನಕೇರಿ, ಕರವಳ್ಳಿ, ಕ್ಯಾಸನಕೇರಿ ತೆಗ್ಗಿನಕೊಪ್ಪ, ಗ್ರಾಮಗಳ ಹೊಲಗಳಲ್ಲಿ ನುಗ್ಗಿ ಅಡಿಕೆ, ಭತ್ತ ಮತ್ತು ವಿವಿಧ ಬೆಳೆ ಹಾನಿ ಮಾಡಿ ಹಲವು ರೈತರ ಬೆಳೆಯನ್ನು ನಾಶ ಪಡಿಸುತ್ತಾ ಬಂದಿದ್ದು ಇದರ ಮುಂದುವರೆದ ಭಾಗವಾಗಿ ಶುಕ್ರವಾರ ರಾತ್ರಿ ಗುಂಜಾವತಿ ಹತ್ತಿರ ಗ್ರಾಮದ ಅರಣ್ಯ ಅಂಚಿನಲ್ಲಿರುವ ಬೈರು ವಿಠ್ಠು ಏಡಗೆ ಎಂಬುವರಿಗೆ ಸೇರಿದ ತೋಟದಲ್ಲಿ ಸುಮಾರು ಏಳು ಕಾಡಾನೆಗಳ ಗುಂಪು ನುಗ್ಗಿ 60ಬಾಳೆಗಿಡಗಳನ್ನು ನೆಲಕ್ಕುರುಳಿಸಿ ತಿಂದು ತುಳಿದು ನಾಶ ಮಾಡಿವೆ. ಇದಲ್ಲದೇ ಈ ತೋಟದ ಅಕ್ಕ ಪಕ್ಕದ ಗದ್ದೆಗಳಿಗೆ ನುಗ್ಗಿ ಭತ್ತದ ಪೈರು ತಿಂದು ತುಳಿದು ನಾಶ ಮಾಡಿವೆ. ಎರಡು ಮೂರು ದಿನಗಳ ಹಿಂದೆ ಇದೇ ಗ್ರಾ.ಪಂ ವ್ಯಾಪ್ತಿಯ ಕೆಂದಲಗೇರಿ ಹುಲಿಹೊಂಡ, ಮತ್ತು ಬಸಾಪುರ ಎರೇಬೈಲ್ ಭಾಗದ ಅರಣ್ಯ ಪ್ರದೇಶಗಳಲ್ಲಿ ಠಿಕಾಣಿ ಹೂಡಿ ಭತ್ತದ ಗದ್ದೆ, ಭತ್ತದ ಬಣುವೆ, ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡಿದ್ದವು ಕಾಡಾನೆಗಳ ಮುಂದುವರೆದ ದಾಳಿಯಿಂದ ಸುತ್ತಮುತ್ತಲಿನ ಗ್ರಾಮದ ರೈತರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ಕಾಡಾನೆಗಳ ದಾಳಿಯಿಂದ ತಮ್ಮ ಬೆಳೆಯು ನಾಶವಾಗುತ್ತಿರುವುದನ್ನು ಕಂಡ ರೈತರು ರೋಸಿ ಹೋಗುತ್ತಿದ್ದಾರೆ ಅರಣ್ಯ ಇಲಾಖೆಯವರು ಕಾಡಾನೆಗಳ ದಾಳಿ ತಪ್ಪಿಸಲು ಅನೇಕ ಮಾರ್ಗವನ್ನು ಕೈಗೊಂಡರು ಫಲ ಸಿಗುತ್ತಿಲ್ಲಾ ಕಾಡಾನೆಗಳಿಂದ ರೈತರ ಬೆಳೆ ನಾಶ ವಾಗುವುದಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿಗಳಿಗು ತಲೆನೋವಾಗಿ ಪರಿಗಣಿಸಿದೆ.