ಭಟ್ಕಳ: ನಮ್ಮ ರಕ್ಷಣೆಗಾಗಿ ತಮ್ಮ ವಯಕ್ತಿಕ ಬದುಕನ್ನೇ ದೇಶ ಸೇವೆಗಾಗಿ ಮುಡಿಪಾಗಿಡುವ ಸೈನಿಕರ ತ್ಯಾಗವನ್ನು ಯಾವುದೇ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ ಎಂದು ಸಾಹಿತಿ ಶ್ರೀಧರ ಶೇಟ್ ಹೇಳಿದರು.
ಅವರು ತಾಲೂಕಿನ ಅಳ್ವೇಕೋಡಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಲಯನ್ಸ್ ಕ್ಲಬ್ ಮುರ್ಡೇಶ್ವರ, ಶ್ರೀ ದುರ್ಗಾಂಬಿಕಾ ಯುವಕ ಸಂಘ ತಟ್ಟಿಹಕ್ಕಲ ಇವರ ಸಂಯುಕ್ತ ಆಶ್ರಯದಲ್ಲಿ ಅಳ್ವೇಕೋಡಿಯಲ್ಲಿ ನಡೆದ ವೀರಯೋಧರಿಗೆ ನಮನ, ಯುವಜಾಗೃತಿ ಮತ್ತು ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನಡೆಸಲಾದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಧರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ತಿಮ್ಮಪ್ಪ ಹೊನ್ನಿಮನಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಆರ್. ಎನ್. ಶಿಕ್ಷಣ ಸಂಸ್ಥೆಗಳ ನಿರ್ಧೇಶಕ ಎಂ.ವಿ.ಹೆಗಡೆ ಅವರು ಮಾತನಾಡಿ ದೇಶದ ಸುರಕ್ಷತೆ ಪ್ರತಿಯೋರ್ವ ಭಾರತೀಯನ ಕರ್ತವ್ಯವಾಗಿದೆ. ಪ್ರತಿ ಮನೆಯಿಂದಲೂ ಒಬ್ಬೊಬ್ಬರು ಸೈನ್ಯವನ್ನು ಸೇರುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎ.ಬಿ.ವಿ.ಪಿ. ಜಿಲ್ಲಾ ಸಂಚಾಲಕ ಕೃಷ್ಣ ಬಲ್ಸೆ, ಗುತ್ತಿಗೆದಾರ ಪ್ರಭಾಕರ ನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಹನುಮಂತ ನಾಯ್ಕ, ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗೇಶ ಮಡಿವಾಳ, ಖಜಾಂಚಿ ಜಗದೀಶ ಜೈನ್, ದುರ್ಗಾಂಬಿಕಾ ಯುವಕ ಸಂಘದ ಅಧ್ಯಕ್ಷ ಶಂಕರ ದೇವಡಿಗ ಉಪಸ್ಥಿತರಿದ್ದರು.
ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಸೈನಿಕ ಕುಮಾರ ನಾಯ್ಕ ಇವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ರಾಮಾ ನಾಯ್ಕ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು. ಶ್ರೀಧರ ದೇವಾಡಿಗ ವಂದಿಸಿದರು. ಕ್ವಿಜ್ ಮಾಸ್ಟರ್ಗಳಾಗಿ ಶ್ರೀಧರ ನಾಯ್ಕ ಹಾಗೂ ಗಣಪತಿ ಕಾಯ್ಕಿಣಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.