ಹೊನ್ನಾವರ: ಹಳ್ಳಿಗಳ ಅಭಿವೃದ್ಧಿಗಾಗಿ ‘ಹಳ್ಳಿ ವಾಸ್ತವ್ಯ’ ಎಂಬ ಯೋಜನೆ ರೂಪಿಸಿರುವ ಶಾಸಕ ಸುನೀಲ ನಾಯ್ಕ, ಮೊದಲ ಹೆಜ್ಜೆಯಾಗಿ ತಾಲೂಕಿನ ಕುಗ್ರಾಮ ನಗರಬಸ್ತಿಕೇರಿ ಗ್ರಾಪಂ ವ್ಯಾಪ್ತಿಯ ಹಾಡಗೇರಿ ಗ್ರಾಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ಎರಡು ದಿನ ವಾಸ್ತವ್ಯ ಹೂಡಿದರು.
ಹಾಡಗೇರಿ ಗ್ರಾಮದ ಕುಂದು ಕೊರತೆ ಹಾಗೂ ಜ್ವಲಂತ ಸಮಸ್ಯೆಗಳ ನೈಜ ಚಿತ್ರಣ ಅರಿಯಲು ಶಿಕ್ಷಣ ಇಲಾಖೆ, ಕಂದಾಯ, ತಾಪಂ ಇಒ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಸಮಸ್ಯೆಗಳ ಕುರಿತು ಜನರೊಂದಿಗೆ ರ್ಚಚಿಸಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷ್ಣ ಮರಾಠಿ ಎಂಬುವವರ ಮನೆಯಲ್ಲಿ ಶಾಸಕ ಸುನೀಲ ನಾಯ್ಕ ವಾಸ್ತವ್ಯ ಹೂಡಿದ್ದರು. ನಂತರ ಬೆಳಗ್ಗೆ ಹರಿಜನ ಸಮುದಾಯದ ಮನೆಗಳಿಗೆ ಭೇಟಿ ನೀಡಿದರು. ಸಮಸ್ಯೆ ಕುರಿತು ರ್ಚಚಿಸಿ, ಪರಿಹಾರ ಭರವಸೆ ನೀಡಿದರು.
ಈ ವೇಳೆ ತಮ್ಮ ಅಳಲು ತೋಡಿಕೊಂಡ ಗ್ರಾಮಸ್ಥರು, ಯಾವೊಬ್ಬ ಅಧಿಕಾರಿ ನಮ್ಮ ಗ್ರಾಮಕ್ಕೆ ಬಂದು ಸಮಸ್ಯೆ ಆಲಿಸುವುದಿಲ್ಲ. ಪರಿಹಾರಕ್ಕಾಗಿ ಸರ್ಕಾರಿ ಕಚೇರಿ ಅಲೆದಾಡಬೇಕಾಗಿದೆ. ಆದರೆ, ಪ್ರಯೋಜವಾಗಿಲ್ಲ. ಸರ್ಕಾರದ ಸೌಲಭ್ಯಗಳು ನಮ್ಮ ಕೈ ಸೇರುತ್ತಿಲ್ಲ. ಗ್ರಾಪಂ ಅಧಿಕಾರಿಗಳು ಯಾವುದೇ ಯೋಜನೆಗಳ ಕುರಿತು ನಮಗೆ ಸಮರ್ಪಕವಾಗಿ ತಿಳಿಸುತ್ತಿಲ್ಲ. ಈಗಲಾದರೂ ನಮಗೆ ಸಮರ್ಪಕ ಯೋಜನೆಗಳು ಸಿಗುವಂತೆ ಮಾಡಿ’ ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳಿಂದ ಮನವಿ: ಹಾಡಗೇರಿ ಶಾಲೆಗೆ ಸೂಕ್ತ ಆಟದ ಮೈದಾನ, ಬಿಸಿಯೂಟ ಆಹಾರ ದಾಸ್ತಾನು ಕೊಠಡಿ, ಖಾಯಂ ಶಿಕ್ಷಕರ ನೇಮಕ ಸೇರಿದಂತೆ ವಿವಿಧ ಸಮಸ್ಯೆಗೆ ಪರಿಹಾರ ಒದಗಿಸುವಂತೆ ವಿದ್ಯಾರ್ಥಿಗಳು ಶಾಸಕರಿಗೆ ಮನವಿ ಸಲ್ಲಿಸಿದರು.ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ನಾಯ್ಕ, ಗಣಪತಿ ನಾಯ್ಕ, ಮಂಜುನಾಥ ನಾಯ್ಕ, ಕೇಶವ ನಾಯ್ಕ ಬಳ್ಕೂರ, ಶ್ರೀಧರ ನಾಯ್ಕ ಮಂಕಿ, ರಮೇಶ ತುಂಬೋಳ್ಳಿ, ಹನುಮಂತ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜನರ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಹಾಡಗೇರಿಗೆ ಅಧಿಕಾರಿಗಳ ಜೊತೆ ವಾಸ್ತವ್ಯ ಹೂಡಿದ್ದೆ. ಗ್ರಾಮಸ್ಥರ ಸಮಸ್ಯೆಯನ್ನು ಅರಿತಿದ್ದೇನೆ. ಅತಿ ಶೀಘ್ರದಲ್ಲಿ ಪರಿಹಾರ ಒದಗಿಸುತ್ತೇನೆ.
ಸುನೀಲ ನಾಯ್ಕ ಎಂದು ಹೇಳಿದರು.