ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಟರಾಜ್ ಮಾವಳ್ಳಿ-1 ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ.
ಸಾಮಾನ್ಯ ಸಭೆಗೆ ಮಾಧ್ಯಮಕ್ಕೆ ಪ್ರವೇಶ ಇಲ್ಲವೆಂದ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಅಧ್ಯಕ್ಷರ ಅನುಮತಿ ಅಗತ್ಯ ಎಂದು ಹೇಳಿದರಲ್ಲದೇ ಅಧ್ಯಕ್ಷರ ಅನುಮತಿಯ ಮೇರೆಗೆ ಮಾಧ್ಯಮದವರು ಪ್ರವೇಶಿಸುತ್ತಿದ್ದಂತೆಯೇ ಸದಸ್ಯ ಜಯಂತ ನಾಯ್ಕ ಅವರು ಅನಧೀಕೃತ ಲಾಡ್ಜಿಂಗ್ ಒಂದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಸಿಡಿಮಿಡಿಗೊಂಡು ಸಭೆಯಿಂದಲೇ ಹೊರ ನಡೆದ ಅಪರೂಪದ ಘಟನೆ ನೆಡೆದಿದ್ದು, ಇದನ್ನು ಮೇಲಧಿಕಾಗಿಳ ಗಮನಕ್ಕೆ ತರುವುದಾಗಿ ಅಧ್ಯಕ್ಷ ಮಂಗಲಾ ನಾಯ್ಕ ಹೇಳಿದ್ದಾರೆ.
ಭಟ್ಕಳ ತಾಲೂಕ ಮುರ್ಡೆಶ್ವರ ಮಾವಳ್ಳಿ 1 ರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ನಡೆಯುವ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಜಯಂತ ನಾಯ್ಕ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಯನ್ನು ಸಭೆಯ ಮುಂದಿಡುತ್ತಿದ್ದ ಹಾಗೆ ಇದು ಅಜೆಂಡಾದಲ್ಲಿಲ್ಲ ಎಂದ ಅಧಿಕಾರಿ ಸಭೆಯಿಂದಲೇ ಹೊರ ನಡೆದರು. ಸಭೆಯನ್ನು ನಡೆಸಿಕೊಡಬೇಕಾದ ಅಧಿಕಾರಿಯೇ ಹೊರ ನಡೆದ ಮೇಲೆ ಸಭೆಯೆಲ್ಲಿಂದ ಬಂತು ಎನ್ನುವುದು ಪ್ರಶ್ನೆಯಾಗಿದೆ.
ತಾಲೂಕಿನ ಮಾವಳ್ಳಿ-1 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಟರಾಜ್ ಅವರೇ ಹೊರ ನಡೆದವರಾಗಿದ್ದು ಗ್ರಾಮ ಪಂಚಾಯತ್ನಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಯಲ್ಲಿ ಅನಧೀಕೃತ ಲಾಡ್ಜಿಂಗ್ ಪ್ರಶ್ನೆ ಎತ್ತಿರುವುದೇ ಸಮಸ್ಯೆಯಾಯಿತು. ಗ್ರಾಮ ಪಂಚಾಯತಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಲಾಗುತ್ತಿರುವುದು ಗಮನಕ್ಕೆ ಇದ್ದರೂ ಸಹ ಇವರು ಕ್ರಮ ಕೈಗೊಂಡಿಲ್ಲ ಎನ್ನುವ ಸದಸ್ಯರ ಪ್ರಶ್ನೆಯಿಂದ ಇರುಸುಮುರುಗೊಂಡ ಇವರು ಸಭೆಯಿಂದ ಹೊರ ನಡೆದಿರುವುದು ಸರಿಯಲ್ಲ ಎಂದು ಅಧ್ಯಕ್ಷೆ ಹೇಳಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಳಾ ಈಶ್ವರ ನಾಯ್ಕ ಪ್ರತಿಕ್ರಿಯಿಸಿ ಒಬ್ಬ ಜವಾಬ್ದಾರಿಯುತ ಪಂಚಾಯತ್ ಅಭಿವೃದ್ದಿ ಅಧಿಕಾರಿ ಈ ರೀತಿಯಾಗಿ ವರ್ತಿಸಬಾರದಿತ್ತು. ಯಾವುದೆ ಸಮಸ್ಯೆಯಿದ್ದರೂ ಸಹ ಪರಿಹಾರ ಮಾಡಬಹುದಿತ್ತು ಆದರೆ ಈ ಅಧಿಕಾರಿ ಸಭೆಯನ್ನು ಬಿಟ್ಟು ಹೊರತೆರಳಿದ್ದಾರೆ ಈ ಬಗ್ಗೆ ನಾನು ತಾಲೂಕ ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳ ಗಮನಕ್ಕೆ ತರುತ್ತೆನೆ ಎಂದರು.