ಪುಲ್ವಾಮದಲ್ಲಿ ನಡೆದ ಯೋಧರ ಹತ್ಯೆ ಮಾನವೀಯತೆಯ ಹತ್ಯೆಯಾಗಿದೆ-ರಾಬಿತಾ ಮಿಲ್ಲತ್
ಭಟ್ಕಳ: ಫೆ.೧೪ರಂದು ದೇಶದ ಕಣಿವೆ ರಾಜ್ಯ ಕಾಶ್ಮಿರದ ಪುಲ್ವಾಮ ದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದು ಇದೊಂದು ಹೇಯ ಕೃತ್ಯವಾಗಿದೆ ಉತ್ತರಕನ್ನಡ ಜಿಲ್ಲಾ ಮುಸ್ಲಿಮ್ ಒಕ್ಕೂಟ ರಾಬ್ತಾ ಮಿಲ್ಲತ್ ಸಂಸ್ಥೆ ತಿಳಿಸಿದೆ.
ಈ ಕುರಿತಂತೆ ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ರಾಬ್ತಾ ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ಮುಜಾವರ್, ಪ್ರಧಾನ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಕಾರ್ಯದರ್ಶಿಗಳಾದ ಮುಝಪ್ಫರ್ ಕುಮಟಾ, ಎಂ.ಆರ್.ಮಾನ್ವಿ, ಇದೊಂದು ಹೇಯಾ ಕೃತ್ಯವಾಗಿದ್ದು ದೇಶ ಇದಕ್ಕೆ ಸೂಕ್ತ ಉತ್ತರ ನೀಡುತ್ತದೆ ಎಂದು ತಿಳಿಸಿದ್ದಾರೆ.
“ಪುಲ್ವಾಮ ನಲ್ಲಿ 44 ಸಿಆರ್ಪಿಎಫ್ ಯೋಧರು ಭಯೋತ್ಪಾದನಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಘಟನೆಯು ದೇಶಕ್ಕೆ ಸಹಿಸಲಾಗದ ದುಃಖವಾಗಿದೆ. ಮೃತ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ”
“ಇಂತಹ ಶೋಕಭರಿತ ವಾತಾವರಣದಲ್ಲಿಯೂ ಶಾಂತಿ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಗಳು ನಡೆಯಬೇಕಿದೆ ಇದನ್ನು ದೇಶಗಳ ನಡುವಿನ ಸಂಪರ್ಕ ಹಾಗೂ ಸಹಕಾರಗಳ ಮೂಲಕ ಸಾಧಿಸಬೇಕಾದ ಅಗತ್ಯತೆ ಇದೆ. ಸರಕಾರವು ಈ ದಾಳಿಯ ಹಿಂದಿರುವ ಸತ್ಯಾಸತ್ಯಗಳನ್ನು ಬಯಲಿಗೆಳೆಯಲು ಮತ್ತು ಹಂತಕರನ್ನು ಶಿಕ್ಷಿಸಲು ಮುಂದಾಗಬೇಕಿದೆ.
ಈ ದಾಳಿಯ ಹಿಂದೆ ಕಾಶ್ಮೀರದ ವಾತಾವರಣವನ್ನು ಹಾಳುಗೆಡಹುವ ಉದ್ದೇಶಗಳಿವೆಯೇ, ಭಾರತ- ಪಾಕಿಸ್ತಾನದ ನಡುವಿನ ಸಂಬಂಧಗಳು ಕಾರಣವಾಗಿದೆಯೇ ಅಥವಾ ದೇಶದಲ್ಲಿರುವ ಶಾಂತಿಪೂರ್ಣ ವಾತಾವರಣವನ್ನು ಕೆಡಿಸಲು ಮುಂಬರುತ್ತಿರುವ ಚುನಾವಣೆಗಳಲ್ಲಿ ಇದನ್ನು ಅಸ್ತ್ರವಾಗಿರಿಸಿಕೊಳ್ಳಲು ನಡೆಸಿದ ದೊಡ್ಡ ಪಿತೂರಿಯಾಗಿದೆಯೇ ಎಂಬ ಕುರಿತು ಅರಿಯಬೇಕಾದ ಅವಶ್ಯಕತೆ ಇದೆ. ಕಾಶ್ಮೀರದ ಜನತೆಯಲ್ಲಿ ಹುದುಗಿರುವ ಭಯವನ್ನು ಹಾಗೂ ದುಃಖವನ್ನು ಕಡಿಮೆಗೊಳಿಸಲು ಶಾಂತಿ ಮತ್ತು ಭದ್ರತೆಯನ್ನು ಹೆಚ್ಚಿಸಬೇಕಾದ ಅಗತ್ಯತೆ ಇದೆ”
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆದ ಈ ದುಷ್ಕೃತ್ಯ ಆಂತರಿಕ ಸಹಾಯ ಸಹಕಾರವಿಲ್ಲದೆ ನಡೆಯಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಘಟನೆಯ ಕೂಲಂಕೂಷ ತನಿಖೆ ನಡೆಸುವುದರ ಮೂಲಕ ಇದರ ಹಿಂದೆ ಅಡಗಿರುವ ಕಾಣದ ಕೈಗಳನ್ನು ಪತ್ತೆ ಹಚ್ಚುವುದರ ಮೂಲಕ ದುಷ್ಕರ್ಮಿಗಳಿಗೆ ಸರಿಯಾದ ಪಾಠ ಕಲಿಸಬೇಕಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.