ಮನುಷ್ಯ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ

Source: sonews | By Staff Correspondent | Published on 1st October 2018, 11:14 PM | National News | Special Report | Don't Miss |

ಮಾನವ-ಭಕ್ಷಕ ಕಾಡುಪ್ರಾಣಿಗಳನ್ನು ನಿವಾರಿಸಿಕೊಳ್ಳುವ ಕ್ರಮಗಳು ನಿರ್ದಿಷ್ಟವಾಗಿರಬೇಕು ಮತ್ತು ಕಾನೂನುಬದ್ಧವಾಗಿರಬೇಕೆ ವಿನಃ ಅಬ್ಬರ ಹಾಗೂ ಸೇಡಿನಿಂದ ಕೂಡಿರಬಾರದು.

ಕಳೆದ ಕೆಲವು ವಾರಗಳಿಂದ ಮಾಹಾರಾಷ್ಟ್ರದಲ್ಲಿ ವನ್ಯಜೀವಿ ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ರಾಲೆಗಾಂವ್ ಗ್ರಾಮಸ್ಥರ ನಡುವೆ ಒಂದು ಸಂಘರ್ಷ ನಡೆಯುತ್ತಿದೆ. ಅದಕ್ಕೆ ಕಾರಣ ರಾಲೆಗಾಂವ ಗ್ರಾಮದ ಮೇಲೆ ಮಾನವ ಭಕ್ಷಕ ಹೆಣ್ಣುಹುಲಿಯೊಂದು ದಾಳಿ ನಡೆಸಿರುವುದು. ಹುಲಿಯು ಎರಡು ಮರಿಗಳ ತಾಯಿಯೂ ಆಗಿದ್ದು, ಜನರನ್ನು ರಕ್ಷಿಸುವ ಸಲುವಾಗಿ ಅರಣ್ಯ ಇಲಾಖೆಯು ಹುಲಿಯನ್ನು ಗುಂಡುಹೊಡೆದು ಕೊಲ್ಲುವ ತೀರ್ಮಾನ ಮಾಡಿತ್ತು. ಹೀಗಾಗಿ ವನ್ಯಜೀವಿ ಕಾರ್ಯಕರ್ತರು ತೀರ್ಮಾನದ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು. ಆದರೆ ಸುಪ್ರೀಂ ಕೋರ್ಟು ಹುಲಿಯನ್ನು ಕೊಲ್ಲುವ ತೀರ್ಮಾನಕ್ಕೆ ತಡೆಯಾಜ್ನೆ ನೀಡಲು ನಿರಾಕರಿಸಿತು.

ಆದ್ದರಿಂದ ಹುಲಿಯನ್ನು ಬಂಧಿಸುವ ಪ್ರಯತ್ನಗಳು ಕೈಗೂಡದಿದ್ದರೆ ಅರಣ್ಯ ಇಲಾಖೆಯು ಅದನ್ನು ಈಗ ಕೊಂದು ಹಾಕಬಹುದು. ಮಾನವ ಕುಲಕ್ಕೆ ಸೇರದ ಜೀವಿಗಳು ಮನುಷ್ಯರನ್ನು ಕೊಲ್ಲುವ ವಿದ್ಯಮಾನದ ಪ್ರತಿಕ್ರಿಯೆಗಳು ಸದಾ ಅಪನಂಬಿಕೆ ಮತ್ತು ದಿಗ್ಭ್ರಾಂತಿಗಳಿಂದ ಕೂಡಿರುತ್ತವೆ. ಅದರಲ್ಲೂ ಸಾವು ಅಥವಾ ಹಾನಿಗಳಿಗೆ ಹುಲಿಯಂಥ ಪ್ರಾಣಿಗಳು ಕಾರಣವಾಗಿದ್ದರಂತೂ ಪ್ರತಿಕ್ರಿಯೆಗಳು ಇನ್ನಷ್ಟು ದೊಡ್ಡಧ್ವನಿಯನ್ನು ಪಡೆದುಕೊಳ್ಳುತ್ತವೆ. ಪ್ರಾಣಿಗಳು ಮನುಷ್ಯರನ್ನು ತಿನ್ನುವುದು ತುಂಬಾ ಅಪರೂಪದ ವಿದ್ಯಮಾನವಾಗಿರುವುದರಿಂದ ಪ್ರಾಣಿಗಳೇ ಮನುಷ್ಯರನ್ನು ಕೊಂದಿದೆ ಎಂದು ಖಚಿತವಾಗಿ ಹೇಳುವುದಾಗಲೀ ಅಥವಾ ಇಂಥಾ ಪ್ರಾಣಿಯೇ ಮನುಷ್ಯರನ್ನು ಕೊಂದಿರುವುದೆಂದು ನಿಖರವಾಗಿ ಪತ್ತೆಹಚ್ಚುವುದಾಗಲೀ ಕಷ್ಟ ಸಾಧ್ಯವೆಂದು ವನ್ಯಜೀವಿ ಕಾರ್ಯಕರ್ತರು ಪ್ರತಿಪಾದಿಸುತ್ತಾರೆ. ಮತ್ತೊಂದು ತುದಿಯಲ್ಲಿ ಇಂಥಾ ಅಪಾಯಕಾರಿ ಪ್ರಾಣಿಗಳ ಸುತ್ತಾಟದ ಸರಹದ್ದಿನಲ್ಲೇ ವಾಸಿಸುವ ಗ್ರಾಮಸ್ಥರು ಸದಾ ಜೀವಭಯದಲ್ಲೇ ಬದುಕುತ್ತಿರುವ ವಾಸ್ತವವೂ ಇದೆ.

ಹೀಗಾಗಿ ಇಂಥಾ ಸಂದರ್ಭಕ್ಕೆ  ಯಾರು ಕಾರಣ ಎಂಬಷ್ಟೆ ಮುಖ್ಯವಾದ ಪ್ರಶ್ನೆ ಏನು ಕಾರಣ ಎಂಬುದಾಗಿದೆ. ವಿಷಯದಲ್ಲಿ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದ ವನ್ಯಜೀವಿಗಳ ಪರವಾದ ಧ್ವನಿಯಾಗಬಯಸುವ ಕಾರ್ಯಕರ್ತರ ಪ್ರಕಾರ ಸನ್ನಿವೇಶಕ್ಕೆ ವನ್ಯಪರಿಸರದಲ್ಲಿ ಮನುಷ್ಯ ಚಟುವಟಿಕೆಗಳ ಹೆಚ್ಚಳ ಮತ್ತು ಅದರಿಂದ ವನ್ಯ ಬದುಕಿಗೆ ಆಗುತ್ತಿರುವ ಅಡಚಣೆಗಳು ಕಾರಣವೇ ಹೊರತು ಪ್ರಾಣಿಗಳಲ್ಲ. ರಣಥಾಂಬೋರ್ ವನ್ಯಪ್ರದೇಶದಲ್ಲಿ ಮಾನವ ಭಕ್ಷಕ ಎಂಬ ಆರೋಪ ಹೊತ್ತಿದ್ದ ಉಸ್ತಾದ್ ಎಂಬ ಹುಲಿಯ ವಿಷಯದಲ್ಲೂ ಇದೇ ಬಗೆಯ ದಾವೆಯೊಂದನ್ನು ಸುಪ್ರೀಂ ಕೋರ್ಟಿನಲ್ಲಿ ಹೂಡಲಾಗಿತ್ತು. ನಂತರ ಉಸ್ತಾದ್ ಅನ್ನು ಮೃಗಾಲಯಕ್ಕೆ ಸೀಮಿತಗೊಳಿಸಿಡಲಾಯಿತು. ಮನುಷ್ಯರ ಹತ್ಯೆಗೆ ನಿಜಕ್ಕೂ ಹುಲಿಯೇ ಕಾರಣವೇ ಎಂಬುದರ ಬಗ್ಗೆ ಸುಪ್ರೀಂಕೋರ್ಟು ಸಹ ಯಾವುದೇ ತೀರ್ಮಾನಕ್ಕೆ ಬರುವುದು ಅಸಾಧ್ಯವಾದ್ದರಿಂದ ವಿಷಯದಲ್ಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟಿನ ತೀರ್ಮಾನ ಸಮಂಜಸವಾಗಿಯೇ ಇದೆ. ಅಂಥಾ ತೀರ್ಮಾನವನ್ನು ಅರಣ್ಯ ಇಲಾಖೆಯ ನೇತೃತ್ವದ ಒಂದು ಕ್ಷೇತ್ರಾಧಾರಿತ, ಸ್ವತಂತ್ರ ಮತ್ತು ಅಧಿಕೃತವಾದ ಪ್ರಕ್ರಿಯೆಗಳಿಗೆ ಬಿಟ್ಟುಕೊಡುವುದು ಉಚಿತ.

ಒಂದು ಕಾಡಿನಲ್ಲಿ ವಾಸ ಮಾಡುತ್ತಿರುವ ಹುಲಿ ಮತ್ತು ಚಿರತಗೆಳಲ್ಲಿ ಯಾವ ನಿರ್ದಿಷ್ಟ ಹುಲಿ ಅಥವಾ ಚಿರತೆ ಮನುಷ್ಯರ ಹತ್ಯೆಗೆ ಕಾರಣ ಎಂದು ಪತ್ತೆಹಚ್ಚುವ ಪ್ರಕ್ರಿಯೆಯನ್ನು ಎಂದೂ ಸರಿಯಾಗಿ ನಿಭಾಯಿಸಲಾಗಿಲ್ಲ. ಮಾನವ ಭಕ್ಷಕ ಎಂಬ ಆರೋಪದ ಮೇಲೆ ಹಿಂದೆ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕೆಲವು ಚಿರತೆಗಳನ್ನು ಕೊಂದುಹಾಕಲಾಗಿದೆ. ಆದರೆ ಅವುಗಳನ್ನು ಕೊಲ್ಲುವ ಮುನ್ನ ಮನುಷ್ಯರ ಹತ್ಯೆಗೆ ನಿರ್ದಿಷ್ಟ ಚಿರತೆಗಳೇ ಕಾರಣವೆಂಬ ಯಾವ ಖಚಿತ ಪುರಾವೆಯನ್ನೂ ಒದಗಿಸದೆ ಅವುಗಳನ್ನು ಕೊಲ್ಲಲಾಗಿತ್ತು. ಪ್ರತಿಯೊಂದು ಹುಲಿ ಅಥವಾ ಚಿರತೆಯ ಚರ್ಮದ ಮೇಲೆ ಆಯಾ ಹುಲಿ ಅಥವಾ ಚಿರತೆಗಳಿಗೆ ನಿರ್ದಿಷ್ಟವಾದ ಪಟ್ಟೆ ಅಥವಾ ಚುಕ್ಕೆಗಳಿರುತ್ತವೆ; ಒಂದು ನಿರ್ದಿಷ್ಟ ಹುಲಿ ಅಥವಾ ಚಿರತೆಯು ಮಾನವ ಭಕ್ಷಕ ಪ್ರವೃತ್ತಿಯನ್ನು ಹೊಂದಿದೆಯೇ ಎಂಬುದನ್ನು ಪ್ರತ್ಯಕ್ಷವಾಗಿ ಗಮನಿಸುವ ಮೂಲಕ ಅಥವಾ ಅವುಗಳ ಚಿತ್ರವನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯುವ ಮೂಲಕ ಪತ್ತೆಹಚ್ಚಬಹುದು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ನಿಗದಿ ಪಡಿಸಿರುವ ಮಾನದಂಡಗಳ ಪ್ರಕಾರ ಒಂದು ಹುಲಿಯನ್ನು ಮಾನವ ಭಕ್ಷಕ ಎಂದು ಘೋಷಿಸುವ ಮುನ್ನ ಅದು ಮನುಷ್ಯ ಹಂತಕವೋ ಅಥವಾ ಮನುಷ್ಯ ಭಕ್ಷಕವೋ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದು ಮನುಷ್ಯ ಹಂತಕ ಮಾತ್ರವೇ ಆಗಿದ್ದರೆ ಅದು ಅಕಸ್ಮಿಕವಾಗಿರುತ್ತದೆಯೇ ವಿನಃ ಭಕ್ಷಕ ಪ್ರವೃತ್ತಿಯದ್ದಾಗಿರುವುದಿಲ್ಲ.

ಅಷ್ಟುಮಾತ್ರವಲ್ಲದೆ, ಮಾನವ ಭಕ್ಷಕ ಹುಲಿಗಳ ಜೊತೆ ಎಷ್ಟೆಲ್ಲಾಕಾನೂನು ಮತ್ತು ತತ್ವಬಾಹಿರವಾಗಿ ನಡೆದುಕೊಳ್ಳಾಗುತ್ತಿದೆ ಎಂಬ ವಿಷಯಗಳೂ ಬೆಳಕಿಗೆ ಬರುತ್ತಿವೆ. ೧೯೭೨ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪ್ರಕಾರ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಯಾವುದಾದರೂ ವನ್ಯಜೀವಿಯು ಮಾನವ ಜೀವಕ್ಕೆ ಗಂಡಾಂತರಕಾರಿ ಎಂದು ಸಾಬೀತಾದಲ್ಲಿ ಮುಖ್ಯ ವನ್ಯಜೀವಿ ವಾರ್ಡನ್ ಅವರ ಅಧಿಕೃತ ಪರವಾನಗಿಯೊಂದಿಗೆ ಮಾತ್ರ ಅದನ್ನು  ಕೊಲ್ಲಬಹುದು. ಮಾನವ ಭಕ್ಷಕ ಪ್ರವೃತ್ತಿಯುಳ್ಳ ಯಾವುದಾದರೂ ವನ್ಯಜೀವಿಯನ್ನು ಕಾನೂನುಬದ್ಧವಾಗಿ ಅಲ್ಲಿಂದ ಹೊರಗಟ್ಟಬೇಕೆಂದರೂ ಅಥವಾ ಕೊಂದುಹಾಕಬೇಕೆಂದರೂ ಅದಕ್ಕೊಂದು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಮತ್ತು ಪ್ರಕ್ರಿಯೆಯು ನಿರ್ದಿಷ್ಟವಾಗಿರಬೇಕು, ಅದನ್ನು ಬಿಟ್ಟು ಬೇರೆ ಯಾವುದಕ್ಕೂ ಹಾನಿ ಮಾಡದಷ್ಟು ನಿಖರವಾಗಿರಬೇಕು, ಮತ್ತು ಅದನ್ನು ಸರ್ಕಾರವೇ ನಡೆಸಬೇಕಿರುತ್ತದೆಯೇ ವಿನಃ ಆಬ್ಬರದೊಂದಿಗೆ ಪ್ರತೀಕಾರ ತೀರಿಸಿಕೊಳ್ಳುವ ರೀತಿಯಲ್ಲಿ ನಡೆಸಬಾರದು. ಅಂಥಾ ತಂಟಕೋರ ಪ್ರಾಣಿಗಳನ್ನು ಕೊಂದುಹಾಕಿದ ನಂತರ ಕೊಂದವರ ಹೆಗಲಿನ ಮೇಲೆ ಕೊಲ್ಲಲ್ಪಟ್ಟ ಪ್ರಾಣಿಯ ಹೆಣವು ತೂಗಾಡುತ್ತಿರುವ ಅಥವಾ ಕೊಂದ ಪ್ರಾಣಿಯನ್ನು ತಮ್ಮ ಕಾಲಬುಡದಲ್ಲಿ  ಕೆಡವಿಕೊಂಡು ಅದರ ಮೇಲೆ ಬಂದೂಕಿನ ಮೊನೆ ತಾಗಿಸುತ್ತಾ ಫೋಸು ಕೊಟ್ಟ ಫೋಟೋಗಳು ವಿಸ್ತೃತವಾಗಿ ಚಲಾವಣೆಯಾಗುತ್ತವೆ. ಇಂಥಾ ಫೋಟೋಗಳು ಬೇಟೆಯಾಡಿದ್ದಕ್ಕೆ ಬಹುಮಾನಿತರಾದ ಅಥವಾ ಪ್ರತೀಕಾರ ತೀರಿಸಿಕೊಂಡ ಮೌಲ್ಯಗಳನ್ನು ಬಿತ್ತುತ್ತವೆಯೇ ವಿನಃ ದೀರ್ಘಕಾಲೀನ ಪರಿಹಾರಗಳನ್ನು ಗಮನದಲ್ಲಿಟ್ಟುಕೊಂಡು ರೂಪಿತವಾದ ಕಾನೂನುಬದ್ಧಸಂರಕ್ಷಣಾ ತತ್ವಗಳನ್ನು ಆಧರಿಸಿದ ಆಧುನಿಕ ಪ್ರಭುತ್ವವೊಂದರ ಮೌಲ್ಯಗಳನ್ನಲ್ಲ. ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಉತ್ತರಖಂಡ್ ಹೈಕೋರ್ಟು ತನ್ನ ೨೦೧೬ರ ಡಿಸೆಂಬರಿನ ಆದೇಶವೊಂದರಲ್ಲಿ ಸತ್ತ ವನ್ಯಜೀವಿಗಳ ಮೃತದೇಹಗಳ ಚಿತ್ರವನ್ನು ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.

ಮನವ ಭಕ್ಷಕ ವನ್ಯಜೀವಿಗಳ ಸುತ್ತ ನಡೆಯುತ್ತಿರುವ ಚಿಂತನ ಮಂಥನಗಳು ಪ್ರಧಾನವಾಗಿ ವನ್ಯಜೀವಿ ಸಂರಕ್ಷಣೆಯ ಸುತ್ತಾ ಕೇಂದ್ರೀಕೃತವಾಗಿರಬೇಕೆ ವಿನಃ ಪ್ರಾಣಿಗಳ ಹಕ್ಕುಗಳ ಮೇಲಲ್ಲ. ಸಂರಕ್ಷಣಾ ತತ್ವಗಳು ಜೀವಕುಲದ ಸಂರಕ್ಷಣೆಯ ಉದ್ದೇಶಹೊಂದಿರುತ್ತವೆ; ಅದನ್ನು ಜನರ ಸಹಕಾರವಿಲ್ಲದೆ ಸಾಧಿಸಲು ಸಾಧ್ಯವಿಲ್ಲ. ಉತ್ತಮ ಸಂರಕ್ಷಣಾ ಪದ್ಧತಿಗಳು ಮಾನವಸಹಭಾಗಿತ್ವ (ಆಂಥ್ರೊಪೊಸೀ) ಮೂಲಕ ಸಾಧಿತವಾಗಿದೆಯೇ ವಿನಃ ಅದರ ಹೊರಗಲ್ಲ. ಆದರೆ ಪ್ರಾಣಿಹಕ್ಕು ಪ್ರತಿಪಾದನೆಗಳು ನಿರ್ದಿಷ್ಟ ಪ್ರಾಣಿಯ ಯೋಗಕ್ಷೇಮಗಳ ಬಗ್ಗೆ ಮಾತ್ರ ಕಾಳಜಿ ಹೊಂದಿರುತ್ತವೆ. ಹೀಗಾಗಿ ಒಂದು ನಿರ್ದಿಷ್ಟ ಮಾನವ ಭಕ್ಷಕ ವನ್ಯಜೀವಿಯನ್ನು ಜೀವಂತವಾಗುಳಿಸಿಕೊಳ್ಳಬೇಕು ಎಂಬ ಬೇಡಿಕೆಯನ್ನು ಮಾನ್ಯ ಮಾಡಲಾಗುವುದಿಲ್ಲ. ಮಾನವ ಮತ್ತು ವನ್ಯಜೀವಿಗಳ ಸಹಜೀವನವನ್ನು ಮನುಷ್ಯ ಕೇಂದ್ರಿತ ಅತಿರೇಕಗಳಿಂದಾಗಲೀ ಅಥವಾ ಪ್ರಾಣಿಹಕ್ಕು ಕೇಂದ್ರಿತ ಅತಿರೇಕಗಳಿಂದಾಗಲೀ ಸಾಧಿಸಲು ಸಾಧ್ಯವಾಗುವುದಿಲ್ಲ.

ಸಂಘರ್ಷಕ್ಕೆ ಏನು ಕಾರಣ ಎಂಬುದನ್ನು ಗ್ರಹಿಸಬೇಕೆಂದರೆ ಇಂಥಾ ಸಂಘರ್ಷದ ಮುಂದುವರೆಕೆಗೆ ಕಾರಣವಾಗಿರುವ ಸಂಗತಿಗಳನ್ನು ಮತ್ತು ಜನರ ತಾಳ್ಮೆಗಳು ಕಟ್ಟೆಯೊಡೆಯುತ್ತಿರುವುದಕ್ಕೆ ಕಾರಣಗಳೇನೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಸರ್ಕಾರಗಳ ಸಹಕಾರವಿಲ್ಲದೆ ಬಡವರೇ ಸಂರಕ್ಷಣೆಯ ಖರ್ಚನ್ನು ಹೊರಬೇಕೆಂದು ನಿರೀಕ್ಷಿಸಲಾಗುವುದಿಲ್ಲ. ಹಾಗೆಯೇ ಮಾನವ-ವನ್ಯಜೀವಿ ಸಂಘರ್ಷವು ಇತರ ಉದ್ವಿಘ್ನತೆಗಳನ್ನು ಒತ್ತಡಗಳನ್ನು ನಿವಾರಿಸಿಕೊಳ್ಳುವ ಮಾರ್ಗವೂ ಆಗಬಾರದು. ಜನರ ಅನುದಿನದ ಹತಾಷೆಗಳ ನಿವಾರಣೆಗೆ ಪ್ರಾಣಿಗಳು ಬಲಿಯಾಗಬಾರದು.

ಇದಕ್ಕೆಲ್ಲಾ ಇರುವ ಏಕೈಕ ಉತ್ತರವೆಂದರೆ ತಳಮಟ್ಟದಲ್ಲಿ ಕ್ಷೇತ್ರಕಾರ್ಯವನ್ನು ಹೆಚ್ಚಿಸುತ್ತಾ ಅತ್ಯಧಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು. ಬೆಳೆ ಮತ್ತು ಸಾಕುಪ್ರಾಣಿ ವಿಮೆಗಳು ಇನ್ನಷ್ಟು ಜನಸ್ನೇಹಿಯಾಗಿಯೂ ಬೇಕೆಂದಾಗ ಕೈಗೆಟುಕುವಂತೆಯೂ ಆಗಬೇಕು. ವನ್ಯಜೀವಿಗಳು ಬರದಂತೆ ತಡೆಗಟ್ಟುವ ಅಭ್ಯಾಸಗಳನ್ನು ವಿಸ್ತೃತವಾಗಿ ಪ್ರಚಾರ ಮಾಡಬೇಕು. ಇಂಥಾ ಸಂಘರ್ಷದ ಪ್ರಕರಣಗಳ ಬಗ್ಗೆ ಅರಣ್ಯ ಇಲಾಖೆಯು ಯೋಗ್ಯವಾಗಿ, ತ್ವರಿತವಾಗಿ ಮತ್ತು ಒಂದೇ ಬಗೆಯಲ್ಲಿ ಸ್ಪಂದಿಸಬೇಕು. ಯಾವುದೇ ಬಗೆಯ ಪ್ರದರ್ಶನಗಳನ್ನು ತಡೆಗಟ್ಟಬೇಕು. ಇದರ ಜೊತೆಗೆ ಒಂದು ನಿರ್ದಿಷ್ಟ ವಸತಿ ಪ್ರದೇಶದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳುವಲ್ಲಿ ಜನರು ಎದುರಿಸುತ್ತಿರುವಂಥಾ ಕಷ್ಟಗಳನ್ನೂ ಒಳಗೊಂಡಂತೆ ಜನರ ಇತರ ಕಷ್ಟಗಳನ್ನು ಕೇಳಿಸಿಕೊಳ್ಳುವ ಕಿವಿಗಳೂ ಇರಬೇಕು. ವನ್ಯಪ್ರದೇಶಗಳ ಮೇಲೆ ಮಾನವವಸತಿಯ ಒತ್ತಡಗಳು ಹೆಚ್ಚುತ್ತಾಹೋದಂತೆ ನಿರ್ದಿಷ್ಟವಾದ ಮತ್ತು ಆಯಾ ಪ್ರದೇಶಗಳಿಗೆ ತಕ್ಕನಾದ ಪರಿಹಾರಗಳನು ಹುಡುಕುವುದು ಈಗ ಕೇವಲ ಆಯ್ಕೆಯಾಗುಳಿಯದೇ ತುರ್ತು ಅನಿವಾರ್ಯವಾಗಿದೆ

ಕೃಪೆ: Economic and Political Weekly ಅನು: ಶಿವಸುಂದರ್ 

           

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...