ಶ್ರೀನಿವಾಸಪುರ: ಸಮಾಜದ ಎಲ್ಲ ಸಮುದಾಯಗಳಿಗೂ ಸಮುದಾಯ ಭವನ ಬಳಕೆಗೆ ಯೋಗ್ಯವಾಗಿದೆ. ಆದ್ದರಿಂದಲೇ ನಮ್ಮ ಸರ್ಕಾರ ಎಲ್ಲ ವರ್ಗದ ಜನರಿಗೂ ಸಮುದಾಯ ಭವನ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಿತು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಕನಕ ನಗರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕನಕ ಸಮುದಾಯ ಭವನ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, 'ಬಿಜೆಪಿಯವರು ಜನವಿರೋಧಿಗಳು. ಅವರನ್ನು ನಂಬಬೇಡಿ. ಬಂದರೆ ಮುಂದೆ ಕಳಿಸಿ’ ಎಂದು ಹೇಳಿದರು.
‘ನಾನು ಮುಖ್ಯ ಮಂತ್ರಿಯಾಗಿದ್ದಾಗ ಎರಡು ಸಲ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ರೈತ ಸಾಲ ಮನ್ನಾ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಆದರೆ ಅವರು ಒಪ್ಪಲಿಲ್ಲ. ಮಲ್ಯ ಅವರಂಥ ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ಸಹಾಯ ಮಾಡುತ್ತಾರೆ. ಬಡವರ ಬಗ್ಗೆ ಚೂರು ಕರುಣೆ ತೋರುವುದಿಲ್ಲ. ಇನ್ನು ಮನ್ ಕಿ ಬಾತ್ ನಿಂದ ಯಾವ ಪ್ರಯೋಜವೂ ಆಗುವುದಿಲ್ಲ’ ಎಂದು ಹೇಳಿದರು.
ಕೇಂದ್ರ ಬಜೆಟ್ ಚುನಾವಣೆ ದೃಷ್ಟಿ ಹೊಂದಿದೆ. ಓಟು ಗಳಿಸುವ ಉದ್ದೇಶದಿಂದ ರೈತರಿಗೆ ರೂ.6000 ಕೊಡುವುದಾಗಿ ಪ್ರಕಟಿಸಲಾಗಿದೆ. ಚುನಾವಣೆ ಹೊಸ್ತಿಲಲ್ಲಿ ಕೊಡುವ ಬದಲು, ಅವರು ಅಧಿಕಾರಕ್ಕೆ ಬಂದ ಮೊದಲ ವರ್ಷವೇ ಏಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು. ಕೆರೆಯ ನೀರನ್ನು ಕೆರೆಗೆ ಚೆಲ್ಲುವುದು ಸರ್ಕಾರದ ಕೆಲಸ. ಜನರು ನೀಡುವ ತೆರಿಗೆ ಹಣವನ್ನು ಕಷ್ಟದಲ್ಲಿರುವ ಸಮುದಾಯಕ್ಕೆ ನೀಡಲು ಹಿಂಜರಿಯ ಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಬುದ್ದಿ ಮಾತ್ರ ಬರಲಿಲ್ಲ. ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ ಸಫಲವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
‘ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಬಡವರ ಬಗ್ಗೆ ಕಾಳಜಿ ಇರುವ ಅಪರೂಪದ ವ್ಯಕ್ತಿ. ಅವರ ಮಾತಿನಂತೆ ನಾನು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅರ್ಧ ಗಂಟೆಯಲ್ಲಿ 6ಪ್ರಮುಖ ಕಾರ್ಯಕ್ರಮ ಪ್ರಕಟಿಸಿದೆ ಎಂದು ಹೇಳಿದರು.
ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ‘ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದಾಗ ಎತ್ತಿನ ಹೊಳೆ ನೀರಾವರಿ ಯೋಜನೆಗೆ 13 ಸಾವಿರ ಕೋಟಿ ಹಣ ಮಂಜೂರು ಮಾಡಿದರು. ತಾಲ್ಲೂಕಿನ 18 ಸಾವಿರ ಮನೆ ನೀಡಿದರು. ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲು ಒಪ್ಪಿಗೆ ಸೂಚಿಸಿದರು. ಮಾತು ತುಸು ಒರಟೆಣಿಸಿದರೂ, ಮನಸ್ಸು ಮಾತ್ರ ಮೃದು. ಅವರು ನನಗೆ ಪ್ರೇರಣೆ ನೀಡಿ ಶಕ್ತಿ ತುಂಬಿದರು’ ಎಂದು ಹೇಳಿದರು.
ಸರ್ಕಾರ ಜಿಲ್ಲೆಯಲ್ಲಿ ಮೆಗಾ ಡೇರಿ ನಿರ್ಮಿಸಲು ರೂ.50 ಲಕ್ಷ ಮಂಜೂರು ಮಾಡಿದೆ. ಎತ್ತಿನ ಹೊಳೆ ನೀರಾವರಿ ಯೋಜನೆ ಜಾರಿಗೆ ತರಲು ಸಾವಿರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕು. ಹಾಗಾಗಿ ಸರ್ಕಾರ ಭೂಸ್ವಾಧೀನ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳಬೇಕಾಗಿದೆ. ಇನ್ನೆರಡು ವರ್ಷಗಳಲ್ಲಿ ಎತ್ತಿನ ಹೊಳೆಯ ನೀರು ಇಲ್ಲಿನ ಕೆರೆಗಳಿಗೆ ಹರಿಯಲಿದೆ ಎಂದು ಹೇಳಿದರು.
ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ರಾಜಕೀಯವಾಗಿ ಕೋಮು ಸಕ್ತಿಗಳನ್ನು ಮಣಿಸಲು ಜಾತ್ಯಾತೀತ ಶಕ್ತಿಗಳು ಒಂದಾಗಬೇಕು. ಉತ್ತರ ಭಾರತದಲ್ಲಿ ಜಾತಿವಾದಿಗಳಿಗೆ ತಕ್ಕ ಪಾಠ ಕಲಿಸಲಾಗಿದೆ. ದಕ್ಷಿಣ ಭಾರದಲ್ಲಿ ಆ ಕೆಲಸ ನಡೆಯಲಿದೆ. ಅದಕ್ಕೆ ಸಾಂಘಿಕ ಪ್ರಯತ್ನ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ತೂಪಲ್ಲಿ ಆರ್.ಚೌಡರೆಡ್ಡಿ, ಎಚ್.ಎಂ.ರೇವಣ್ಣ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಮುಖಂಡರಾದ ರಾಜೇಂದ್ರ, ರಾಮಚಂದ್ರಪ್ಪ, ವೆಂಕಟೇಶಗೌಡ, ವೆಂಕಟೇಶಗೌಡ, ಎ.ನಾಗರಾಜ್, ದಿಂಬಾಲ ಅಶೋಕ್, ಎಲ್.ಗೋಪಾಲಕೃಷ್ಣ, ಎನ್.ಜಿ.ಬ್ಯಾಟಪ್ಪ, ಡಾ.ಸಿ.ಸಿ.ರಾಮೇಗೌಡ, ರಾಮಚಂದ್ರಪ್ಪ, ಚಿಕ್ಕಹನುಮಪ್ಪ, ಅನಿಲ್ ಕುಮಾರ್, ಎನ್.ರಾಜೇಂದ್ರ ಪ್ರಸಾದ್, ಬಿ.ಎಲ್ ಪ್ರಕಾಶ್. ಕೆ.ಕೆ.ಮಂಜು ಅಕ್ಬರ್ ಷರೀಫ್ ಇದ್ದರು.