ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ಪ್ರಕ್ರಿಯೆಯೂ ಪುರಸಭೆ ಸಭಾಗೃಹದಲ್ಲಿ ಸೋಮವಾರ ಸಂಜೆ ನಡೆಯಿತು.
ಪುರಸಭೆ ವ್ಯಾಪ್ತಿಯ ಹರಾಜು ಪ್ರಕ್ರಿಯೆಯಲ್ಲಿ ಮೀನು ಮಾರ್ಕೇಟ್ ಹರಾಜಿನಲ್ಲಿ ಗುತ್ತಿಗೆದಾರರು ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು. ಪುರಸಭೆ ಸಿಬ್ಬಂದಿಗಳು ಹರಾಜು ಪ್ರಕ್ರಿಯೆ ಆರಂಭದಲ್ಲಿ ಮೀನು ಮಾರ್ಕೇಟ ಹರಾಜು ಪೂರ್ವದಲ್ಲಿ ಕೆಲವೊಂದು ಷರತ್ತುಗಳನ್ನು ಹರಾಜಿನಲ್ಲಿ ಪಾಲ್ಗೊಂಡ ಗುತ್ತಿಗೆದಾರರಿಗೆ ತಿಳಿಸಿದರು.
ನಂತರ ಹರಾಜಿನಲ್ಲಿ ಪಾಲ್ಗೊಂಡ ಗುತ್ತಿಗೆದಾರ ಕೃಷ್ಣ ನಾಯ್ಕ ಆಸರಕೇರಿ ನೂತನ ಮಾರುಕಟ್ಟೆಯಲ್ಲಿ ಇನ್ನು ಮೀನು ವ್ಯಾಪಾರ ಆರಂಭವಾಗದೇ ಹರಾಜು ಪ್ರಕ್ರಿಯೆ ನಡೆಸಿರುವುದು ತಪ್ಪು, ಇದರಿಂದ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲು ಸಾಧ್ಯವಿಲ್ಲ. ಒಂದುವೇಳೆ ಹಣ ತುಂಬಿದರೆ ಮೀನು ವ್ಯಾಪಾರಸ್ಥರು ಮಾರ್ಕೇಟ ಬಂದಿದ್ದರೆ ಹರಾಜಿನಲ್ಲಿ ನೀಡಿದ ಹಣಕ್ಕೆ ಜವಾಬ್ದಾರಿ ಪುರಸಭೆ ವಹಿಸಿಕೊಳ್ಳಲಿದೆಯಾ, ಮೊದಲು ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ಮಾಡುವ ಮಹಿಳಾ ಮೀನುವ್ಯಾಪಾರಸ್ಥರನ್ನು ಹೊಸ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಕುಳಿತುಕೊಳ್ಳುವಂತೆ ಮಾಡಿ ಆ ಬಳಿಕ ಹಳೆಯ ಮಾರ್ಕೇಟ್ ಮೀನು ವ್ಯಾಪಾರಸ್ಥರು ಸಹ ವ್ಯಾಪಾರಕ್ಕೆ ಬರಲಿದ್ದಾರೆ ಎಂದು ಹೇಳಿದರು. ಇದಕ್ಕೆ ಪುರಸಭೆ ಮುಖ್ಯಾಧಿಕಾರಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಂಡ ಮೀನು ಮಾರುಕಟ್ಟೆಯನ್ನು ಪುರಸ¨sಗೆÉ ವಹಿಸಿಕೊಟ್ಟಿದ್ದು ಅದರಂತೆ ಮೀನು ವ್ಯಾಪಾರಿಗಳನ್ನು ಸ್ಥಳಾಂತರಿಸಲು ಈಗಾಗಲೇ ಮನವೊಲಿಕೆ ನಡೆಸಲಾಗಿದೆ ಎಂದು ಹೇಳಿದರು. ಇದಕ್ಕೆ ಇನ್ನೋರ್ವ ಗುತ್ತಿಗೆದಾರ ಹಳೆ ಹಾಗೂ ನೂತನ ಮೀನು ಮಾರುಕಟ್ಟೆಗಳೆರಡನ್ನು ಹರಾಜಿನಲ್ಲಿ ಇಟ್ಟು ವ್ಯಾಪಾರಿಗಳಿಗೂ ಗುತ್ತಿಗೆದಾರರಿಗೆ ಅನೂಕೂಲವಾಗುವಂತೆ ಮಾಡಿ ಎಂದು ತಾಕೀತು ಮಾಡಿದರು.
ಏಪ್ರಿಲ್ 1ರಂದು ಹೊಸ ಮಾರುಕಟ್ಟೆಗೆ ಹಳೆ ಮೀನು ಮಾರುಕಟ್ಟೆ ಮಹಿಳೆ ವ್ಯಾಪಾರಿಗಳು ವ್ಯಾಪಾರಕ್ಕೆ ಬಾರದಿದ್ದರೆ ಹರಾಜಿನಲ್ಲಿ ಮಾರುಕಟ್ಟೆ ಪಡೆದ ಗುತ್ತಿಗೆದಾರರಿಗೆ ಹಳೆ ಮೀನು ಮಾರುಕಟ್ಟೆಯಲ್ಲಿ ಹಣ ವಸೂಲಿ ಮಾಡಲು ಪುರಸಭೆ ಅವಕಾಶ ನೀಡಲಿದೆಯಾ ಎಂದು ಹರಾಜಿನಲ್ಲಿ ಪಾಲ್ಗೊಂಡ ಗುತ್ತಿಗೆದಾರರು ಪ್ರಶ್ನಿಸಿದರು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಹೊಸ ಮಾರುಕಟ್ಟೆಯಲ್ಲಿ ಹಣ ವಸೂಲಿ ಮಾಡಲು ಹರಾಜು ನಡೆಸುವಂತೆ ಠರಾವು ಮಾಡಿದ್ದಂತೆ ಕ್ರಮಕ್ಕೆ ಮುಂದಾಗಿದ್ದೇವೆ. ಹಾಗೂ ಹಳೆ ಮಾರುಕಟ್ಟೆಯ ಮೂಲಭೂತ ಸೌಕರ್ಯಗಳಾದ ನೀರು ಬೆಳಕಿನ ವ್ಯವಸ್ಥೆಯನ್ನು ಕಡಿತಗೊಳಿಸಿದ್ದಲ್ಲಿ ವ್ಯಾಪಾರಿಗಳು ಹೊಸ ಮಾರುಕಟ್ಟೆಗೆ ತೆರಳಲಿದ್ದಾರೆಂದು ಪುರಸಭೆ ಅಧ್ಯಕ್ಷ ಸಾದಿಕ ಮಟ್ಟಾ ಗುತ್ತಿಗೆದಾರರಿಗೆ ತಿಳಿಸಿದರು. ಇದಕ್ಕೆ ಸಿಡಿಮಿಡಿಗೊಂಡ ಗುತ್ತಿಗೆದಾರರು ಮೂಲಭೂತ ಸೌಕರ್ಯವನ್ನು ಕಡಿತಗೊಳಿಸಿ ವ್ಯಾಪಾರಿಗಳನ್ನು ಒಕ್ಕೆಲೆಬ್ಬಸಿ ಗದ್ದಲ್ಲ ಸೃಷ್ಠಿಸುವ ಹುನ್ನಾರ ಕೈಗೊಂಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲವು ಸಮಯ ಪುರಸಭೆ ಸದಸ್ಯರಿಗೂ ಹಾಗೂ ಗುತ್ತಿಗೆದಾರರ ನಡುವೆ ವಾಗ್ವಾದ ಸೃಷ್ಠಿಯಾಯಿತು. ಅಂತ್ಯದಲ್ಲಿ ಪುರಸಭೆ ಅಧ್ಯಕ್ಷ ಸಾದಿಕ್ ಮಟ್ಟಾ ಫೆ. 23ರಂದು ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ಹರಾಜು ಪ್ರಕ್ರಿಯೆ ವಿಚಾರವನ್ನು ಇಟ್ಟು ಸದಸ್ಯರ ಸಮ್ಮುಖದಲ್ಲಿ ಚರ್ಚೆ ನಡೆದು ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಹಾಗೂ ಸದ್ಯ ಮೀನು ಮಾರುಕಟ್ಟೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ವಾರದ ಸಂತೆ ಮಾರ್ಕೇಟ, ದಿನವಹಿ ನೆಲವಳಿ, 6 ಮಟನ ಸ್ಟಾಲ್, 7 ಮಾಂಸದ ಅಂಗಡಿ ಹಾಗೂ ಮೀನು ಮಾರ್ಕೇಟ್ಗಳ ಹರಾಜು ನಡೆಯಿತು. ವಾರದ ಸಂತೆ ಮಾಕೇಟ 4,10,000 ರೂ.ಗೆ ದಿನವಹಿ ನೆಲವಳಿಯೂ 4,03,000 ರೂ.ಗೆ ಹರಾಜಾಯಿತು.
ಇನ್ನುಳಿದಂತೆ ಮಟನ್ ಸ್ಟಾಲ್ನ ಒಟ್ಟು 6 ಮಳಿಗೆಯಲ್ಲಿ ಮೊದಲನೇ ಸ್ಟಾಲ್ 2000 ರೂ.ಗೆ, ನಾಲ್ಕನೇ ಸ್ಟಾಲ್ 2250 ರೂ.ಗೆ ಐದನೇ ಸ್ಟಾಲ್ 2250ರೂ.ಗೆ ಹಾಗೂ ಆರನೇ ಸ್ಟಾಲ್ 2250 ರೂ.ಗೆ ಹರಾಜು ನಡೆಯಿತು. ಈ ಪೈಕಿ 2 ಮತ್ತು 3ನೇ ಸ್ಟಾಲ್ ಯಾವುದೇ ಹರಾಜು ಪ್ರಕ್ರಿಯೆಗೆ ಒಳಪಟ್ಟಿಲ್ಲವಾಗಿದೆ. ಇನ್ನು 7 ಮಾಂಸದ ಅಂಗಡಿಯಲ್ಲಿ ಮೊದಲನೇ ಅಂಗಡಿಯನ್ನು 2600 ರೂ.ಗೆ, ಮೂರನೇ ಅಂಗಡಿಯನ್ನು 11,500 ರೂ.ಗೆ, ನಾಲ್ಕನೇ ಅಂಗಡಿಯನ್ನು 2000 ರೂ.ಗೆ, ಐದನೇ ಅಂಗಡಿಯನ್ನು 2400 ರೂ.ಗೆ ಆರನೇ ಅಂಗಡಿಯನ್ನು 2100 ರೂ.ಗೆ ಹಾಗೂ ಏಳನೇ ಅಂಗಡಿಯನ್ನು 2500 ರೂಗೆ ಏಪ್ರಿಲ್ 1 2019ರಿಂದ ಮಾರ್ಚ 31 2020ರ ವರೆಗೆ ಹರಾಜು ನಡೆಯಿತು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಮೊಹಿದ್ದಿನ್ ಮುಹಮ್ಮದ್ ಅಷ್ಪಾಕ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ಕೈಸರ ಅಹ್ಮದ್, ಸದಸ್ಯರಾದ ವೆಂಕಟೇಶ ನಾಯ್ಕ, ಕೃಷ್ಣಾನಂದ ಪೈ, ಸೇರಿದಂತೆ ಇನ್ನುಳಿದ ಸದಸ್ಯರು, ಮುಖ್ಯಾಧಿಕಾರಿ ದೇವರಾಜ್ ಉಪಸ್ಥಿತರಿದ್ದರು.