ಭಟ್ಕಳ: ದೆಹಲಿಯ 8ವರ್ಷದ ಮದ್ರಸಾ ವಿದ್ಯಾರ್ಥಿಯನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿದ್ದನ್ನು ಖಂಡಿಸಿ ಇಲ್ಲಿನ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಎಸ್.ಐ.ಓ ಶಾಖೆಯು ಸಹಾಯಕ ಆಯುಕ್ತರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಶುಕ್ರವಾರ ಸಂಜೆ ಮನವಿಯನ್ನು ಅರ್ಪಿಸಿತು.
ದೇಶದಲ್ಲಿ ನಡೆಯುತ್ತಿರುವ ಗುಂಪುಹತ್ಯೆಗಳು, ಶಾಂತಿಯನ್ನು ಕದಡುತ್ತಿದ್ದು ಕೂಡಲೆ ಪ್ರಧಾನಿಗಳು ಮೌನ ಮುರಿದು ಅದನ್ನು ಬಲವಾಗಿ ಖಂಡಸಬೇಕು ಮತ್ತು ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮವನ್ನು ಜರಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಒಂದು ಸಮುದಾಯವನ್ನು ಗುರಿಮಾಡಿಕೊಂಡು ನಡೆಯುತ್ತಿರುವ ಗುಂಪುಹತ್ಯೆಗಳಿಂದ ದೇಶದಲ್ಲಿ ದ್ವೇಶದ ವಾತವರಣ ಸೃಷ್ಟಿಯಾಗಲು ಕಾರಣವಾಗುತ್ತಿದ್ದು ಇದನ್ನು ದೇಶದ ವಿದ್ಯಾರ್ಥಿ ಸಮುದಾಯ ಬಲವಾಗಿ ಖಂಡಿಸುತ್ತದೆ. ರಾಷ್ಟ್ರದ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಯಥೇಚ್ಯವಾಗಿ ನಡೆಯುತ್ತಿದ್ದು ವಿದ್ಯಾರ್ಥಿ ಸಂಘಟನೆಯ ಸದಸ್ಯರಾದ ನಾವುಗಳು ಇದನ್ನು ಖಂಡಿಸುತ್ತೇವೆ. ಕೂಡಲೆ ಅಪರಾಧಿಗಳ ಬಂಧನಕ್ಕೆ ಕ್ರಮ ಜರಗಿಸಬೇಕೆಂದು ಎಸ್.ಐ.ಓ ಮನವಿ ಪತ್ರದಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಎಸ್.ಎಂ.ಅಬೂದ್, ಸನಾವುಲ್ಲಾ ಅಸಾದಿ, ಬಿಲಾಲ್ ರುಕ್ನುದ್ದೀನ್, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಶೌಕತ್ ಕತೀಬ್, ಎಪಿಸಿಆರ್ ಮುಖಂಡ ಖಮರುದ್ದೀನ್ ಮಷಾಯಿಖ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.