ಶಿರಸಿ: ಕಲ್ಲು ತೂರಾಟ, ದಾಂಧಲೆ ಪ್ರಕರಣ; 71 ಮಂದಿ ಬಂಧನ 9ಮಂದಿ ಬಿಡುಗಡೆ
ಕಾಗೇರಿ ಸಹಿತ ೯ ಮಂದಿ ಬಿಡುಗಡೆ
ಶಿರಸಿ : ಹೊನ್ನಾವರದ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಖಂಡಿಸಿ ಮಂಗಳವಾರ ಸಂಘಪರಿವಾರ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಿಡಿಗೇಡಿಗಳ ಕಲ್ಲು ತೂರಾಟದಿಂದ ಉದ್ವಿಗ್ನ ಸ್ಥಿತಿ ಉಂಟಾಗಿ ಸಂಜೆಯ ವೇಳೆಗೆ ನಗರ ಶಾಂತಿಯ ಕಡೆಗೆ ತಿರುಗಿದೆ.
ಮಂಗಳವಾರ ಒಂದು ದಿವಸದಲ್ಲಿ ಗಲಭೆ ಮುಗಿದು, ಶಾಂತಿ ನೆಲೆಸಿದ್ದರೂ ಅದರ ಪರಿಣಾಮಗಳು ಮಾತ್ರ ದಿನದಿಂದ ದಿನಕ್ಕೆ ತಿಳಿಯುತ್ತಿದೆ. ಬುಧವಾರದಂದು ಬೆಳಿಗ್ಗೆ ಜನರು ವಿಚಾರ ಮಾಡುತ್ತಲೇ ಮನೆಯಿಂದ ಹೊರಬರುವ ಸ್ಥಿತಿ ನಿರ್ಮಾಣವಾಗಿತ್ತಾದರೂ, ನಂತರದಲ್ಲಿ ತಹ ಬಂದಿಗೆ ಬಂದು ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆದಿವೆ.
62 ಜನರ ಮೇಲೆ ಪ್ರಕರಣ :
ಪರೇಶ್ ಮೇಸ್ತ ಹತ್ಯೆ ಖಂಡಿಸಿ ಕರೆ ನೀಡಿದ್ದ ಶಿರಸಿ ಬಂದ್ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ಗಲಭೆ ಆರೋಪದ ಮೇಲೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದು, ಕಲ್ಲು ತೂರಾಟ ಹಾಗೂ ಅಂಗಡಿ ದ್ವಂಸಗೊಳಿಸಿದ ಆರೋಪದ ಮೇಲೆ 62 ಜನರನ್ನು ಬಂಧಿಸಿ ಧಾರವಾಡ ಕಾರಾಗೃಹಕ್ಕೆ ಕರೆದೊಯಲಾಗಿದೆ ಎಂದು ತಿಳಿದು ಬಂದಿದೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಸೇರಿ ಪ್ರಮುಖ 9 ಜನರ ಮೇಲೆ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಇನ್ನುಳಿದ 62 ಜನರ ಮೇಲೆ 307 ಕೇಸ್ ಹಾಕಲಾಗಿದೆ. ಈ ನಡುವೆ ಜಾಮೀನು ಪಡೆದು ಬಿಡುಗಡೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತವರ ಸಹಚರರ ನಡೆಗೆ ಹಿಂದೂಗಳು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ. ನೀವುಗಳೊಂದೆ ಬಚಾವಾದರೆ ಸಾಕಾ, ನಿಮ್ಮನ್ನು ನಂಬಿ ಪ್ರತಿಭಟನೆ ನಡೆಸಲು ಬಂದು ಬಂಧನಕ್ಕೊಳಗಾದವರ ನೆರವಿಗೆ ಧಾವಿಸುವವರಾರು ಎಂದು ಪ್ರಕರಣದಲ್ಲಿ ಸಿಲುಕಿರುವ ವ್ಯಕ್ತಿಗಳ ಸಂಬಂಧಿಕರು, ಕುಟುಂಬದವರು, ಹಿತೈಷಿಗಳು ಪ್ರಶ್ನಿಸುತ್ತಿದ್ದಾರೆ.
ರಾಜಕೀಯ ಕೆಸರಾಟ :
ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಘಟನೆಯಿಂದ ಹಿಡಿದು ಶಿರಸಿಯಲ್ಲಿನ ಪ್ರತಿಭಟನೆಯ ವರೆಗೂ ರಾಜಕೀಯ ಕೆಸರಾಟಗಳು ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಒಬ್ಬರನ್ನೊಬ್ಬರನ್ನು ದೂಷಿಸಿಕೊಂಡರೆ ಜೆಡಿಎಸ್ ಘಟನೆಯ ಬಗ್ಗೆ ಎರಡೂ ಪಕ್ಷಗಳನ್ನು ದೂಷಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ರಾಮಲಿಂಗರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಘಟನೆಗೆ ಬಿಜೆಪಿ ಕುಮ್ಮಕ್ಕಿದೆ ಎಂದು ಹೇಳಿದ್ದರೆ, ಬಿಜೆಪಿಯ ಕೆಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ, ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ಘಟನೆ ರಾಜಕೀಯ ಮೇಲಾಟಕ್ಕೆ ಬಳಕೆಯಾಗುತ್ತಿದೆ ಎನ್ನುವುದು ಸಾಮಾನ್ಯ ಜನರ ಅಭಿಪ್ರಾಯವಾಗಿದೆ.
ಸಾವಿನ ಪ್ರಕರಣ ಸಿಬಿಐ ಗೆ :
ಪರೇಶ್ ಮೇಸ್ತ ಸಾವಿನ ಪ್ರಕರಣದ ಕುರಿತಾಗಿ ಹಲವಾರು ಗೊಂದಲಗಳು ಜನರಲ್ಲಿ ಮೂಡಿದ್ದವು. ದಿನಕ್ಕೊಂದು ರಾಜಕೀಯ ಮುಖಂಡರ ಹೇಳಿಕೆಗಳಿಂದ ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲಿಯೂ ಪೋಸ್ಟ ಮಾರ್ಟಮ್ ವರದಿಯ ಬಗ್ಗೆ ಕಳೆದ ಎರಡು ದಿನಗಳಿಂದ ಹೆಚ್ಚು ಚರ್ಚೆಯಾಗಿತ್ತು. ಆದರೆ ಇದೆಲ್ಲ ಗೊಂದಲಗಳಿಗೆ ಬುಧವಾರ ತರೆ ಬಿದ್ದಿದ್ದು, ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಸಿಬಿಐ ಅಂತಿಮ ವರದಿ ಬಂದ ನಂತರದಲ್ಲಿ ಸತ್ಯಾ ಸತ್ಯತೇ ತಿಳಿಯಲಿದ್ದು, ಸಾವಿನ ಮೇಲೆ ನಡೆದ ಹೇಳಿಕೆ-ಕೆಸರಾಟ-ಗೊಂದಲ ರಾಜಕೀಯವೇ ಅಥವಾ ನ್ಯಾಯಕ್ಕಾಗಿ ಹೋರಾಟವೇ ಎಂಬುದು ತಿಳಿಯಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.