ವಾರಾಣಸಿ: ಚುಡಾವಣೆ ಪ್ರಕರಣದ ವಿರುದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್ಯು) ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸ್ ಲಾಠಿ ಚಾರ್ಜ್ನಲ್ಲಿ ಮಹಿಳೆಯರು ಸೇರಿದಂತೆ ಹಲವು ವಿದ್ಯಾರ್ಥಿಗಳು ಹಾಗೂ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಸೋಮವಾರದಿಂದ ಅಕ್ಟೋಬರ್ 2ರ ವರೆಗೆ ರಜೆ ಘೋಷಿಸಿದೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಭಾಗೀಯ ಆಯುಕ್ತರಿಂದ ವರದಿ ಕೇಳಿದ್ದಾರೆ. ಸಮಾಜವಾದಿ ಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಹಲ್ಲೆಯನ್ನು ಖಂಡಿಸಿವೆ.
ಬೆಂಕಿಯಿಡುವುದೂ ಸೇರಿದಂತೆ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಾಗ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ನಡೆಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಪೊಲೀಸರಿಗೂ ಗಾಯಗಳಾಗಿವೆ.
ಗುರುವಾಋ ನಡೆಯಿತು ಎನ್ನಲಾದ ಚುಡಾವಣೆ ಪ್ರಕರಣದ ವಿರುದ್ಧ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದಾಗ ಹಿಂಸಾಚಾರ ಶುರುವಾಯಿತು. ಬಳಿಕ ವಿದ್ಯಾರ್ಥಿಗಳು ಶನಿವಾರ ರಾತ್ರಿ ಉಪ ಕುಲಪತಿ ಅವರನ್ನು ಭೇಟಿ ಮಾಡಲೆಂದು ಅವರ ನಿವಾಸದ ಮುಂದೆ ಧರಣಿ ಕುಳಿತರು ಎಂದು ಪೊಲೀಸ್ ಮತ್ತು ವಿವಿ ಮೂಲಗಳು ಹೇಳಿವೆ.
ವಿವಿಯ ಭದ್ರತಾ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ವಿವಿ ಮೂಲಗಳು ಹೇಳಿವೆ.
ಕೆಲವು ವಿದ್ಯಾರ್ಥಿಗಳು ಬಲವಂತವಾಗಿ ಉಪ ಕುಲಪತಿಯವರ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ತಡೆದರು. ಬಳಿಕ ವಿದ್ಯಾರ್ಥಿಗಳ ಜತೆ ಸೇರಿಕೊಂಡ ಕೆಲವು 'ಹೊರಗಿನವರು' ಕಲ್ಲುತೂರಾಟ ಆರಂಭಿಸಿದರು. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ಘಟನೆಯ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಡವಿಜನಲ್ ಕಮಿಷನರ್ಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಲಖನೌದಲ್ಲಿ ತಿಳಿಸಿದರು.
ಲಾಠಿಯೇಟು ತಿಂದ ಪತ್ರಕರ್ತರು ಮುಖ್ಯಮಂತ್ರಿಗಳ ನಿವಾಸದ ಎದುರು ಧರಣಿ ನಡೆಸಿದರು. ನಂತರ ತನಿಖೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗ್ರಹಿಸಿ ಜಿಲ್ಲಾ ಮ್ಯಾಜಿಸ್ಟೇಟರಿಗೆ ದೂರು ನೀಡಿದರು.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬಿಎಚ್ಯುನಲ್ಲಿ ನಡೆದ ಲಾಠಿ ಚಾರ್ಜನ್ನು ಖಂಡಿಸಿದ್ದಾರೆ.