ಶಾಲೆಗೆ ಚಕ್ಕರ್ ನೀಡಿ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಶಿಕ್ಷಕರು;ತಾ.ಪಂ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ
ಶ್ರೀನಿವಾಸಪುರ: ಶಿಕ್ಷಕರು ನಿಗಧಿತ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹೋಗುತ್ತಿಲ್ಲ ಮತ್ತು ಬಹುತೇಕ ಶಿಕ್ಷಕರು ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಪಕ್ಕದಲ್ಲಿ ಹಣದ ಲೇವಾದೇವಿ ಮತ್ತು ಭೂವ್ಯವಹಾರಗಳಲ್ಲಿ ತಲ್ಲೀನರಾಗಿ ಕಾಲಾಹರಣ ಮಾಡುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಬಾಗದಲ್ಲಿಯೇ ಇದ್ದರೂ ಅಂತಹ ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಸದಸ್ಯರು ಬಿಇಓ ಶಂಷುನ್ನೀಸಾ ರವರಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಆªರಣದಲ್ಲಿ ಅಧ್ಯಕ್ಷಣಿ ಸುಗಣಮ್ಮ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಬಿಇಓ ರವರನ್ನು ಶಿಕ್ಷಣ ಇಲಾಖೆಗೆ ಸಂಬಂದಿಸಿದಂತೆ ಜೆಡಿಎಸ್ ಸದಸ್ಯರಾದ ಆರ್.ಜಿ.ನರಸಿಂಹಯ್ಯ ಮತ್ತು ಮಂಜುನಾಥರೆಡ್ಡಿ ಬಿಇಓ ರವರನ್ನು ಪ್ರಶ್ನಿಸಿ ಶಿಕ್ಷಣ ಇಲಾಖೆಯ ಕಛೇರಿ ಸಿಬ್ಬಂದಿ ವರ್ಗದವರು ಎಷ್ಟು ಜನ ಇದ್ದಾರೆ. ಅವರ ಕಾರ್ಯ ವೈಖರಿ ಏನು? ಬಿಆರ್ಸಿ ಮತ್ತು ಸಿಆರ್ಸಿಗಳು ಎಷ್ಟು ಜನರು ಶಾಲೆಗಳಲ್ಲಿ ನಡೆಯುವ ಪ್ರಾರ್ಥನೆಗೆ ಹಾಜರಾಗಿರುತ್ತಾರೆ. ಯಾವ ಯಾವ ಶಾಲೆಗಳಿಗೆ ಬೇಟಿ ನೀಡಿರುತ್ತಾರೆ ಎಂಬ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು. ತಾಲೂಕಿನಲ್ಲಿ ಒಂದು ಮಗು, ಎರಡು ಮಕ್ಕಳು ಮತ್ತು ಮೂರು ಮಕ್ಕಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳು ಎಷ್ಟು ಇವೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದಾಗ ಕೆಲಕಾಲ ಸ್ತಭ್ದರಾದ ಇವರು ನಂತರ ಉತ್ತರಿಸಿ ಓಬೇನಹಳ್ಳಿ ಮತ್ತು ಪಣಸಮಾಕನಹಳ್ಳಿ ಶಾಲೆಗಳು ಈ ಗುಂಪಿಗೆ ಬರುತ್ತವೆ ಎಂದು ತಿಳಿಸಿದರು. ಸರ್ಕಾರಿ ನೌಕರಿ ಮಾಡುವ ಶಿಕ್ಷಕರು ಬೇಜಾವಾಬ್ದಾರಿಯಿಂದ ಇರುವುದು ಕಂಡು ಬಂದರೆ ಅಂತಹ ಶಿಕ್ಷಕರ ವಿರುದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮಾಹಿತಿ ನೀಡಿ ಅಮಾನತ್ತು ಗೊಳಿಸಲು ಶಿಪಾರಸ್ಸು ಮಾಡಿ. ನಿಮ್ಮ ಜೊತೆಗೆ ತಾ.ಪಂ.ಸದಸ್ಯರು ನಾವಿದ್ದೇವೆ ಎಂದು ಆತ್ಮ ಸ್ಥೈರ್ಯ ತುಂಬಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಪ್ರಶ್ನಿಸಿದ ಸದಸ್ಯ ಮಂಜುನಾಥರೆಡ್ಡಿ ಪಟ್ಟಣದ ಮುಳಬಾಗಿಲು ರಸ್ತೆಯಲ್ಲಿ ಅಂಗನವಾಡಿ ಕೇಂದ್ರದ ಹಳೆಯ ಕಟ್ಟಡ ಎಲ್ಲಿದೆ ಮತ್ತು ಅದು ಖಾಸಗಿ ವ್ಯಕ್ತಿಗಳು ಕಬಳಿಸುತ್ತಿರುವ ವಿಷಯ ನಿಮಗೆ ತಿಳಿದಿದೆಯೇ? ಪಟ್ಟಣದಲ್ಲಿಯೇ ಇಂತಹ ದುರಂತ ನಡೆಯುತ್ತಿದ್ದರೂ ನೀವು ಯಾಕೆ ಜಾಣಕುರುಡುತನವನ್ನು ಪ್ರದರ್ಶಿಸುತ್ತಿದ್ದೀರ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಎಸಿಡಿಪಿಓ ಮುನಿರಾಜು ನಮಗೆ ಮಾಹಿತಿ ಇದ್ದು ಇದರ ಬಗ್ಗೆ ಈಗಾಗಲೆ ಮೇಲಧಿಕಾರಿಗಳಿಗೆ ವರದಿ ನೀಡಿದ್ದೇವೆ ಎಂದರು.
ಮೀನುಗಾರಿಕೆ ಇಲಾಖೆಗೆ ಸಂಬಂದಿಸಿದಂತೆ ಇಲಾಖೆಯ ಸಹಾಯಕ ನಿರ್ಧೇಶಕ ಮುನಯ್ಯ ರವರು ಮಾಹಿತಿ ನೀಡಿ ತಾಲೂಕಿನ ವೃತ್ತಿ ನಿರತ ಮೀನುಗಾರರಿಗೆ ಉಚಿತವಾಗಿ ನೀಡಲು ಸೈಕಲ್ ಮತ್ತು ಬಲೆ ಮಾತ್ರ ಬಂದಿದೆ ಎಂದು ತಿಳಿಸಿದಕ್ಕೆ ಕೆರಳಿದ ಸದಸ್ಯರು ಮೀನುಗಾರರ ವಸತಿ ಫಲಾನುಭವಿಗಳ ಪಟ್ಟಿ ಹಾಗೂ ತಾಲೂಕಿನಲ್ಲಿ ಮೀನುಗಾರಿಕಾ ಕೆರೆಗಳನ್ನು ಹರಾಜು ಮಾಡಿರುವುದು ಮತ್ತು ಇಲಾಖೆಗೆ ಇದರಿಂದ ಎಷ್ಟು ಹಣ ಬಂದಿದೆ ಎಂಬುದರ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಇವರು 2017-18ನೇ ಸಾಲಿನಲ್ಲಿ 50ಮನೆಗಳು ಹಾಗೂ ಕೆರೆಗಳ ಹರಾಜಿನಿಂದ ಸುಮಾರು 8ಲಕ್ಷ ರೂಗಳು ಇಲಾಖೆಗೆ ಸಂದಾಯವಾಗಿದೆ ಎಂದರು.
ಕ.ರಾ.ರ.ಸಾ.ಸಂ. ಗೆ ಸಂಬಂದಿಸಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಹುತೇಕ ಗ್ರಾಮಗಳಿಗೆ ಬಸ್ಸಿನ ಸಂಚಾರವಿಲ್ಲ. ಚಿಂತಾಮಣಿಯಿಂದ ಶ್ರೀನಿವಾಸಪುರಕ್ಕೆ ರಾತ್ರಿ 8ಗಂಟೆ ಮೇಲೆ ಒಂದು ಬಸ್ಸೂ ಸಂಚರಿಸುವುದಿಲ್ಲ. ಕೋಲಾರದಿಂದ ಶ್ರೀನಿವಾಸಪುರಕ್ಕೆ ರಾತ್ರಿ 10ಗಂಟೆಗೆ ಒಂದು ಬಸ್ಸು ಸಂಚಾರ ಮಾಡುವಂತೆ ಹಾಗೂ ಆಂದ್ರದ ಗಡಿ ಭಾಗದ ಬೂರಗಮಾಕಲಹಳ್ಳಿ ಗ್ರಾಮದಕಡೆಯಿಂದ ಶಾಲೆಯ ಪ್ರಾರಂಭದ ಸಮಯಕ್ಕೆ ಹೋಗುವ ಮತ್ತು ಬರುವ ಬಸ್ಸುಗಳ ವ್ಯವಸ್ಥೆ ಕಲ್ಪಿಸಬೇಕೆಂದು ಅಧ್ಯಕ್ಷೆ ಸುಗುಣಮ್ಮ ರವರು ಡಿಪೋ ವ್ಯವಸ್ಥಾಪಕ ಮಂಜುನಾಥ್ ರವರಿಗೆ ಸೂಚಿಸಿದರು.
ಕೃಷಿ ಇಲಾಖೆಗೆ ಸಂಬಂದಿಸಿದಂತೆ ತಾಂತ್ರಿಕ ಕೃಷಿ ಅಧಿಕಾರಿ ಈಶ್ವರ್ರನ್ನು ಪ್ರಶ್ನಿಸಿ ಟಾರ್ಪಲ್ಗಳು 2ವರ್ಷಗಳಿಂದ ರೈತರಿಗೆ ನೀಡಿಲ್ಲ. ಎಸ್,ಸಿ,ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಇಲಾಖೆಯಿಂದ ಬರುವ ಯೋಜನೆಗಳು ಮತ್ತು ಜಲಾಯನ, ಸಣ್ಣ ನೀರಾವರಿ ಇಲಾಖೆಗಳಿಂದ ನಿರ್ಮಿಸಿರುವ ಚೆಕ್ ಡ್ಯಾಮುಗಳ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಟಾರ್ಪಲ್ಗಳು 15ದಿನಗಳ ಒಳಗಾಗಿ ಎರಡು ವರ್ಷಗಳ ಕಾಲ ನೀಡಬೇಕಾದ ಎಲ್ಲಾ ಫಲಾನುಭವಿಗಳಿಗೆ ಹೋಬಳಿ ಮಟ್ಟದಲ್ಲಿ ವಿತರಣೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು. ಸಣ್ಣ ಕೈಗಾರಿಕೆ ಇಲಾಖೆಗೆ ಸಂಬಂದಿಸಿದಂತೆ ಅಧಿಕಾರಿ ಬಳಿ ಯಾವುದೇ ಮಾಹಿತಿ ಇಲ್ಲದ ಕಾರಣ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಇಲಾಖೆ, ರೇಷ್ಮೆ ಇಲಾಖೆ, ಅಕ್ಷರದಾಸೋಹ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ತಾ.ಪಂ. ಇಓ ನಾರಾಯಣಸ್ವಾಮಿ, ಲೆಕ್ಕ ಸಹಾಯಕ ಅಧಿಕಾರಿ ಮಂಜುನಾಥ್, ಆನಂದಾಚಾರಿ. ಉಪಾಧ್ಯಕ್ಷೆ ಮಂಜುಳಮ್ಮ, ಸದಸ್ಯರಾದ ಕೃಷ್ಣಾರೆಡ್ಡಿ, ಶ್ರೀರಾಮಪ್ಪ, ನರೇಶ್, ನಾಗವೇಣಿರೆಡ್ಡಿ, ರಾದಮ್ಮ ಇತರರು ಹಾಜರಿದ್ದರು.