ಜಾಲಿ ಪ.ಪಂ ಅಧ್ಯಕ್ಷರಾಗಿ ಆದಂ ಪಣಂಬೂರು ಸರ್ವಾನುಮತದಿಂದ ಆಯ್ಕೆ
ಭಟ್ಕಳ: ಅಬ್ದುಲ್ ರಹೀಮ್ ಶೇಖ್ ರಾಜಿನಾಮೆ ನೀಡುವುದರೊಂದಿಗೆ ತೆರವುಗೊಂಡಿದ್ದ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ತಂಝೀಮ್ ಬೆಂಬಲಿತ ಅಭ್ಯರ್ಥಿ ಸೈಯ್ಯದ್ ಆದಂ ಪಣಂಬೂರು ಮುಂದಿನ ಎಂಟು ತಿಂಗಳ ಅವಧಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಧಿ ನಿಗದಿಸಲಾಗಿದ್ದು ಚುನಾವಣೆಯಲ್ಲಿ ಸೈಯದ್ ಅದಮ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಂತರ ಮದ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಹಿಂಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಸೈಯದ್ ಅದಮ್ ಪಣಂಬೂರು ಸಲ್ಲಿಸಿದ ನಾಮಪತ್ರ ಹಿಂಪಡೆದುಕೊಳ್ಳದ ಕಾರಣ ಅವರನ್ನೇ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಇವರು ಇಲ್ಲಿನ ಜಾಲಿ ಪಟ್ಟಣ ಪಂಚಾಯತನ ವಾರ್ಡ ನಂ 15ರ ಚುನಾಯಿತ ಪ್ರತಿನಿಧಿಯಾಗಿದ್ದು, 2017 ರಲ್ಲಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿದ ವೇಳೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸೈಯದ್ ಅದಮ್ ಪಣಂಬೂರು ಅವರು ಇಲ್ಲಿನ ತಂಜೀಂ ಸಂಸ್ಥೆ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು.
ತಂಝೀಮ್ ಬೆಂಬಲಿತ 12 ಸದಸ್ಯರು, ಕಾಂಗ್ರೇಸ್ ಬೆಂಬಲಿತ 5 ಹಾಗೂ ಬಿಜೆಪಿ ಬೆಂಬಲಿತ 3 ಮಂದಿ ಒಟ್ಟು 20 ಮಂದಿ ಸದಸ್ಯರ ನೂತನ ಜಾಲಿ ಪಟ್ಟಣ ಪಂಚಾಯತ್ ಗೆ ತಂಝೀಮ್ ಸಂಸ್ಥೆಯನ್ನು ಎದುರು ಹಾಕಿಕೊಂಡು ಆಗಿನ ಶಾಸಕ ಮಾಂಕಾಳ್ ವೈದ್ಯರ ಬೆಂಬಲದೊಂದಿಗ ಅಬ್ದುಲ್ ರಹೀಮ್ ಶೇಖ್ ಅಧ್ಯಕ್ಷ ಗಾದಿಯನ್ನು ಏರಿದ್ದರು. ಇದು ತಂಝಿಮ್ ಸಂಸ್ಥೆಗೆ ಇರುಸುಮುರಿಸು ಉಂಟು ಮಾಡಿದ್ದ ವಿಧಾನÀಸಭಾ ಚುನಾವಣೆಯ ನಂತರ ವೈಯಕ್ತಿಕ ಕಾರಣ ನೀಡಿ ಅಬ್ದುಲ್ ರಹೀಂ ಶೇಖ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದರ ಹಿಂದೆ ರಾಜಕೀಯ ಒತ್ತಡವಿತ್ತು ಎಂದು ಹೇಳಲಾಗುತ್ತಿದ್ದರು ತನ್ನ ವ್ಯಯಕ್ತಿಕ ಕಾರಣವೇ ರಾಜಿನಾಮೆ ನೀಡಲು ಪ್ರಮುಖ ಕಾರಣ ಎಂದು ರಹೀಂ ಸ್ಪಷ್ಟನೆಯನ್ನು ನೀಡಿದ್ದರು.
ಅಂದಿನಿಂದ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನವನ್ನು ಸೈಯ್ಯದ್ ಆದಂ ರನ್ನು ಬೆಂಬಲಿಸಿ ಗೆಲ್ಲಿಸುವುದರ ಮೂಲಕ ತಂಝೀಮ್ ಸಂಸ್ಥೆ ಪಂಚಾಯತ್ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಂತಾಗಿದೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೈಯದ್ ಅದಮ್ ಪಣಂಬೂರು ಅವರನ್ನು ಪಂಚಾಯತ್ ಸದಸ್ಯರು ಹಾಗೂ ಅವರ ಬೆಂಬಲಿಗರು ಹೂವಿನ ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮೀ ನಾಯ್ಕ, ಜಾಲಿ ಪಟ್ಟಣ ಪಂಚಾಯತ್ ಪ್ರಭಾರ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ, ಮಾಜಿ ಅಧ್ಯಕ್ಷ ಅಬ್ದುಲ್ ರಹೀಂ ಶೇಖ್, ಇಮ್ರಾನ್ ಲಂಕಾ ಸೇರಿದಂತೆ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.