ರಸ್ತೆ ಅಪಘಾತದಲ್ಲಿ ವರದಿಗಾರ ಮೌನೇಶ್ ಪೋತರಾಜ್ ನಿಧನ;ಕಸದ ವಾಹನದಲ್ಲಿ ಮೃತದೇಹ ಸಾಗಿಸಿದ ಪೊಲೀಸರು ಪತ್ರಕರ್ತರ ವಲಯದಲ್ಲಿ ಆಕ್ರೋಶ
ಕಾರವಾರ: ಸುದ್ದಿ ಟಿವಿಯ ಉತ್ತರಕನ್ನಡ ಜಿಲ್ಲಾ ವರದಿಗಾರನಾಗಿ ಶಿರಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೌನೇಶ ಪೋತರಾಜ (28) ತನ್ನ ಸ್ವಂತ ಊರಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮರಕ್ಕೆ ಢಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಶನಿವಾರ ಶಿರಸಿಯಲ್ಲಿ ನಡೆದ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಈ ವಿಷಯದ ಕುರಿತು ನಡೆದ ರಾಜ್ಯ ಸಮಾವೇಶದ ವರದಿಯನ್ನು ಮಾಡಿ ಬಳಿಕ ರಾತ್ರಿ ವೇಳೆ ತನ್ನ ಊರಾದ ಹಾವೇರಿಯ ಛಬ್ಬಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ.
ತಿರುವಿನಿಂದ ಕೂಡಿದ ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ರಸ್ತೆ ಕಾಣದಾಗಿ ಈ ಘಟನೆ ನಡೆದಿರಬಹುದು ಎಂದು ಊಹಿಸಲಾಗಿದೆ.
ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೌನೇಶ್, ತಮ್ಮ ಉತ್ತಮ ವರದಿಗಾರಿಕೆಯ ಜತೆಗೆ ಪ್ರಗತಿಪರ ಚಿಂತಕರಾಗಿ, ಸಾಹಿತಿಯಾಗಿಯೂ ಅತೀ ಚಿಕ್ಕ ವಯಸ್ಸಿನಲ್ಲಿಯೇ ಪ್ರತಿಭಾನ್ವಿತರಾಗಿ ಹೊರಹೊಮ್ಮಿದ್ದರು. ಸಿನಿಮಾಗಳಿಗೆ ಸಾಹಿತ್ಯಗಳನ್ನು ಕೂಡ ಅವರು ಬರೆಯುತ್ತಿದ್ದರು. ಇತ್ತೀಚಿಗಷ್ಟೆ ಫಸ್ಟ್ ನ್ಯೂಸ್ ಗೆ ಬೆಳಗಾವಿ ಜಿಲ್ಲಾ ವರದಿಗಾರನಾಗಿ ಆಯ್ಕೆಯಾಗಿರುವುದಾಗಿ ಕೂಡ ಇತರ ವರದಿಗಾರರೊಂದಿಗೆ ಹಂಚಿಕೊಂಡಿದ್ದರು. ಎಲ್ಲರೊಂದಿಗೆ ಸ್ನೇಹಿಯಾಗಿದ್ದ ಅವರ ಅಗಲಿಕೆಗೆ ಮಿತ್ರ ವೃಂದ ಕಂಬನಿ ಮಿಡಿದಿದೆ.
ಕಸದ ವಾಹನದಲ್ಲಿ ಮೃತ ದೇಹ ಸಾಗಿಸಿದ ಪೊಲೀಸರು: ವ್ಯಾಪಕ ಆಕ್ರೋಶ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಪತ್ರಕರ್ತ ಮೌನೇಶರ ಮೃತದೇಹವನ್ನು ಕಸ ಸಾಗಿಸುವ ಟ್ರ್ಯಾಕ್ಟರ್ ವೊಂದರಲ್ಲಿ ಹಾನಗಲ್ ಪೊಲೀಸರು ಸಾಗಿಸಿರುವ ವಿಡೀಯೋ ತುಣುಕು ವೈರಲ್ ಆಗುತ್ತಿದ್ದು ಇದಕ್ಕೆ ಸಾರ್ವಜನಿಕರು ಪತ್ರಕರ್ತರ ವಲಯ ತೀರ ಆಕ್ರೋಶ ವ್ಯಕ್ತಪಡಿಸಿದೆ.
ಮೃತದೇಹವನ್ನು ಕಸದ ವಾಹನದಲ್ಲಿ ಸಾಗಿಸುವಷ್ಟು ಪೊಲೀಸರು ಕೀಳ್ಮಟ್ಟಕ್ಕಿಳಿದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದು ಆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಮೃತದೇಹ ಸಾಗಿಸಲು ಯಾವುದೇ ವ್ಯವಸ್ಥೆ ಇರದ ಕಾರಣ ಸ್ಥಳಿಯ ಸಂಪನ್ಮೂಲವನ್ನು ಬಳಸಿಕೊಳ್ಳಲಾಗಿದೆ ಎಂದಿದ್ದಾರೆ.