ಸಮಸಮಾಜದ ನಿರ್ಮಾತೃ ಛತ್ರಪತಿ ಶಿವಾಜಿ ಮಹಾರಾಜ: ಡಾ.ಶಿವಾನಂದ ನಾಯ್ಕ್
ಕಾರವಾರ: ಸಾಮಾಜಿಕ ಬದುಕಿನಲ್ಲಿ ಶೋಷಣೆ, ಅಸಮಾನತೆ ಸರಿಪಡಿಸಿ ಸಮಸಮಾಜದ ನಿರ್ಮಿಸುವ ನಿಟ್ಟಿನಲ್ಲಿ ಉದಯಿಸಿದ ರಾಜ ಶಿವಾಜಿ ಮಹಾರಾಜ ಎಂದು ಶಿವಾಜಿ ಕಾಲೇಜಿನ ಪ್ರಾಚಾರ್ಯ ಡಾ.ಶಿವಾನಂದ ನಾಯ್ಕ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮತನಾಡಿದರು.
ಶಿವಾಜಿ ಮಹಾರಾಜರು ರಾಜನಾಗಿದ್ದು ಸ್ವಂತ ಬಲದಿಂದ ಎಂದ ಅವರು ಸಮಾಜದಲ್ಲಿ ಹಲವಾರು ಶೋಷಣೆಗಳನ್ನು ಅನುಭವಿಸಿದ ಶಿವಾಜಿ ಮಹಾರಾಜರು ತಮ್ಮ ಸಾಮ್ರಾಜ್ಯ ಕಟ್ಟಿ ಅಲ್ಲಿನ ಶೂದ್ರರು, ಬುಡಗಟ್ಟು ಜನಾಂಗದವರು ಹಾಗೂ ಮುಸ್ಲಿಮರನ್ನು ಸಮಾನವಾಗಿ ಕಾಣುವ ಮೂಲಕ ಸಾಮಾಜಿಕ ತಾರತಮ್ಯವನ್ನು ಮೆಟ್ಟಿ ನಿಂತಿದ್ದಾರೆ ಎಂದರು.
ಅನ್ಯರ ವಿರುದ್ಧ ಹೋರಾಡುವ ಮೂಲಕ ಸ್ವರಾಜ್ಯ ಸ್ಥಾಪನೆಯ ಪ್ರಥಮ ರಾಜ ಛತ್ರಪತಿ ಶಿವಾಜಿ ಮಹಾರಾಜ ಎಂದ ಅವರು, ಭೂಕಬಳಿಕೆ, ಅನ್ಯಾಯಗಳನ್ನು ಎಂದೂ ಸಹಿಸಿಕೊಳ್ಳದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾ ಪರಾಕ್ರಮಿ. ಒಮ್ಮೆ ತಮಗೆ ಅರಿವಿಲ್ಲದೆ ಮಹಿಳೆಯೊಬ್ಬರು ಆಳುತ್ತಿದ್ದ ಬಳ್ಳಾರಿಯ ಕೋಟೆಯನ್ನು ತನ್ನ ಸೈನಿಕರು ಮುತ್ತಿಗೆ ಹಾಕಿದಾಗ ವಿಷಯ ತಿಳಿದ ಶಿವಾಜಿ ಮಹಾರಾಜರು ಆ ರಾಣಿಗೆ ಕ್ಷಮೆ ಕೋರಿ ತಾವು ತಾಯಿ ಸಮಾನರು ನಿಮ್ಮ ರಕ್ಷಣೆ ಹೊಣೆ ತಮ್ಮದೆಂದು ಭರವಸೆ ನೀಡಿ ತಮ್ಮ ಮಾತೃ ಹೃದಯವನ್ನು ಪ್ರದರ್ಶಿಸಿದ ಇತಿಹಾಸವಿದೆ. ತಾಯಿ ಜೀಜಾಬಾಯಿಯವರಿಂದ ಅಂತಃಕರಣದ ಸಂಸ್ಕಾರವನ್ನೂ ಕಲಿತಿದ್ದ ಶಿವಾಜಿಯವರು ತಮ್ಮ ಆಡಳಿತದ ಅವಧಿಯಲ್ಲಿ ಎಂದೂ ದಾರಿತಪ್ಪಲಿಲ್ಲ ಎಂದರು.
ತಮ್ಮ ಯುದ್ಧ ತಂತ್ರಗಾರಿಕೆಯಿಂದ ಹೆಸರಾದ ಛತ್ರಪತಿ ಶಿವಾಜಿ ಮಹಾರಾಜರು ಯುವ ಯುದ್ಧೋತ್ಸಾಹಿಗಳಿಗೆ ಸಹಾ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರವಾರದ ಉಪ ವಿಭಾಗದ ಸಹಾಯಕ ಕಮಿಷನರ್ ಅಭಿಜಿನ್ ಅವರು ಮಾತನಾಡಿ, ದೇಶಕ್ಕಾಗಿ ಬಲಿದಾನ ಮಾಡು ಸೈನಿಕರಿಗೆ ಪ್ರತಿಯೊಬ್ಬರೂ ತಮ್ಮ ಕೃತಜ್ಞತೆ ಸಲ್ಲಿಸಬೇಕಿದೆ. ಸಮರದಲ್ಲಿ ಬಲಿಯಾದ ಯೋಧರಷ್ಟೆ ಗಾಯಾಳುಗಳೂ ಸಮಾನವಾಗಿ ಹೋರಾಟದಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ದೇಶದ ಜನರು ನೆರವಾಗಬೇಕು ಎಂದು ಹೇಳಿದರು.
ನಗರಸಭೆ ಸದಸ್ಯ ಹನುಮಂತ ತಳವಾರ, ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಎಂಜಿನಿಯರ್ ಸಂಪತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ ಸ್ವಾಗತಿಸಿದರು. ಶಿಕ್ಷಕ ಗಣೇಶ್ ಬಿಷ್ಟಣ್ಣನವರ ವಂದಿಸಿದರು.