ಭಟ್ಕಳ: ಇಲ್ಲಿನ ತಾಲೂಕಾ ಕಚೇರಿಯ ಆವರಣದಲ್ಲಿ ಅಕ್ಟೋಬರ್ ತಿಂಗಳ ಸೂಸಗಡಿ ಹೋಬಳಿ ಮಟ್ಟದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವು ಸಹಾಯಕ ಆಯುಕ್ತ ಸಾಜಿದ್ ಅಹಮ್ಮದ್ ಮುಲ್ಲಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಸುಮಾರು 25 ಫಲಾನುಭವಿಗಳಿಗೆ ವಿವಿಧ ಯೋಜನೆಯಡಿಯಲ್ಲಿ ಮಂಜೂರಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತ ಸಾಜಿದ್ ಅಹಮ್ಮದ್ ಮುಲ್ಲಾ ಅವರು ಸರಕಾರದ ಯೋಜನೆಗಳು ಬಡವರಿಗೆ ನೇರವಾಗಿ ತಲುಪಬೇಕು ಎನ್ನುವುದು ಈ ಅದಾಲತ್ನ ಉದ್ದೇಶವಾಗಿದ್ದು ಹೆಚ್ಚು ಹೆಚ್ಜು ಜನರಿಗೆ ತಲುಪಬೇಕು ಎನ್ನುವುದು ಕೂಡಾ ಆಶಯವಾಗಿದೆ. ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳು ಬಡ ಜನತೆಗೆ ಸರಕಾರದ ಸಹಾಯವನ್ನು ತಲುಪಿಸಲು ಸದಾ ಸಹಾಯ ಮಾಡಬೇಕು ಎಂದೂ ಕರೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ಆಶಕ್ತ ಅಂಗವಿಕಲರೋರ್ವರಿಗೆ ಸ್ಥಳದಲ್ಲಿಯೇ ಮಾಶಾಶನ ಮಂಜೂರು ಮಾಡುವಂತೆ ಆದೇಶಿಸಿ ಮಾನವೀಯತೆಯನ್ನು ಮೆರೆದ ಅವರು ಇಂತಹ ಬಡವರು ಅಶಕ್ತರು ಕಚೇರಿಗೆ ಬಂದಾಗ ಮಾನವೀಯತೆಯಿಂದ ವರ್ತಿಸಿ ಎಂದೂ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿ.ಎನ್.ಬಾಡಕರ್, ವೃತ್ತ ನಿರೀಕ್ಷಕ ಗಣಪತಿ ಮೇತ್ರಿ, ಕಚೇರಿ ಸಿಬ್ಬಂದಿ ವಿಶ್ವನಾಥ ಕರಡೆ, ಶೀಲಾ, ಗ್ರಾಮ ಲೆಕ್ಕಾಧಿಕಾರಿಗಳಾದ ಶಂಭು ಕೆ., ಅಣ್ಣಯ್ಯ, ವಿಶ್ವನಾಥ ಗಾಂವಕರ್, ಹೇಮಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.