• ಅಕ್ರಮ ಗಡಿ ಪ್ರವೇಶ ಆರೋಪದಡಿ ಬಂಧಿತರಿಂದ ಉ.ಕ.ಜಿಲ್ಲೆಯ ಮೀನುಗಾರರಿಂದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರಿಗೆ ವಿಡಿಯೋ ಮೂಲಕ ಮನವಿ
ಭಟ್ಕಳ: ಅನ್ನ ಅರಸಿ ದೂರದ ದುಬೈಗೆ ಪ್ರಯಾಣ ಬೆಳಿಸಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ ಹೊನ್ನಾವರ ತಾಲೂಕಿನ ಸುಮಾರು 18 ಮಂದಿ ಮೀನುಗಾರರು ಅಕ್ರಮ ಗಡಿ ಪ್ರವೇಶದ ಆರೋಪದಡಿ ಕಳೆದ ನಾಲ್ಕು ತಿಂಗಳಿಂದ ಇರಾನ್ ಗಡಿಯ ಸಮುದ್ರದ ಬೋಟೊಂದರಲ್ಲಿ ಗೃಹಬಂಧನಕ್ಕೊಳಕಾಗಿ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿದ್ದು ತಮ್ಮ ಬಿಡುಗಡೆಗಾಗಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರ ಮೊರೆ ಹೋಗಿದ್ದು ವಿಡೀಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಭಟ್ಕಳ ತಾಲೂಕಿನ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ತೆಂಗಿನಗುಂಡಿ ಗ್ರಾಮದ ನಿವಾಸಿ ಉಸ್ಮಾನ್ ಇಸ್ಹಾಖ್ ಬೊಂಬಾಯಿಕರ್ ಎನ್ನುವವರು ತಮ್ಮ ಸಹವರ್ತಿಗಳೊಂದಿಗೆ ಸೇರಿ ಬೋಟ್ ನಲ್ಲಿಯೇ ವಿಡಿಯೋ ಚಿತ್ರಿಕರಣ ಮಾಡಿದ್ದು ಅಕ್ಟೋಬರ್ 11 ರಂದು ನಮ್ಮನ್ನು ಬಿಡುಗಡೆಗೊಳಿಸಿವಂತೆ ಕೋರಿ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀ ಸಂಸ್ಥೆಯು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರಿಗೆ ಮನವಿ ಮಾಡಿಕೊಂಡಿದ್ದು ಅದರ ಪ್ರಯೋಜನವಾಗದೆ ಕಳೆದ ನಾಲ್ಕು ತಿಂಗಳಿಂದಲೂ ನಾವು ಗೃಹಬಂಧನದಲ್ಲಿದ್ದೇವೆ. ಮಾನ್ಯ ಸಚಿವರು ಹಲವು ಬಾರಿ ತೊಂದರೆಗೆ ಸಿಲುಕಿದವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂಧಿಸಿದ್ದಾರೆ. ಈಗ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಮ್ಮನ್ನು ಕಷ್ಟದಿಂದ ಪಾರು ಮಡುತ್ತಾರೆಂಬ ವಿಶ್ವಾಸ ನಮಗಿದೆ ಎಂದು ವಿಡೀಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ದುಬೈಯಲ್ಲಿ ಮೀನುಗಾರಿಕೆಯೇ ಅವರ ಪ್ರಮುಖ ಕಸುಬಾಗಿದ್ದು ಅಲ್ಲಿಯ ನಿವಾಸಿಗಳ ಪ್ರಯೋಜಕತ್ವದಲ್ಲಿ ತಿಂಗಳುಗಟ್ಟಲೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ. ಆದರೆ 4 ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ತಂಡವನ್ನು ಅರಬ್ಬಿ ಸಮುದ್ರದ ದುಬೈ ಗಡಿಯಲ್ಲಿ ಇರಾನಿ ನೌಕಪಡೆ ಅಧಿಕಾರಿಗಳು ಅಕ್ರಮ ಗಡಿಪ್ರವೇಶ ಮಾಡಿದ್ದಾರೆಂದು ಆರೋಪಿಸಿ ಗೃಹಬಂಧನದಲ್ಲಿರಿಸಿದೆ.
ರಾಜ್ಯ ಸರ್ಕಾರ ಅವರನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ತಂಝೀಮ್ ಸಂಸ್ಥೆ ಒತ್ತಾಯಿಸಿದ್ದು, ಮೀನುಗಾರರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕೆಂದು ವಿದೇಶಾಂಗ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಂಧನಕ್ಕೊಳಗಾದವರು ಭಾರತ ಸರಕಾರದ ಸಹಾಯ ಯಾಚಿಸುತ್ತಿದ್ದು, ತಮ್ಮ ಬಗ್ಗೆ ಕೇಂದ್ರ ಸರಕಾರ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬಂಧಿತರಲ್ಲಿ ಭಟ್ಕಳದ ಖಲೀಲ್ ಇಸ್ಮಾಯಿಲ್ ಪಾನಿಬುಡೋ, ಉಸ್ಮಾನ್ ಇಸ್ಹಾಖ್ ಪಾನಿಬುಡೊ, ಮುಹಮ್ಮದ್ ಷರೀಫ್ ಬಾಪು ಸಾಬ್, ಅಬ್ದುಲ್ಲಾ ಸುಲೈಮಾನ್ ಡಾಂಗಿ, ಅತೀಖ್ ಸುಲೈಮಾನ್ ಘಾರು ಜಾಫರ್ ಇಬ್ರಾಹಿಮ್ ತಡ್ಲಿಕರ್, ಹೊನ್ನಾವರ ತಾಲುಕಿ ಮಂಕಿಯ ನಿವಾಸಿ ಮತ್ಲೂಬ್ ಮಕ್ದೂಮ್ ಸಾರಂಗ್, ಕುವiಟಾ ತಾಲೂಕಿನ ವನ್ನಳ್ಳಿ ಗ್ರಾಮದ ಇಬ್ರಾಹೀಮ್ ಮುಲ್ಲಾ ಫಕಿರಾ, ಮುಹಮ್ಮದ್ ಅನ್ಸಾರ್ ಬಾಪು, ನಯೀಮ್ ಹಸನ್ ಭಾಂಡಿ, ಯಾಖೂಬ್ ಇಸ್ಮಾಯಿಲ್ ಶಮಾಲಿ, ಅಜ್ಮಲ್ ಮೂಸಾ ಶಮಾಲಿ, ಹುಬ್ಬನಗೇರಿಯ ನಿವಾಸಿ ಇಲ್ಯಾಸ್ ಅಂಬಾಡಿ, ಆಗಕರ್ಕೋಣ ನಿವಾಸಿ ಖಾಸಿಮ್ ಶೇಖ್, ಬೆಟ್ಕುಳಿ ನಿವಾಸಿ ಇಲ್ಯಾಸ್ ಘಾರು, ಕುಮಟಾ ನಿವಾಸಿ ಇಬ್ರಾಹಿಂ ಆಹ್ಮದ್ ಹೂಡೆಕರ್, ಉಡುಪಿ ಜಿಲ್ಲೆಯ ಶಿರೂರು ನಿವಾಸಿ ಅಬ್ದುಲ್ ಮುಹಮ್ಮದ್ ಹುಸೈನ್ ಸೇರಿದ್ದಾರೆ.
ಈ ಕುರಿತಂತೆ ಸಾಹಿಲ್ ಆನ್ಲೈನ್ ನೊಂದಿಗೆ ಮಾತನಾಡಿದ ಗೃಹಬಂಧನದಲ್ಲಿರುವ ಉಸ್ಮಾನ್ ಬೊಂಬಾಯಿಕರ್ ರ ತಾಯಿ ಬೀಬಿ ಆಯಿಶಾ, ದುಡಿದು ಕುಟುಂಬದ ಹೊರೆಯನ್ನು ಹೊತ್ತ ಮಗನು ಕಳೆದ ನಾಲ್ಕು ತಿಂಗಳಿಂದ ತಾನು ಮಾಡದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ನನ್ನ ಪತಿ ತೀರಿಕೊಂಡ ಬಳಿಕ ಕುಟುಂಬವನ್ನು ಸಾಕುವ ಹೊಣೆಗಾರಿಕೆ ಹೊತ್ತು ದುಬೈಗೆ ಹೋಗಿರುವ ಉಸ್ಮಾನ್ಗೆ ಈ ಸ್ಥಿತಿ ಬಂದೊದಗಿರುವುದು ನಮ್ಮ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದೆ. ಪತ್ನಿ, ಇಬ್ಬರು ಮಕ್ಕಳು ಹಾಗೂ ಇಬ್ಬರು ಸಹೋದರರು ಸೇರಿ 6 ಮಂದಿ ಇರುವ ಕುಟುಂಬವನ್ನು ಕಳೆದ ನಾಲ್ಕು ತಿಂಗಳಿಂದ ಒಂದು ನಯಪೈಸೆ ಇಲ್ಲದೆ ಬದುಕು ಸಾಕುವಂತಾಗಿದೆ. ಮೊದಲೆ ಬಡತನದಲ್ಲಿ ದಿನದೂಡುತ್ತಿರುವ ನಮಗೆ ಈಗ ನಾಲ್ಕು ತಿಂಗಳಿಂದ ಆತ ನಮಗೆ ಒಂದು ಪೈಸೆಯು ಕಳುಹಿಸಿಲ್ಲ. ಹೀಗಾದರೆ ನಮ್ಮ ಗತಿಯೇನು ಎಂದು ಕಣ್ಣೀರು ಸುರಿಸಿದ್ದಾರೆ.